ಇಂದು ಚರ್ಚೆಯಾಗುತ್ತಿರುವ ಬಹುದೊಡ್ಡ ಸಮಸ್ಯೆ. ಹೌದು ಇಂದು ಭಾರತದ ಅನೇಕ ರಾಜಕೀಯ ತಮ್ಮ ಸ್ವಾರ್ಥ ಸಾಧನೆಗಾಗಿ ಜಾತಿ ಹೆಸರಿನಲ್ಲಿ ಪ್ರಾಧಿಕಾರಗಳನ್ನು ತೆರೆಯುತ್ತಿವೆ.ಕಾರಣ ತಮ್ಮ ಪಕ್ಷ ಮತ್ತೊಮ್ಮೆ ರಾಜಕೀಯ ಸಭಾಂಗಣದಲ್ಲಿ ರಾರಾಜಿಸಲಿ ಎನ್ನುವ ಭಾವನೆ.ಇದು ಎಷ್ಟರ ಮಟ್ಟಿಗೆ ಸರಿ.
ರಾಮ ರಾಜ್ಯದ ಕನಸು ಏನಾಗುತ್ತಿದೆ.ಕೇವಲ ಜಾತಿ ಹೆಸರಿನಲ್ಲಿ ಪ್ರಾಧಿಕಾರ ಮಾಡಿದರೆ ಮುಂದೊಂದು ದಿನ ಎಲ್ಲ ಜಾತಿಯವರು ಒಂದೊಂದು ಪಕ್ಷ ಕಟ್ಟಿಕೊಂಡು ಆಡಳಿತ ನಡೆಸುತ್ತಾರೆ.ಮತ್ತೆ ಜಾತಿ ಸಾಮ್ರಾಜ್ಯಗಳು ಭುಗಿಲೆದ್ದು ಅರಾಜಕತೆ ತಾಂಡವವಾಡುತ್ತದೆ. ಪ್ರಜಾಪ್ರಭುತ್ವ ಮೂಲೆ ಗುಂಪಾಗಿ ಅಧಿಕಾರ ಶಾಹಿ ವ್ಯವಸ್ಥೆ ಬಂದು,ಮುಂದಿನ ಪೀಳಿಗೆಗೆ ಇಂದಿನ ಭಾರತದ ಮಹಾನಕ್ಷೆಯನ್ನು ತೋರಿಸಿ ,ಮಕ್ಕಳೇ ಇದು ನಾವು ನೋಡಿದ,ನಡೆದಾಡಿದ ಭರತ ಖಂಡದ ನಕ್ಷೆ ಎಂದು ತೋರಿಸಬೇಕಾಗುತ್ತದೆ.
ಇದೇ ರೀತಿ ಮುಂದುವರೆದಿದ್ದೇ ಆದರೆ ಮತ್ತೊಂದು ಬಾರಿ ಬ್ರಿಟಿಷ್ ಸಾಮ್ರಾಜ್ಯ ಕಾಲಿಡುವುದರಲ್ಲಿ ಸಂದೇಹವಿಲ್ಲ. ಎರಡು ನೂರು ವರ್ಷಗಳ ಹಿಂದೆ ಇದೇ ಆಗಿದ್ದಲ್ಲವೇ ಭಾರತದಲ್ಲಿ?
ನಮ್ಮ ನಮ್ಮೊಳಗಿನ ಜಗಳಗಳ ಲಾಭ ಪಡೆದು ಅವರು ನಮ್ಮನ್ನಾಳಿದ್ದು.ಮುಂದಿನ ಪೀಳಿಗೆಯ ಮಕ್ಕಳು ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಓದಿಕೊಳ್ಳುತ್ತವೆ. ಮತ್ತೊಬ್ಬ ಭಗತ್ ಸಿಂಗ್ ,ಸುಖ್ದೇವ್ ಮುಂತಾದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ ಬೆಳೆಯುತ್ತದೆ. ಮತ್ತೊಬ್ಬ ರಾಷ್ಟ್ರ ಪಿತ ಬರುತ್ತಾರೆ. ಎರಡನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಹರಿದಾಡುತ್ತವೆ.
ಅಷ್ಟಕ್ಕೂ ಜಾತಿ ಪ್ರಾಧಿಕಾರ ಏಕೆ ಬೇಕು?ಎಂದು ಯೋಚಿಸಿದರೆ ಅದರ ಅಗತ್ಯವಿಲ್ಲ. ಒಡೆದು ಆಳುವ ನೀತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದಂತಾಗುತ್ತದೆ.ಇದರ ಬದಲಾಗಿ ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ದಿಗಾಗಿ ಇರುವ ಪ್ರಾಧಿಕಾರಗಳನ್ನು ಸಕ್ರೀಯಗೊಳಿಸಲಿ. ಅಖಂಡ ಭಾರತಕ್ಕಾಗಿ ಶ್ರಮಿಸಲು ಪ್ರಾಧಿಕಾರ ಇರಲಿ.ಯಾವುದೇ ಒಂದು ಸಮುದಾಯವನ್ನು ಎತ್ತಿ ಕಟ್ಟಿ ಬೆಳೆಸಿದರೆ ಸಾಲದು.
