ಸಿಂದಗಿ: ಬದುಕಿನ ಸಾಧನೆಗೆ ಸ್ಫೂರ್ತಿ, ಕುಟುಂಬದ ಶಕ್ತಿ, ಎಲ್ಲರ ಬದುಕಿನಲ್ಲೂ ಪ್ರಮುಖ ಸ್ಥಾನ ಪಡೆದವಳು ಸ್ತ್ರೀ. ಮಹಿಳೆ ಇಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದು ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕಿ ಸುನಂದಾ ತೋಳಬಂದಿ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಕಾಲಘಟ್ಟದಲ್ಲಿ ಮಹಿಳೆ ತನಗಿರುವ ಹಲವಾರು ಸಮಸ್ಯೆಗಳನ್ನು ಮೆಟ್ಟಿ ನಿಂತು ಬಹುತೇಕ ರಂಗದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಅಡುಗೆ ಮನೆಯಿಂದ ಅಂತರಿಕ್ಷ ಯಾನದವರೆಗೂ ತನ್ನ ಕದಂಬ ಬಾಹುಗಳನ್ನು ವಿಸ್ತರಿಸಿಕೊಂಡಿರುವ ಈಕೆ ದೌರ್ಜನ್ಯ, ದಬ್ಬಾಳಿಕೆ, ಹಿಂಸೆಯಂತಹ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಹಲವಾರು ಕ್ಷೇತ್ರಗಳಲ್ಲಿ ಪುರುಷರಷ್ಟೇ ಸರಿಸಮಾನವಾಗಿ ಮುನ್ನುಗ್ಗುತ್ತಿದ್ದಾಳೆ. ಕ್ರೀಡೆಯಲ್ಲಿ, ಸೈನ್ಯದಲ್ಲಿ, ಬಾಹ್ಯಾಕಾಶದಲ್ಲಿ, ಯುದ್ಧ ವಿಮಾನಗಳಲ್ಲಿ ಮಹಿಳೆ ಮಹತ್ತರ ಸಾಧನೆ ಮಾಡಿದ್ದಾಳೆ. ಯಾವ ಪುರುಷರಿಗೂ ತಾನು ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾಳೆ. ಪುರುಷ ಸಮಾಜ ಮಹಿಳೆಯನ್ನು ಗೌರವಿಸುವ ಗುಣ ಇನ್ನೂ ಹೆಚ್ಚಿಸಿಕೊಳ್ಳಬೇಕಾಗಿದೆ. ಮಹಿಳೆಯೂ ತಾನು ಆರ್ಥಿಕ ಸಬಲಳು, ಪುರುಷನಷ್ಟೆ ತನಗೂ ಸಾಮಾಜಿಕ ಸ್ಥಾನಮಾನ ಇದೆ ಎನ್ನುವ ಹೆಮ್ಮೆಯ ಜೊತೆಗೆ ಕೌಟುಂಬಿಕ ಜವಾಬ್ದಾರಿಯ ಬದ್ಧತೆಯನ್ನೂ ನಿಭಾಯಿಸುವವಲ್ಲಿ ಹಿಂದುಳಿಯಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಲಲಿತಾ ಭೂಸನೂರ ಮಾತನಾಡಿ, ಮಹಿಳಾ ದಿನವನ್ನು ಬರೀ ಒಂದು ದಿನಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಪ್ರತಿದಿನವೂ ಮಹಿಳಾ ದಿನವೇ. ಎಲ್ಲರ ಬದುಕಿನಲ್ಲೂ ಪ್ರತಿದಿನ ಮಹಿಳೆ ತೋರುವ ಅಕ್ಕರೆ, ನಿಭಾಯಿಸುವ ಜವಾಬ್ದಾರಿ, ಕುಟುಂಬಕ್ಕಾಗಿ ವಹಿಸುವ ಶ್ರಮ ಪ್ರತಿಯೊಬ್ಬರಿಗೂ ಗೊತ್ತಿದೆ. ಹೀಗಾಗಿ, ಒಂದು ದಿನ ಅವರಿಗಾಗಿ ಮೀಸಲಿಟ್ಟು ಎಲ್ಲರೂ ಮಹಿಳೆಯರಿಗೆ ಧನ್ಯವಾದ ಹೇಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ಅಬಕಾರಿ ಠಾಣಾಧಿಕಾರಿ ಆರತಿ ಖೈನೂರ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶಿವಲೀಲಾ ಕೊಣ್ಣೂರ, ನಾಗರತ್ನ ಮನಗೂಳಿ, ಶಿಲ್ಪಾ ಕುದರಗೊಂಡ ಮಾತನಾಡಿದರು.
ಅಲಮೇಲ ಬ್ರಹ್ಮಾಕುಮಾರಿ ಸೇವಾ ಕೇಂದ್ರದ ಸಂಚಾಲಕಿ ರೇಣುಕಾ ಅಕ್ಕನವರು ಸಾನ್ನಿಧ್ಯ ವಹಿಸಿದ್ದರು. ರಾಜಯೋಗಿನಿ ಬ್ರಹ್ಮಾಕುಮಾರಿ ಪವಿತ್ರಾ ಅಕ್ಕನವರು ಸ್ವಾಗತಿಸಿದರು. ಪ್ರೊ ಬಿ.ಜಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ತಾ ಪಂ ಅಧಿಕಾರಿ ಎಸ್ ಎಸ್ ಬುಳ್ಳಾ ವಂದಿಸಿದರು.
ಈ ಸಂದರ್ಭದಲ್ಲಿ ಕೆ ಎಸ್ ಪತ್ತಾರ, ವಿಜಯಕುಮಾರ ತೇಲಿ, ತಾನಾಜಿ ಕನಸೆ, ಸೀಮಾ ಉಡಚಣ ಪ್ರಮೀಳಾ ಪಾಟೀಲ, ಐಶ್ವರ್ಯ, ನಾಗಮ್ಮ, ವರ್ಷಾ ಪಾಟೀಲ, ಶಿಲ್ಪಾ ಪತ್ತಾರ ಮಲ್ಲಪ್ಪ ಡೊನೂರ, ಮಹಾದೇವಿ ಕರಲಗಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.