ನಮಗೆ ಅನ್ಯಾಯವಾಗುತ್ತಿದೆ, ನಮ್ಮನ್ನು ತೃಣೀಕರಿಸಲಾಗುತ್ತಿದೆ, ನಮಗೆ ಬೇರೆ ಧರ್ಮದ ಅಗತ್ಯವಿದೆ ಎಂದು ಒಂದಷ್ಟು ವರ್ಷಗಳಿಂದ ಹೋರಾಡುತ್ತಿರುವ ಒಂದು ಗುಂಪು. ಅದನ್ನು ವಿರೋಧಿಸುತ್ತಾ ಹಿಂದಿನಿಂದ ಬಂದ ಅಭ್ಯಾಸ, ಆಧಾರಗಳನ್ನು ಕೊಟ್ಟು ದಿನಪತ್ರಿಕೆಗಳಲ್ಲಿ, ಟಿವಿ ವಾಹಿನಿಗಳಲ್ಲಿ ಬಲವಾಗಿ ಸಮರ್ಥನೆ ಮಾಡಿಕೊಳ್ಳುತ್ತಾ ಚರ್ಚೆಯನ್ನು ಇನ್ನಷ್ಟು ಆಳವಾಗಿಸಿ ಸುದ್ದಿಗೆ ಆಹಾರವಾಗಿರೋ ಇನ್ನೊಂದು ಗುಂಪು. ನಿಜಕ್ಕೂ ಹೊಸ ಧರ್ಮದ ಅಗತ್ಯವಿದೆಯೇ…!
ನಮ್ಮ ಧರ್ಮಕ್ಕೆ ಬನ್ನಿ, ಮತಾಂತರ ಮಾಡುವ ಮೂಲಕ ನಿಮಗೆ ಹೊಸ ಜೀವನ, ಸ್ಥಾನ ಮಾನ ಕೊಡುತ್ತೇವೆ ಎಂದು ಆಮಿಷಗಳ ಆಹ್ವಾನ ಕೊಡುವ ಇನ್ನೊಂದು ಧರ್ಮ.. (ಮತಾಂತರ ಆದವರನ್ನು ನಿಜಕ್ಕೂ ಹಾಗೆ ನಡೆಸಿಕೊಳ್ಳುತ್ತದೆಯೇ…!)
ಒಂದು ಧರ್ಮದ ದೇವರನ್ನು, ಆಚರಣಾ ವಿಧಿ-ವಿಧಾನಗಳನ್ನು ತೆಗಳುತ್ತಾ ಕೋಟ್ಯಂತರ ಮನಸುಗಳ ರೂಢಿಗತ ಧಾರ್ಮಿಕ ಭಾವನೆಗಳನ್ನು ದೂರೀಕರಿಸುವ ಮತ್ತೊಂದು ಕುಹಕ ಧರ್ಮ ನಮಗೆ ಬೇಕೇ…!
ಬಾಲ್ಯದ ಪುಸ್ತಕಗಳಲ್ಲಿ ಓದಿ ತಿಳಿದ ಚರಿತ್ರೆಯ ಕೆಲಭಾಗಗಳು, ಸುಳ್ಳುಗಳ ಮೇಲೆ ನಿಂತಿದ್ದ ಆಕರ್ಷಕ ವರದಿಯಷ್ಟೇ ಅದೂ ಒಂದು ಧರ್ಮದ ರಕ್ಷಣೆಗಾಗಿ ಎಂಬ ಹಸಿ ಸತ್ಯ, ಬುದ್ಧಿ ಬಲಿತ ಮೇಲೆ ಬಂದ ಅರಿವಾಗಿತ್ತು!..
ಒಂದು ಧರ್ಮ ಯಾರೇನೇ ಮಾಡಿದರೂ ಸಹಿಸಿಕೊಂಡು ಸಹಿಷ್ಣುತೆಯ ಹೆಸರಿನಲ್ಲಿ ಸುಮ್ಮನೆ ಇರುವುದು ಸರಿಯೇ.. ಇದು ಆ ಧರ್ಮವನ್ನು ಶೃದ್ಧಾ ಭಕ್ತಿಗಳಿಂದ ಆಚರಿಸುವ ಪೀಳಿಗೆಗೆ ಧೈರ್ಯ ತುಂಬುವಂತಿದೆಯೇ? ಹಾಗಾದರೆ ನಡೆ-ನುಡಿಗೆ ಅರ್ಥ ನೀಡುವ, ಆಚರಣೆಗೆ ಬೇಕಿರುವ ಧರ್ಮ ಯಾವುದು?
ಪರರಿಗೆ ಕೆಡಕನ್ನು ಬಯಸದೆ, ಅನ್ಯ ಧರ್ಮೀಯರ ಭಾವನೆಗಳಿಗೆ ಧಕ್ಕೆಯಾಗದಂತೆ ತಾನು ಬದುಕುವುದೇ ನಿಜವಾದ ಧರ್ಮ. ದೇವಸ್ಥಾನಗಳನ್ನು ಕಟ್ಟು, ಚರ್ಚುಗಳನ್ನು ನಿರ್ಮಿಸು, ಸಾಮೂಹಿಕವಾಗಿ ಪೂಜಿಸು ಎಂದು ಯಾವ ದೇವರೂ ಹೇಳುವುದಿಲ್ಲ. ತಮ್ಮ ಸ್ವಾರ್ಥ ಸಾಧನೆಗಾಗಿ ವಿಷ ಬೀಜ ಬಿತ್ತಿದ ಕೆಲವರ ಆಸೆ ಇಂದು ಕವಲೊಡೆದು, ಬೃಹತ್ತಾಗಿ ಬೆಳೆದು ಹೆಮ್ಮರವಾಗಿ ಮನುಷ್ಯರ ಮಧ್ಯೆ ಕಂದಕವನ್ನು ನಿರ್ಮಿಸಿದೆ.. !! ಹಸಿದವನಿಗೆ ತುತ್ತು ಅನ್ನ ನೀಡಿ, ಕೆಳಗೆ ಬಿದ್ದವನನ್ನು ಅಪಹಾಸ್ಯ ಮಾಡದೆ ಕೈ ನೀಡಿ ಅಪ್ಪಿಕೊಳ್ಳುವ ‘ಮಾನವತೆಯ ಧರ್ಮ‘ ಇಂದು ಬೇಕಾಗಿದೆ…
ಹಸಿದವರಿಗೆ ಅನ್ನ ನೀಡಿ, ಪ್ರಾಣಿ ಪಕ್ಷಿಗಳ ಸೇವೆಯಲ್ಲಿ ದೇವರನ್ನು ಹುಡುಕಿ. ಬಿದ್ದವರನ್ನು ಮೇಲೆತ್ತಿ. ಇದಕ್ಕಿಂತಲೂ ಮಾನವ ಧರ್ಮ, ಮಾನವತೆಯ ಧರ್ಮ ಬೇರಿಲ್ಲ….
ಏನಂತೀರಿ…?
ಜಲಜಾರಾವ್