ಸಂಕೇಶ್ವರ: ಜಗತ್ತಿನಲ್ಲಿ ಅತೀ ಹೆಚ್ಚು ಚರ್ಚೆಗೊಳಪಟ್ಟ ಜೀವಿಯೆಂದರೆ ಹೆಣ್ಣು. ಸ್ಪರ್ಧಾತ್ಮಕ ಲೋಕಕ್ಕೆ ಮಹಿಳೆಯರು ಸಾಕಷ್ಟು ಸ್ಪಂದಿಸುತ್ತಿದ್ದಾರೆ. ಗ್ರಾಮೀಣ ಮಹಿಳೆಯರ ಬದುಕು ಸಾಕಷ್ಟು ಬದಲಾವಣೆ ಆಗಿದೆ. ಆಗಬೇಕಾದ ಪ್ರಗತಿ ಇನ್ನೂ ಬಹಳಷ್ಟಿದೆ. ನಾರಿಯರ ಸ್ವಾವಲಂಬಿ ಬದುಕಿಗೆ ಸಮಾಜ ಕೈ ಜೋಡಿಸಬೇಕಿದೆ ಎಂದು ಹಿರೇಬಾಗೇವಾಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಜಯಶ್ರೀ ಅಬ್ಬಿಗೇರಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ಅವರು ಸಂಕೇಶ್ವರದ ಎಸ್.ಡಿ.ವ್ಹಿ.ಎಸ್.ಶಿಕ್ಷಣ ಸಂಸ್ಥೆಯ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದರು.
ಸಾಧನೆಗೆ ಸಾಕಷ್ಟು ದಾರಿಗಳಿವೆ ಛಲದಿಂದ ಅವುಗಳ ಬೆನ್ನು ಹತ್ತಬೇಕು ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮೀನಾಕ್ಷಿ. ಅ. ಪಾಟೀಲ ಅವರು ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರ ತುಂಬಾ ಹಿರಿದಾಗಿದೆ. ಘನತೆ ಗೌರವವನ್ನು ಹೆಚ್ಚಿಸಿಕೊಂಡು ಬಾಳುವುದು ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತನ್ನು ಹೇಳಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ ಶೀಲಾ ಪೋತದಾರ.(ವೈದ್ಯಕೀಯ) ಉದ್ಯಮಿ ದಾನೇಶ್ವರಿ ಹಿಡದುಗ್ಗಿ ಜಯಶ್ರೀ ಅಬ್ಬಿಗೇರಿ. (ಸಾಹಿತ್ಯ) ಹೇಮಲತಾ.ಜಿ.ಇಂಡಿ. ಶೋಭಾ ಡಿ ಕೇಸ್ತಿ. ಶೋಭಾ ಆರ್ ಪಾಟೀಲ ಇವರನ್ನು ಸನ್ಮಾನಿಸಲಾಯಿತು.
ಡಾ: ಶೀಲಾ ಪೋತದಾರ ಆರೋಗ್ಯದ ಮಹತ್ವದ ಕುರಿತಾಗಿ ಮಾತನಾಡಿದರು. ಡಾ:ವಿಜಯಮಾಲಾ ನಾಗನೂರಿ ಸ್ವಾಗತಿಸಿದರು. ಪ್ರೋ: ಮಹಾನಂದಾ ವಂದಿಸಿದರು. ಪ್ರಾಚಾರ್ಯ ಪಿ.ಎಸ್ ಮನೋಳಿ, ಖೋತ ಕಾಲೇಜಿನ ಪ್ರಾಚಾರ್ಯರಾದ ಡಾ ಮಡಿವಾಳಪ್ಪಗೋಳ, ಮಹಿಳಾ ವೇದಿಕೆಯ ಅಧ್ಯಕ್ಷ ವ್ಹಿ. ಎ. ಯಡಳ್ಳಿ ಮತ್ತು ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.