ಪುಸ್ತಕದ ಹೆಸರು : ವಾಲಿ ಮಾಸ್ತರ ಕಕಮರಿ ಅಭಿನಂದನ ಗ್ರಂಥ
ಸಂಪಾದಕರು : ಡಾ. ಮಹಾಂತೇಶ ಉಕ್ಕಲಿ ಅಥಣಿ
ಪ್ರಥಮ ಮುದ್ರಣ : 2020, ಪುಟಗಳು 200
ಬೆಲೆ : ಉಚಿತ
ಪ್ರಕಾಶಕರು : ಅಪ್ಪಾಸಾಬ ಗುರುಬಸಪ್ಪ ವಾಲಿಯವರ
“ಅಮೃತ ಮಹೋತ್ಸವ ಅಭಿನಂದನ ಗ್ರಂಥ ಅಥಣಿ”
ಮುದ್ರಕರು : ಮಹಾಲಕ್ಷ್ಮೀ ಆಫ್ಸೆಟ್ ಅಥಣಿ
ಡಾ. ಮಹಾಂತೇಶ ಉಕ್ಕಲಿ ಅವರ ಸಂಪಾದಕತ್ವದಲ್ಲಿ 75 ನೇ ವರ್ಷದ ಅಮೃತ ಮಹೋತ್ಸವದ ಅಭಿನಂದನ ಗ್ರಂಥ ” ವಾಲಿ ಮಾಸ್ತರ ಕಕಮರಿ” ಗ್ರಂಥದ 28 ಜನ ಲೇಖಕರು ಬರೆದ ಲೇಖನಗಳಿಂದ ಹೊರಹೊಮ್ಮಿದೆ. ಪೂಜ್ಯಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು, ಜ್ಞಾನಯೋಗಾಶ್ರಮ ವಿಜಯಪುರ ಅವರು ಶರಣರಾದ ಶ್ರೀ ಅಪ್ಪಾಸಾಬ ವಾಲಿ ಅವರು ನಿವೃತ್ತ ಶಿಕ್ಷಕರು ಹಲವು ದಶಕಗಳವರೆಗೆ ಆದರ್ಶ ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿರುವರು. ಉತ್ತಮ ಸಂಸ್ಕಾರ ನೀಡಿರುವರು.
ವಾಲಿಯವರಿಂದ ವಿದ್ಯೆಯನ್ನು ಪಡೆದವರಲ್ಲಿ ಅನೇಕರು ಉನ್ನತ ಸ್ಥಾನದಲ್ಲಿದ್ದು ಸಮಾಜ ಸೇವೆಯನ್ನು ಮಾಡುತ್ತಿರುವರು. ಇದು ಮುಂಬರುವ ಯುವಕರಿಗೆ ಒಂದು ಆದರ್ಶ ಜೀವನದ ಕೈಪಿಡಿಯಾಗಿದೆ. ಎಲ್ಲರಿಗೂ ಸಂತಸವನ್ನು ತರಲಿ!! ಎಂದು ಶುಭಾಶಯ ಕೋರಿದ್ದಾರೆ.
ಅದೇ ರೀತಿ ಅನೇಕ ಮಹಾಸ್ವಾಮಿಗಳು ಶುಭಾಶೀರ್ವಾದಗಳನ್ನು ಮಾಡಿದ್ದಾರೆ. ಉತ್ತಮ ಗುಣಮಟ್ಟದ ಪ್ರತಿಪುಟ ಕಾಗದ ಉಪಯೋಗಿಸಿದ್ದಾರೆ ಉತ್ತಮ ಗುಣಮಟ್ಟದ ಮುದ್ರಣವಾಗಿದೆ.
