Homeಸುದ್ದಿಗಳುಚನ್ನಮ್ಮಳ ಧೈರ್ಯ ಸ್ಥೈರ್ಯವನ್ನು ವಿದ್ಯಾರ್ಥಿಗಳು ಆದರ್ಶವಾಗಿಟ್ಟುಕೊಳ್ಳಬೇಕು: ಡಾ. ರು. ಮ. ಷಡಕ್ಷರಯ್ಯ

ಚನ್ನಮ್ಮಳ ಧೈರ್ಯ ಸ್ಥೈರ್ಯವನ್ನು ವಿದ್ಯಾರ್ಥಿಗಳು ಆದರ್ಶವಾಗಿಟ್ಟುಕೊಳ್ಳಬೇಕು: ಡಾ. ರು. ಮ. ಷಡಕ್ಷರಯ್ಯ

ಕಲ್ಲೋಳಿ: ಕಿತ್ತೂರು ರಾಣಿ ಚನ್ನಮ್ಮಳ ಧೈರ್ಯ ಸ್ಥೈರ್ಯಗಳನ್ನು ಇಂದಿನ ಯುವ ಜನಾಂಗ ಆದರ್ಶವಾಗಿಟ್ಟುಕೊಳ್ಳಬೇಕು. ದೇಶಭಕ್ತಿ, ರಾಷ್ಟ್ರಪ್ರೇಮದಂಥ ಮೌಲ್ಯಗಳನ್ನು ಜಾಗೃತವಾಗಿಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಡೆಯಬೇಕು. ಈ ಹಿನ್ನೆಲೆಯಲ್ಲಿ ಕಿತ್ತೂರು ಸಂಸ್ಥಾನದ ಚರಿತ್ರೆ ನಮಗೆ ಆದರ್ಶವಾಗಿದೆ ಎಂದು ಖ್ಯಾತ ಪುರಾತತ್ವ ವಿದ್ವಾಂಸರಾದ ಡಾ. ರು. ಮ. ಷಡಕ್ಷರಯ್ಯ ಅವರು ಅಭಿಪ್ರಾಯ ಪಟ್ಟರು.

ಅವರು ಬುಧವಾರ ದಿನಾಂಕ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜು ಕಲ್ಲೋಳಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ “ಕಿತ್ತೂರು ರಾಣಿ ಚನ್ನಮ್ಮ ಸಂಶೋಧನೆ ಮತ್ತು ಇತಿಹಾಸ ಮಂಡಳ : ತಲ್ಲೂರ ರಾಯನಗೌಡರ ಶೋಧಗಳು” ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಆಶಯ ಭಾಷಣ ಮಾಡುತ್ತಿದ್ದರು.

ತಲ್ಲೂರ ರಾಯನಗೌಡರು ಯುವಕರಿದ್ದಾಗ ಇಂಗ್ಲೆಂಡಿಗೆ ಹೋಗಿ ಕಿತ್ತೂರು ಸಂಸ್ಥಾನದ ದಾಖಲೆಗಳನ್ನು ಹುಡುಕಿ ತರುವ ಕಾರ್ಯ ಮಾಡಿದ್ದು ಶ್ಲಾಘನೀಯವಾಗಿದೆ ಎಂದರು.

ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಚೇರಮನ್ನರಾದ ಬಸಗೌಡ ಪಾಟೀಲ ಅವರು ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣರಂಥ ಧೀರೋದಾತ್ತರ ಜೀವನ ಚರಿತ್ರೆಗಳನ್ನು ಅರಿತುಕೊಳ್ಳಬೇಕು. ಅವರಂತೆ ಬದುಕುವುದನ್ನು ಕಲಿಯಬೇಕು ಎಂದು ಹೇಳಿದರು. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪನವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ ನೆನಪುಗಳನ್ನು ಸ್ಮರಿಸಿಕೊಂಡರು.

“ಕಿತ್ತೂರು ಶೋಧವೃಕ್ಷ “ಪುಸ್ತಕ ಲೋಕಾರ್ಪಣೆ ಡಾ. ರು. ಮ. ಷಡಕ್ಷರಯ್ಯ ಅವರಿಂದ.

