ದೀಪಾವಳಿ ಕಾರ್ತಿಕ ಮಾಸದ ಮಹತ್ವ

Must Read

ಕಾರ್ತಿಕ ಮಾಸ ಮನುಷ್ಯ ಮತ್ತು ದೇವರ ನಡುವಿನ ಸೂಕ್ಷ್ಮ ಪ್ರಜ್ಞೆಯ ಸೇತುವೆ. ದೀಪಾವಳಿಯ ನಂತರ ಕಾರ್ತಿಕ ಮಾಸವು ಶುರುವಾಗುತ್ತದೆ. ಸೂರ್ಯನು ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಾನೆ. ಪ್ರತಿಯೊಂದು ರಾಶಿಯಲ್ಲಿ ಸಂಚರಿಸುವಾಗ ತನ್ನದೇ ಆದ ಪ್ರಭಾವವನ್ನು ಪ್ರತ್ಯೇಕವಾಗಿ ಬೀರುತ್ತಾನೆ.

ಕಾರ್ತಿಕ ಪೌರ್ಣಮಿಯಂದು ಚಂದ್ರನ ಬೆಳಕು ಎಂದಿಗಿಂತಲೂ ಪ್ರಕಾಶಮಾನವಾಗಿರುತ್ತದೆ. ಚಂದ್ರನು ಭೂಮಿಯ ಸಮೀಪದಲ್ಲಿರುತ್ತಾನೆ. ಹಾಗಾಗಿ ಎಂದಿಗಿಂತಲೂ ಶೇ. 7ರಷ್ಟು ಹೆಚ್ಚು ಸೂರ್ಯನ ಬೆಳಕನ್ನು ಚಂದ್ರನು ಪ್ರತಿಫಲಿಸುತ್ತಾನೆ.

ಕಾರ್ತಿಕ ಮಾಸದಲ್ಲಿ ಸಾಧನೆಯ ಮಾರ್ಗದತ್ತ ಸಾಗಲು ನಮ್ಮ ಋಷಿ ಮುನಿಗಳು ಕೆಲವೊಂದು ಧಾರ್ಮಿಕ ವಿಧಿ ವಿಧಾನಗಳನ್ನು ಉಲ್ಲೇಖಿಸಿದ್ದಾರೆ. ಈ ಬಗ್ಗೆ ವಸಿಷ್ಠ ಋಷಿಗಳು ಕೆಲವೊಂದು ವಿಧಾನಗಳನ್ನು ಸೂಚಿಸಿದ್ದಾರೆ. ಕಾರ್ತಿಕ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಹೆಚ್ಚು ಫಲಪ್ರದವಾಗುತ್ತದೆ.

ಕಾರ್ತಿಕ ಮಾಸದಲ್ಲಿ ಪವಿತ್ರ ಸ್ನಾನ

ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ಮೂರು ಬಾರಿ ಸ್ನಾನ ಮಾಡುವ ಸಂಪ್ರದಾಯ ಕೆಲವರಲ್ಲಿದೆ. ಸ್ನಾನ ಮಾಡುವುದರಿಂದ, ಭೌತಿಕವಾಗಿ ದೇಹದ ಕಲ್ಮಷಗಳನ್ನು ತೊಳೆದುಕೊಳ್ಳಬಹುದು. ಅದರೊಂದಿಗೆ ಮನಸ್ಸಿನ ಕಲ್ಮಷಗಳನ್ನು ಕಳೆದುಕೊಳ್ಳುವುದರೊಂದಿಗೆ, ನಮ್ಮ ಭಾವನೆಗಳನ್ನು, ಮನಸ್ಸಿನ ಕೋಪ, ತಾಪವನ್ನು ನಿಯಂತ್ರಿಸಿಕೊಳ್ಳಬಹುದು.

ನದಿ ತೀರಗಳಲ್ಲಿ ಮಾಡುವ ಜಲ ಸ್ನಾನವು ಜಲ ಚಿಕಿತ್ಸೆಗೆ ಪೂರಕವಾಗಿದೆ. ಪವಿತ್ರ ಸ್ನಾನ ಮಾಡುವುದರಿಂದ ದೇಹ ಹಾಗೂ ಮನಸು ಎರಡು ಶುದ್ಧವಾಗುತ್ತದೆ.

ದೀಪಗಳನ್ನು ಮನೆಯ ಅಂಗಳದಲ್ಲಿ ಮತ್ತು ಮನೆಯ ಸುತ್ತಮುತ್ತ ಬೆಳಗಬೇಕೆಂಬ ನಿಯಮವಿದೆ. ಶಿವ ಮತ್ತು ವಿಷ್ಣು ಮಂದಿರಗಳಲ್ಲಿ ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯೋದಯಕ್ಕೆ ನಂತರ ಭಗವಂತನ ಪ್ರೀತ್ಯರ್ಥವಾಗಿ ಜ್ಯೋತಿಯನ್ನು ಬೆಳಗುತ್ತಾರೆ. ತುಪ್ಪದ ದೀಪವನ್ನು ಬೆಳಗುವುದರಿಂದ ಅಸುರೀ ಶಕ್ತಿಗಳು ನಾಶವಾಗುತ್ತವೆ.