ನಿತ್ಯ ನಿರಂತರ 40 ವರ್ಷಗಳ ಕಾಲ ಕಟಗೇರಿ, ಕಕಮರಿ, ಕೊಟ್ಟಲಗಿ, ಕನ್ನಾಳ ಐಗಳಿ, ಗ್ರಾಮಗಳಲ್ಲಿ ಶಿಕ್ಷಣದ ಸೇವೆಯನ್ನು ಸಲ್ಲಿಸಿದರು. ಎಲ್ಲರಿಂದಲೂ ಶಿಕ್ಷಕರೆಂದರೆ ಅಪ್ಪು ಮಾಸ್ತರರಂತೆ ಇರಬೇಕೆಂದು ಇಂದಿಗೂ ಜನ ಆಡಿಕೊಳ್ಳುವವರು ಉಂಟು ಎಲ್ಲವನ್ನು ತನು-ಮನ-ಧನ ಧಾರೆಯರೆದು ನನ್ನದು ಏನೂ ಇಲ್ಲವೆಂಬ ಭಾವವು ವಾಲಿಯವರದ್ದು ಎಂದು ಪ್ರಕಾಶಕರು
“ಇದ್ದಲ್ಲಿ ಸಲ್ಲುವ ಹೋದಲ್ಲಿಯೂ ಸಲ್ಲುವ
ವಿದ್ಯೆವ ಕಲಿತ ಬಡವ ತಾ ಗಿರಿಯ
ಮೇಲಿದ್ದರೂ ಸಲ್ಲುವ ಸರ್ವಜ್ಞ”
ಎನ್ನುವಂತೆ ವಾಲಿಯವರೂ ತಮ್ಮೂರು ಹಾಗೂ ತಾವು ಸೇವೆ ಸಲ್ಲಿಸುವ ಊರುಗಳಲ್ಲಿ ತಾವು ಬೆಳಗಿದರು. ಶ್ರೀ ವಾಲಿಯವರು ತಾವಿದ್ದು ಕಲಿಸಿದ ಶಾಲೆಗಳನ್ನು ಉದ್ದರಿಸಿದವರು. ಕಕಮರಿ ಬಸವೇಶ್ವರ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದರು. ಶ್ರೀ ಸಿದ್ದೇಶ್ವರ ಅಪ್ಪಾಜಿಯವರೇ ಸ್ವತಃ “ವಾಲಿಮಾಸ್ತರ ಕಕಮರಿ” ಎಂದು ಶೀರ್ಷಿಕೆ ನೀಡಿ ವಾಸ್ತವದ ನೆಲೆಯಲ್ಲಿ ವಾಲಿ ಮಾಸ್ತರರು ಜನ ಸಮುದಾಯದ ವ್ಯಕ್ತಿಯೆಂದು ಬಿಂಬಿಸಿದ್ದಾರೆ.
ಅಭಿನಂದನ ಗ್ರಂಥ ಸಮಿತಿಯ ಸದಸ್ಯರಾದ ಪ್ರೊ. ಬಿ.ಬಿ. ಕೋಹಳ್ಳಿ ಶ್ರೀ ವಾಮನ ಕುಲಕರ್ಣಿ, ಶ್ರೀ ಪ್ರಕಾಶ ಖೋತ, ಶ್ರೀ ಸದಾಶಿವ ಮ. ಜನಗೌಡ, ಶ್ರೀ ಎಮ್.ಎನ್ ವಾಲಿ, ಶ್ರೀಮತಿ ರೋಹಿಣಿ ಯಾದವಾಡ, ಶ್ರೀಮತಿ ಪಿ.ಎಮ್. ಅಣೆಪ್ಪನವರ ಮೊದಲಾದವರು ಲೇಖನಗಳನ್ನು ಸಲಹೆ ಸೂಚನೆ ನೀಡಿ ತುಂಬಾ ಸಹಕರಿಸಿದ್ದಾರೆ. ಎಂದು ಸಂಪಾದಕರ ನುಡಿಯಲ್ಲಿ ಡಾ. ಮಹಾಂತೇಶ ಉಕ್ಕಲಿ ಅವರು ತಿಳಿಸಿದ್ದಾರೆ.
ವಾಲಿ ಗುರುಗಳು ಆತ್ಮಕಥನದಲ್ಲಿ, 01-03-1984 ರಂದು ಜನನವಾಯಿತು. ಪ್ರಾಥಮಿಕ ಶಿಕ್ಷಣ ಕಕಮರಿಯಲ್ಲಿ ನ್ಯೂ ಹೈಸ್ಕೂಲ ಅಥಣಿದಲ್ಲಿ ಪ್ರೌಢಶಿಕ್ಷಣ,1963 ರಲ್ಲಿ ಆಯಿತು 14-08-1964 ರಲ್ಲಿ ನೌಕರಿ ಪ್ರಾರಂಭ ಆಗ ಕೇವಲ 95 ರೂಪಾಯಿ ವೇತನದಲ್ಲಿ ಸೇವೆ ಪ್ರಾರಂಭಿಸಿದರು ಮೂರು ನೌಕರಿ ಏಕಕಾಲದಲ್ಲಿ ಬಂದರೂ ಶಿಕ್ಷಕ ವೃತ್ತಿ ಸೇರಿದರು ಕೆ.ಎಲ್.ಇ. ಕೆ.ಪಿ.ಟಿ ಕಾಲೇಜಿಗೆ 2 ವರ್ಷ ಸಂಬಳದೊಂದಿಗೆ ಸೇರಿ ಕಟಗೇರಿಗೆ ಮರಳಿದರು ಇವರ ಕಷ್ಟ ನೋವು, ನಲಿವು ಎಲ್ಲ ಹಂಚಿಕೊಂಡಿದ್ದಾರೆ. ಉಂಗುರ ಕಳೆದ ಪ್ರಸಂಗ ಅದು ಸಿಕ್ಕ ಪ್ರಸಂಗ ಮಾರ್ಮಿಕವಾಗಿ ತಿಳಿಸಿದ್ದಾರೆ. ಕಕಮರಿ ಕನ್ನಳ ಐಗಳಿ ಕೊಟ್ಟಲಗಿ ಶಾಲೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ 01-03-2003 ರಲ್ಲಿ ಐಗಳಿ ನಿವೃತ್ತ ಆದರೂ, ನಿವೃತ್ತ ಆದರೂ ಸಮಾಜ ಸೇವೆ ಸಲ್ಲಿಸುತ್ತಾ ಇದ್ದಾರೆ ಅನೇಕ ಗೌರವಗಳು ಸನ್ಮಾನಗಳು ಸಂದಿವೆ.