ನಾವೆಲ್ಲರೂ ಭಾರತೀಯರು.ಡಾ ಅಂಬೇಡ್ಕರ್ ಅವರ ಸಂವಿಧಾನ ಏಕೆ ಬೇಕು?ಸಂವಿಧಾನದ ಅನುಚ್ಚೇದ, ಪರಿಚ್ಛೇದಗಳು ಏಕೆ ಬೇಕು?ವಾಸ್ತವವಾಗಿ ನಮಗೆ ನಮ್ಮ ದೇಶಕ್ಕೆ ಯಾವುದರ ಅಗತ್ಯ ಇದೆ ಎಂಬುದನ್ನು ಅರಿಯೋಣ. ಸಮಾಜವಾದ, ಸಮತಾವಾದದ ನೆಲೆಗಟ್ಟಿನಲ್ಲಿ ಪ್ರಾಧಿಕಾರಗಳಿರಲಿ.
ಪ್ರಾಧಿಕಾರಗಳು ಅದರ ಅಧಿಕಾರಿಗಳು, ಅವರಿಗೊಂದು ಕಾರು,ವಿಶೇಷ ಬಂಗಲೆ,ರಾಜ ಮರ್ಯಾದೆ ಇವೆಲ್ಲವನ್ನೂ ಅನುಭವಿಸಲು ಪ್ರಾಧಿಕಾರಗಳು ಅಲ್ಲವೇ? ಪ್ರಾಧಿಕಾರದ ಹೆಸರಿನಲ್ಲಿ ಒಂದಷ್ಟು ಹಣ ಖರ್ಚು ಮಾಡಿ ಅದನ್ನು ನೋಡಿಕೊಳ್ಳಲು ಮತ್ತೊಂದು ಮೇಲುಸ್ತುವಾರಿ ಮಂಡಳಿ ನಿರ್ವಹಣೆ ಮಾಡುತ್ತದೆ. ಪ್ರಾಧಿಕಾರದ ಅರ್ಥ ಮತ್ತು ಅದರ ಕಾರ್ಯಗಳೇನು ಎನ್ನುವುದೇ ಗೊತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಅದರದೇ ಆದ ಮಹತ್ವ ಇದೆ.
ನಮ್ಮದು ಜಾತ್ಯತೀತ ರಾಷ್ಟ್ರ. ಇಲ್ಲಿ ಹುಟ್ಟುವ ಪ್ರತಿಯೊಬ್ಬ ವ್ಯಕ್ತಿಯೂ ಭಾರತೀಯ. ಪ್ರಾಧಿಕಾರ ರಚನೆಯಿಂದ ಜಾತಿವಾದ ಹೆಚ್ಚಾಗಿ. ನಮ್ಮತನ ಕಳೆದುಕೊಂಡು, ವಿದೇಶಿಯರಿಗೆ ಶರಣಾಗುವುದು ಬೇಡ.ಪ್ರಾಧಿಕಾರ ರಚನೆಯಾದ ಮಾತ್ರಕ್ಕೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ.
ಎಲ್ಲೋ ಒಂದು ಕಡೆಗೆ ನಮ್ಮನ್ನು ನಾವು ಮಾರಿಕೊಳ್ಳುತ್ತಿದ್ದೇವೆ ಎನಿಸುತ್ತಿದೆ.ಜಾತಿಗಳ ಹೆಸರಿನಲ್ಲಿ ಪ್ರಾಧಿಕಾರಗಳ ರಚನೆ ಎಷ್ಟು ಸೂಕ್ತ? ಏಕೆ ಜಾತಿಗಳ ಹೆಸರಿನಲ್ಲಿ ಪ್ರಾಧಿಕಾರಗಳನ್ನು ರಚನೆ ಮಾಡಬೇಕು. ಅವುಗಳ ಉದ್ದೇಶಗಳೇನು?ಇವುಗಳ ಯಾವ ಪರಿವೆ ಇಲ್ಲದೇ ರಚಿಸುವ ಈ ಪ್ರಾಧಿಕಾರಗಳು ಎಷ್ಟರ ಮಟ್ಟಿಗೆ ಸೂಕ್ತ? ಕೇವಲ ನಮ್ಮ ಸ್ವ ಹಿತಾಸಕ್ತಿಯನ್ನು ನೆರೆವೇರಿಸಿಕೊಳ್ಳುವುದಕ್ಕಾಗಿ ಈ ಪ್ರಾಧಿಕಾರಗಳೇ?