ರಾಣಿ ಚನ್ನಮ್ಮ ಅಧ್ಯಯನ ಪೀಠದ ಮುಖ್ಯಸ್ಥರಾದ ಪ್ರೊ. ಎಸ್.ಎಂ.ಗಂಗಾಧರಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಕಿತ್ತೂರು ರಾಣಿ ಚನ್ನಮ್ಮ ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕೆ. ಬ್ರಿಟಿಷರೊಂದಿಗೆ ಹೋರಾಡಿದ್ದು ಅವಿಸ್ಮರಣೀಯ. ಸ್ವಾತಂತ್ರ್ಯ ಜ್ಯೋತಿ ಬೆಳಗಿಸಿದ ಚೆನ್ನಮ್ಮಳ ನಿಜವಾದ ಇತಿಹಾಸವನ್ನು ತಲ್ಲೂರು ರಾಯನಗೌಡರು ಶೋಧಿಸಿದ್ದು ಸ್ಮರಣೀಯ ಕಾರ್ಯವೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಣಿ ಚನ್ನಮ್ಮ ಅಧ್ಯಯನಪೀಠದ ಸಂಯೋಜಕರಾದ ಡಾ. ಶೋಭಾ ನಾಯಕ ಅವರು, ಅಧ್ಯಯನ ಪೀಠದ ವಾರ್ಷಿಕ ರೂಪರೇಷೆಗಳನ್ನು ತಿಳಿಸುತ್ತ ತಲ್ಲೂರ ರಾಯನಗೌಡರ ದಾಖಲೆಗಳು ಮುಂದಿನ ಪೀಳಿಗೆ ತಿಳಿದುಕೊಳ್ಳಲು ಅವುಗಳನ್ನು ದಾಖಲಿಸುವ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ ನಮ್ಮ ಪೀಠವು ‘ಕಿತ್ತೂರು ಶೋಧವೃಕ್ಷ’ ಎಂಬ ಪುಸ್ತಕವನ್ನು ಹೊರತಂದಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಸ್.ಎಂ. ಗಂಗಾಧರಯ್ಯ ಮತ್ತು ಶೋಭಾ ನಾಯಕ ಅವರು ಸಂಪಾದಿಸಿದ “ಕಿತ್ತೂರು ಶೋಧವೃಕ್ಷ” ಎಂಬ ಪುಸ್ತಕ ಲೋಕಾರ್ಪಣೆಗೊಂಡಿತು.

ಕಾರ್ಯಕ್ರಮದಲ್ಲಿ ಎಸ್.ಆರ್.ಇ. ಸಂಸ್ಥೆಯ ನಿರ್ದೇಶಕರಾದ ಭೀಮಪ್ಪ ಕಡಾಡಿ, ಬೆಳಗಾವಿ ಸಾಹಿತಿಗಳಾದ ಯ.ರು.ಪಾಟೀಲ, ತಲ್ಲೂರ ರಾಯನಗೌಡರ ವಂಶಸ್ಥರು, ಪ್ರಾಧ್ಯಾಪಕರು ಮುಂತಾದವರು ಪಾಲ್ಗೊಂಡಿದ್ದರು.

ಡಾ. ಮೈತ್ರೇಯಣಿ ಗದಿಗೆಪ್ಪಗೌಡರ, ಡಾ. ಸುರೇಶ ಹನಗಂಡಿ, ಪ್ರಕಾಶ ಗಿರಿಮಲ್ಲನವರ, ಯಲ್ಲಪ್ಪ ಕಡಕೋಳ ಅವರು ಪ್ರಬಂಧ ಮಂಡಿಸಿದರು.
ಗೋಕಾಕದ ಬಯಲಾಟ ಕಲಾವಿದರಾದ ಈಶ್ವರಚಂದ್ರ ಬೆಟಗೇರಿ ಅವರು “ಕಿತ್ತೂರು ಚನ್ನಮ್ಮ” ಪಾತ್ರದ ಪ್ರಾತ್ಯಕ್ಷಿಕೆ ನೀಡಿದರು.
ಡಾ. ಸುರೇಶ ಹನಗಂಡಿ ಅವರು ಸ್ವಾಗತಿಸಿದರು. ಪ್ರೊ. ಶಂಕರ ನಿಂಗನೂರಿ ಅವರು ವಂದಿಸಿದರು. ಡಾ. ಕೆ.ಎಸ್.ಪರವ್ವಗೋಳ ನಿರೂಪಿಸಿದರು.

RELATED ARTICLES

Most Popular

error: Content is protected !!
Join WhatsApp Group