ಬೀದರ – ಬೀದರ್ ನಲ್ಲಿ ಸಂಜೆ ಸುರಿದ ಧಾರಾಕಾರ ಮಳೆಗೆ ಔರಾದ್ ತಾಲೂಕಿನಲ್ಲಿ ಅವಾಂತರ ಸೃಷ್ಟಿಯಾಗಿದೆ. ಔರಾದ್ ತಾಲೂಕಿನ ಚಟ್ನಾಳ ಟು ಹೆಡಗಾಪೂರ್ ಸಂಪರ್ಕ ಕಡಿತವಾಗಿದ್ದು ಕೃಷಿ ಚಟುವಟಿಕೆಗಾಗಿ ಹೊಲಗಳಿಗೆ ಹೋಗಿದ್ದ ರೈತರು ಹಳ್ಳದಾಟಲು ಹರಸಾಹಸ ಪಡುತ್ತಿದ್ದಾರೆ.
ಹಗ್ಗದ ಸಹಾಯದಿಂದ ಒಬ್ಬರ ಕೈ ಮತ್ತೊಬ್ಬರು ಹಿಡಿದು ರೈತರು ಹಾಗೂ ರೈತ ಮಹಿಳೆಯರು ಜೀವ ಕೈಯಲ್ಲಿ ಹಿಡಿದು ಹಳ್ಳದಾಟುತ್ತಿರುವ ದೃಶ್ಯಗಳು ಭಯಂಕರವಾಗಿದೆ.
ಸ್ವಲ್ಪ ಆಯ ತಪ್ಪಿದರೂ ಜೀವಕ್ಕೇ ಕುತ್ತಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಬೆಳಗ್ಗೆ ಮಳೆ ಬಿಡುವು ನೀಡಿದ್ದ ಕಾರಣ ಕೃಷಿ ಚಟುವಟಿಕೆಗಳಿಗಾಗಿ ಜಮೀನುಗಳಿಗೆ ಹೋಗಿದ್ದ ರೈತರು ಸಂಜೆ ಸುರಿದ ಧಾರಾಕಾರ ಮಳೆಗೆ ತುಂಬಿದ ಹಳ್ಳ ದಾಟಲು ಹರಸಾಹಸ ಪಟ್ಟರು.
ಈ ಸ್ಥಳದಲ್ಲಿ ಶಾಶ್ವತ ಸೇತುವೆ ನಿರ್ಮಾಣ ಮಾಡಿ ಎಂದು ಸ್ಥಳೀಯ ಶಾಸಕ ಪ್ರಭು ಚವ್ಹಾಣ್ ಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದರೂ ಇನ್ನೂ ಸೇತುವೆ ನಿರ್ಮಾಣ ಮಾಡದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸುವ ಮಳೆ ಒಂದು ಕಡೆಯಾದರೆ ಹೊಲಗದ್ದೆಗಳಿಗೆ ಹೋಗಬೇಕಾದರೆ ಜೀವವನ್ನು ಮುಷ್ಠಿಯಲ್ಲಿ ಹಿಡಿದುಕೊಂಡು ಹೋಗಬೇಕಾದ ಸ್ಥಿತಿ ಇನ್ನೊಂದು ಕಡೆಯಿದ್ದು ಶಾಸಕರು, ಜನಪ್ರತಿನಿಧಿಗಳು ಇತ್ತ ಕಡೆ ಕಣ್ಣು ಹಾಯಿಸಬೇಕಾದ ಅಗತ್ಯವಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