ಹಾಗಿದ್ದ ಮೇಲೆ ನಮ್ಮ ದೇಶದ ಸಂವಿಧಾನ ಏಕೆ ಬೇಕು? ದೇಶದ ಮೂಲಭೂತ ಕಾನೂನು ಇರುವಾಗ ಅದರಂತೆ ರಾಷ್ಟ್ರವನ್ನು ಕಟ್ಟಲು ಸಾಧ್ಯವಿಲ್ಲವೇ? ಸಂವಿಧಾನದಲ್ಲಿ ಎಲ್ಲಿಯೂ ಜಾತಿಯ ಹೆಸರಿನಲ್ಲಿ ಪ್ರಾಧಿಕಾರ ರಚನೆ ಮಾಡಲು ಹೇಳಿಲ್ಲ.ಹಾಗಿದ್ದ ಮೇಲೆ ನಾವು ಅದನ್ನು ಮೀರಿ ಬೆಳೆದು ನಿಂತಿದ್ದೇವೆ ಎನಿಸುವುದಿಲ್ಲವೇ?
ವಾಸ್ತವವಾಗಿ ಇಂದು ನಮಗೆ ಜಾತಿಯ ಹೆಸರಿನಲ್ಲಿ ಪ್ರಾಧಿಕಾರದ ಅವಶ್ಯಕತೆ ಇದೆಯೇ? ಇದೆ ಎಂದಾದಲ್ಲಿ ಸಂವಿಧಾನದ ಮೊದಲ ಪುಟದಲ್ಲಿ ಇರುವ ಜಾತ್ಯಾತೀತ ಪದಕ್ಕೆ ಎಲ್ಲಿದೆ ಅರ್ಥ? ನಾವು ನಮ್ಮ ದೇಶದ ಕಾನೂನಿಗೆ ಹೇಗೆ ಗೌರವ ಸೂಚಿಸಿದಂತಾಯಿತು?ನಾವುಗಳು ನಮ್ಮನ್ನು ಸರಿಯಾಗಿ ತಿದ್ದಿಕೊಳ್ಳದ ಹೊರತು ಈ ಪ್ರಾಧಿಕಾರಗಳಿಗೆ ಕೆಲಸವಿಲ್ಲ.ಇಂದು ನಮ್ಮ ದೇಶ ಜಾತ್ಯಾತೀತ ರಾಷ್ಟ್ರವಾಗಿದ್ದು,ಇದರಿಂದಾಗಿ ಜಾತಿ ರಾಷ್ಟ್ರವಾಗಿ ಉಳಿಯುತ್ತದೆ.
ಪ್ರಪಂಚದ ಇತರ ದೇಶಗಳನ್ನು ಜಾತಿಯ ಆಧಾರದ ಮೇಲೆ ಕರೆಯುವ ಹಾಗೆ ಭಾರತವನ್ನು ಕರೆಯಬೇಕಾಗುತ್ತದೆ.ಮುಂದಿನ ಪೀಳಿಗೆ ತಮ್ಮ ಹಿಂದಿನ ತಲೆಮಾರಿನ ಭಾರತದಲ್ಲಿ ಅತಿ ಹೆಚ್ಚು ಜಾತಿಗಳಿಂದ ಕೂಡಿದ ರಾಷ್ಟ್ರವಾಗಿತ್ತಂತೆ ಎನ್ನುವ ಎರಡು ಪುಟದ ಪಠ್ಯವನ್ನು ಓದಬೇಕಾಗುತ್ತದೆ.ಇವೆಲ್ಲವೂ ನಮಗೆ ಬೇಡವಾದ ವಿಷಯಗಳು. ನಾವು ಮೊದಲು ಭಾರತೀಯರಾಗೋಣ. ಐಕ್ಯತೆಯನ್ನು ಸಾರೋಣ.ನಮಗೆ ಪ್ರಾಧಿಕಾರಗಳು ಬೇಡ. ಜಾತಿಗಳು ಬೇಡ.
ಮಾನವೀಯತೆಯ ಮೌಲ್ಯಗಳೇ ಪ್ರಾಧಿಕಾರಗಳು.ಭಾರತೀಯರೇ ತುಂಬಿದ ಒಂದು ಸಮಗ್ರ ನಾಡು ನಮ್ಮದಾಗಲಿ.
*ಶ್ರೀ ಇಂಗಳಗಿ ದಾವಲಮಲೀಕ*