ಕ್ರಿಮಿ, ಕೀಟಗಳಿಂದ ಪರಿಸರ ಶುದ್ಧವಾಗುತ್ತದೆ. ಅದರೊಂದಿಗೆ ಮನಸ್ಸಿನ ಅಜ್ಞಾನವು ಕಳೆಯುತ್ತದೆ. ಹೀಗೆ ಮನೆಯಲ್ಲಿ ದೀಪ ಬೆಳಗುವುದರಿಂದ. ಐಶ್ವರ್ಯ, ಸಂಪತ್ತು, ಆರೋಗ್ಯ ಸ್ಥಿರವಾಗುತ್ತದೆ.

ದೀಪ ಹಚ್ಚಿದ ನಂತರ ತುಳಸಿ ದೇವಿಯ ಪೂಜೆ ಮಾಡಬೇಕು. ತುಳಸಿ ಒಂದು ಗಿಡಮೂಲಿಕಾ ಸಸ್ಯವಷ್ಟೇ ಅಲ್ಲ, ವಾತಾವರಣದಲ್ಲಿ ಆಮ್ಲಜನಕವನ್ನು ಹೆಚ್ಚಿಸುವ ಶಕ್ತಿಯಾಗಿದೆ.
ತುಳಸಿ ಪೂಜೆಯನ್ನು ಪ್ರತಿನಿತ್ಯ ಮಾಡುವ ಮಹಿಳೆಯರಿಗೆ ಸೌಭಾಗ್ಯ ಸಿದ್ಧಿಸುತ್ತದೆ.

ತುಳಸಿ ಗಿಡದ ಮುಂದೆ ದೀಪಾರಾಧಾನೆ ಮಾಡುವುದು ತ್ಯಾಗದ ಸಂಕೇತವಾಗಿದೆ. ಶಿವ ಮತ್ತು ವಿಷ್ಣುವಿನ ಆರಾಧನೆಯೊಂದಿಗೆ ಶಿವ ಮತ್ತು ವಿಷ್ಣು ಎರಡೂ ಒಂದೇ ಎನ್ನುವ ಭಾವ ಮೂಡತ್ತದೆ. ಶಿವ ಪ್ರಜ್ಞೆಯ ಸಂಕೇತವಾದರೆ, ವಿಷ್ಣುವು ಸ್ಥಿತಿಕಾರನಾಗಿದ್ದಾನೆ.

ಹೇಗೆ ಬ್ರಹ್ಮಾಂಡವು ಸ್ಥಿತಿ ಮತ್ತು ಪ್ರಜ್ಞೆಯಿಂದ ಆವೃತ್ತವಾಗಿದೆಯೋ ಹಾಗೆಯೇ ಶಿವ ಮತ್ತು ವಿಷ್ಣುವಿನ ಪ್ರಜ್ಞೆಯು ನಮ್ಮಲ್ಲಿ ಅಡಕವಾಗಿದೆ. ಇಂತಹ ಪ್ರಜ್ಞೆಯೇ ನಮ್ಮನ್ನು ಅಧ್ಯಾತ್ಮ ಸಾಧನೆಯತ್ತ ಮುನ್ನಡೆಸುತ್ತದೆ.

ಸೋಮವಾರ ಶಿವನಿಗೆ ಪ್ರಿಯವಾದ ವಾರ. ಸೋಮವಾರದ ಅಧಿಪತಿ ಚಂದ್ರ. ಚಂದ್ರ ಮನೋಕಾರಕ ಅಂದರೆ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವವ. ಯಾರು ತಮ್ಮ ಮನಸ್ಸನನ್ನು ನಿಗ್ರಹದಲ್ಲಿ ಇಟ್ಟುಕೊಳ್ಳುತ್ತಾರೋ ಅಂತಹ ವ್ಯಕ್ತಿಗಳು ಉನ್ನತ ಸ್ಥಾನಕ್ಕೆ ಏರುತ್ತಾರೆ. ಅದರೊಂದಿಗೆ ತಮ್ಮ ವ್ಯಕ್ತಿತ್ವ ಬೆಳವಣಿಗೆಗೂ ಪೂರಕವಾಗುತ್ತಾರೆ. ಸೋಮವಾರದಂದು ಪ್ರದೋಷ ವ್ರತವನ್ನು ಆಚರಿಸುತ್ತಾರೋ, ಮನೋಕಾರಕ ಚಂದ್ರನನ್ನೇ ತನ್ನ ಶಿರದಲ್ಲಿ ಧಾರಣೆ ಮಾಡಿಕೊಂಡಿರುವ ಶಿವನನ್ನು ಕುರಿತು ಧ್ಯಾನ ಮಾಡುತ್ತಾರೋ, ಅವರು ಅತ್ಯುತ್ತಮ ಜ್ಞಾನವಂತರಾಗುತ್ತಾರೆ.

ಶ್ರೀ ಇಂಗಳಗಿ ದಾವಲಮಲೀಕ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group