ಸವದತ್ತಿ: ಇಂದಿನ ಸ್ಪರ್ಧಾತ್ಮಕ ಸಂವಹನ ಕೌಶಲ್ಯ ಹಾಗೂ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಬಹಳ ಅವಶ್ಯಕ. ಏಕೆಂದರೆ ಮಾಹಿತಿ ತಂತ್ರಜ್ಞಾನದಂತಹ ಇಂದಿನ ದಿನಗಳಲ್ಲಿ ಕಂಪ್ಯೂಟರ್ ಜ್ಞಾನವೂ ಕೂಡ ಮುಖ್ಯವಾಗಿದೆ ಎಂದು ಪುಣೆಯ ರುಬಿಕಾನ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಸಂಜೀವ್ ಪತ್ತಾರ ನುಡಿದರು.
ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ಉದ್ಯೋಗ ಘಟಕ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಏರ್ಪಡಿಸಿದ ಮೂರು ದಿನಗಳ ವ್ಯಕ್ತಿತ್ವ ವಿಕಸನ ಮತ್ತು ಔದ್ಯೋಗಿಕ ಕೌಶಲ್ಯ ಎನ್ನುವ ಮೂರು ದಿನಗಳ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳಲ್ಲಿ ಮಾತನಾಡುವ ಕಲೆ, ಸಂದರ್ಶನ ಎದುರಿಸುವ ಕೌಶಲ್ಯ, ಅಭಿವ್ಯಕ್ತಿ ಸಾಮರ್ಥ್ಯ ಬರವಣಿಗೆಯ ಕೌಶಲ್ಯ, ಗುಂಪು ಚರ್ಚೆ, ನಾಯಕತ್ವ ಗುಣ, ಸಂಘಟನಾ ಚತುರತೆ, ಸಮನ್ವಯ ಸಾಮರ್ಥ್ಯದಂತಹ ಗುಣಗಳನ್ನು ಗಳಿಸಿಕೊಂಡಾಗ ಮಾತ್ರ ಸಾಧನೆ ನಿಮ್ಮದಾಗುತ್ತದೆ ಎಂದರು.
ಮೂರು ದಿನಗಳ ಈ ಕಾರ್ಯಾಗಾರದಲ್ಲಿ ಸಂಘಟನೆಯ ರಚನೆ, ಗುಂಪು ಚರ್ಚೆ, ಸಾರ್ವಜನಿಕ ಭಾಷಣ, ದೇಹ ಭಾಷೆ, ವೈಯಕ್ತಿಕ ಸಂದರ್ಶನ, ದೂರವಾಣಿಯಲ್ಲಿ ಮಾತನಾಡುವ ಕೌಶಲ್ಯ, ಅಣಕು ಸಂದರ್ಶನ, ಇಮೇಲ್ ಶಿಷ್ಟಾಚಾರ ಮುಂತಾದ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಮಾಡಿಸುವ ಮೂಲಕ ಮನದಟ್ಟು ಮಾಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಮಾರುತಿ ಎ. ಡೊಂಬರ ವಹಿಸಿದ್ದರು, ಶಾಂಭವಿ ಬಡಿಗೇರ ಪ್ರಾರ್ಥಿಸಿದರು, ಪ್ರಿಯಾಂಕ ಗಡೇಕರ ಸ್ವಾಗತಿಸಿದರು, ಉದ್ಯೋಗ ಘಟಕದ ಸಂಯೋಜಕರಾದ ಪ್ರೊ. ವಿಜಯಕುಮಾರ ಮೀಶಿ ಅತಿಥಿಗಳನ್ನು ಪರಿಚಯಿಸಿದರು. ವೇದಿಕೆ ಮೇಲೆ ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ.ಅರುಂಧತಿ ಬದಾಮಿ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಎ.ಎ.ಹಳ್ಳೂರ ಉಪಸ್ಥಿತರಿದ್ದರು. ಅಕ್ಷತಾ ಹಳ್ಳೆಣ್ಣವರ ವಂದಿಸಿದರು, ಪಲ್ಲವಿ ಶಿಗ್ಲಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಸಿಬ್ಬಂದಿ ಉಪಸ್ಥಿತರಿದ್ದರು.