ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ, ಸಿಂದಗಿ ಇವರ ಆಶ್ರಯದಲ್ಲಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಸ್ವ-ಉದ್ಯೋಗ ಮತ್ತು ಮನೆಮದ್ದುಗಳ ಕುರಿತು ತರಬೇತಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ್ ಸಂತೋಷ್ ರವರು ಮಹಿಳೆಯರು ಸಮಾಜದಲ್ಲಿ ಗೌರವಯುತ ಹಾಗೂ ಸ್ವಾವಲಂಬಿ ಜೀವನ ನಡೆಸಲು ಆರ್ಥಿಕ ಸ್ವಾತಂತ್ರ್ಯ ಅತ್ಯವಶ್ಯಕವೆಂದು ತಿಳಿಸಿ, ಸ್ವ-ಉದ್ಯೋಗದತ್ತ ಮುಂದಾಗುವ ಮೂಲಕ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಮತಿ ಶೈಲಜಾ ಸ್ಥಾವರಮಠ, ಅಧ್ಯಕ್ಷರು, ಮಾತೋಶ್ರೀ ಸೌಹಾರ್ದ ಬ್ಯಾಂಕ್, ಸಿಂದಗಿ ಅವರು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಸ್ವ-ಉದ್ಯೋಗದ ಮಹತ್ವ, ಸಣ್ಣ ಉದ್ಯಮ ಆರಂಭಿಸುವ ವಿಧಾನಗಳು, ಬ್ಯಾಂಕ್ ಸಹಕಾರ, ಉಳಿತಾಯ ಮತ್ತು ಸಾಲ ಸೌಲಭ್ಯಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಿಸ್ಟರ್ ಸಿಂತಿಯಾ, ಸಹ ನಿರ್ದೇಶಕರು, ಸಂಗಮ ಸಂಸ್ಥೆ, ಸಿಂದಗಿ ಅವರು ಮನೆಮದ್ದುಗಳ ಮಹತ್ವವನ್ನು ವಿವರಿಸಿ, ದಿನನಿತ್ಯದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಲಭ್ಯವಿರುವ ನೈಸರ್ಗಿಕ ಪದಾರ್ಥಗಳಿಂದ ಸರಳವಾಗಿ ಚಿಕಿತ್ಸೆ ಪಡೆಯುವ ವಿಧಾನಗಳನ್ನು ಉದಾಹರಣೆಗಳೊಂದಿಗೆ ವಿಸ್ತಾರವಾಗಿ ತಿಳಿಸಿದರು. ಜೊತೆಗೆ ನೈಸರ್ಗಿಕ ಹಾಗೂ ಆರೋಗ್ಯಕರ ಜೀವನಶೈಲಿ ಅನುಸರಿಸುವ ಅಗತ್ಯತೆಯನ್ನೂಒತ್ತಿ ಹೇಳಿದರು.
ಶ್ರೀಮತಿ ಶೈಲಾ ಸಂಗಮ, ಅಧ್ಯಕ್ಷರು, ಸ್ಪೂರ್ತಿ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ, ಸಿಂದಗಿ ಅವರು ಮಹಿಳೆಯರು ಸಂಘಟಿತರಾಗಿ ಕೆಲಸ ಮಾಡುವುದರಿಂದ ಸ್ವ-ಉದ್ಯೋಗದಲ್ಲಿ ಯಶಸ್ಸು ಸಾಧಿಸಬಹುದೆಂದು ತಿಳಿಸಿ, ಸ್ವಾವಲಂಬನೆಯತ್ತ ಮುನ್ನಡೆಯಲು ಪ್ರೇರೇಪಿಸಿದರು.
ಬಸವರಾಜ ಬಿಸನಾಳರವರು ನಿರೂಪಿಸಿದರು, ಶ್ರೀಮತಿ ತೇಜಸ್ವಿನಿ ಹಳ್ಳದಕೇರಿಯವರು ಸ್ವಾಗತಿಸಿದರು ಮತ್ತು ವಿಜಯ್ ಭಂಟನೂರುರವರು ವಂದಿಸಿದರು. ತರಬೇತಿಯಲ್ಲಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದರು.

