ಗೋಕಾಕ : ಖ್ಯಾತ ಪತ್ರಕರ್ತ, ಸಾಹಿತಿ, ಲೇಖಕ, ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರ ನಿಧನಕ್ಕೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇಯಾದ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ ಬೆಳಗೆರೆ ಅವರ ನಿಧನದಿಂದ ನಾಡಿಗೆ ಅಪಾರ ನಷ್ಟವಾಗಿದೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ದುಡಿದು ನಂತರ ವಾರ ಪತ್ರಿಕೆಯ ಮೂಲಕ ದಿಟ್ಟ ಪತ್ರಕರ್ತರಾಗಿ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದ ಅವರ ನಿಧನದಿಂದ ಅವರ ಕುಟುಂಬದಲ್ಲಾದ ದುಃಖದಲ್ಲಿ ನಾವು ಸಹಭಾಗಿಯಾಗಿ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲೆಂದು ಪ್ರಾರ್ಥಿಸುವುದಾಗಿ ಸಂತಾಪದಲ್ಲಿ ಅವರು ತಿಳಿಸಿದ್ದಾರೆ.
‘ಹಾಯ್ ಬೆಂಗಳೂರು’ ವಾರ ಪತ್ರಿಕೆಯ ಮೂಲಕ ನಾಡಿನ ಮೂಲೆ ಮೂಲೆಗಳಲ್ಲೂ ಅಪಾರ ಓದುಗರನ್ನು, ಅಭಿಮಾನಿಗಳನ್ನು ಸಂಪಾದಿಸಿದ್ದ ಬೆಳಗೆರೆ ಅವರು ನೇರ ದಿಟ್ಟ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದರು. ಬಾಟಮ್ ಐಟಮ್, ಖಾಸ್ ಬಾತ್, ಪಾಪಿಗಳ ಲೋಕದಲ್ಲಿ ಮುಂತಾದವು ಸೂರೆಗೊಂಡವು.
‘ಓ ಮನಸೇ’ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಅವರು, ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಮನೆ ಮಾತಾಗಿದ್ದರು. ಸಾಹಿತಿ, ಲೇಖಕ, ಟಿವ್ಹಿ ನಿರೂಪಕ, ಪತ್ರಿಕೆಗಳ ಅಂಕಣಕಾರ, ಕಾದಂಬರಿಕಾರರಾಗಿ ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದರು ಎಂದು ಅವರು ಹೇಳಿದ್ದಾರೆ.
ದೀಪಾವಳಿ ಆಚರಣೆಯ ಈ ಸಂದರ್ಭದಲ್ಲಿ ರವಿ ಬೆಳೆಗೆರೆ ಅವರು ಅಗಲಿರುವುದು ದುಃಖವನ್ನುಂಟು ಮಾಡಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.