ತಾಯಿಯ ಪುಣ್ಯಸ್ಮರಣೆ ಪರೋಪಕಾರಿ ಜೀವನ ಕೌಟುಂಬಿಕ ಸಹಕಾರ ಧರ್ಮಪತ್ನಿ ಸಹಕಾರ ಬಡತನದಲ್ಲಿ ಕಷ್ಟದಲ್ಲಿ ಬೆಳದು ಬಂದ ಅವರು ಆ ಕಷ್ಟದ ದಿನಗಳನ್ನು ಸ್ಮರಿಸಿಕೊಂಡು 31-12-2019 ಕ್ಕೆ ಅಮೃತ ಮಹೋತ್ಸವ ಶಿಷ್ಯರೆಲ್ಲ ಸೇರಿ ಮಾಡಿದ್ದಾರೆ.
ತಲೆಯ ಮೇಲೊಂದು ಬಿಳಿಯಾದ ಟೋಪಿ ಶುಭ್ರವಾದ ಬಿಳಿ ಧೋತರ, ಬಿಳಿ ಅಂಗಿ ತೊಟ್ಟ ಸಾವಿರ ಜನರಲ್ಲಿ ಪ್ರಕಾಶಿಸುವಂತವರು. ಅಪ್ಪಾಸಾಬ ವಾಲಿಯರು. ಹಳ್ಳಿಯಲ್ಲಿ ಹುಟ್ಟಿ ಹಳ್ಳಿಯಲ್ಲಿ ಬೆಳೆದು ಹಳ್ಳಿಯ ಉದ್ಧಾರವೇ ತನ್ನ ಕೈಂಕರ್ಯವೆಂದು ಭಾವಿಸಿ ಹಗಲಿರುಳು ಶ್ರಮಿಸಿದ ಅಪ್ಪಾಸಾಬ ವಾಲಿಯವರು.
ವಾಲಿಯವರಿಗೆ ವಿಜಯಪುರ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಲ್ಲಿ ಅಪಾರ ಭಕ್ತಿ, ಶೃದ್ಧೆ ಅವರಲ್ಲಿ ತುಂಬ ನಿಷ್ಠೆಯಿಂದ ನಡೆದು ಕೊಳ್ಳುತ್ತಾರೆ.
ಕಕಮರಿಯಲ್ಲಿ ಸುಂದರವಾದ ಶ್ರೀ ಗುರುದೇವಾಶ್ರಮ ನಿರ್ಮಿತಿಗೆ ಇವರು ತನು-ಮನ-ಧನದ ಕಾಯಕ ಸಲ್ಲಿಸಿದ್ದಾರೆ. ಶ್ರೀ ಸಿದ್ದೇಶ್ವರ ಅಪ್ಪಗಳವರ ಪರಮ ಶಿಷ್ಯರಿವರು.
“ಏನು ಪಡೆದೆವೆಂಬುದು ಮುಖ್ಯವಲ್ಲ ಹೇಗೆ ದುಡಿವೆವೆಂಬುದು ಮುಖ್ಯವಯ್ಯ
ಏನು ನುಡಿದೆವೆಂಬುದು ಮುಖ್ಯವಲ್ಲ ಹೇಗೆ ಬಳಸಿದೆವೆಂಬುದು ಮುಖ್ಯವಯ್ಯ
ಏನು ಕೇಳಿದೆವು ಹೇಳಿದೆವೆಂಬುದು ಮುಖ್ಯವಲ್ಲ ಹೇಗೆ ಬಾಳಿದೆವೆಂಬುದು ಮುಖ್ಯವಯ್ಯ ಸ್ವತಂತ್ರಧೀರ ಸಿದ್ದೇಶ್ವರಾ”
ಅಪ್ಪಾಸಾಬ ವಾಲಿ ಗುರುಗಳು ಪ್ರಾಪ್ತಿಗಿಂತ ದುಡಿಮೆಗೆ ನುಡಿಗಿಂತ ನಡೆಗೆ ಗಳಿಕೆಗಿಂತ ಅದರ ಉಚಿತ ಬಳಕೆಗೆ ಹೇಳು ಕೇಳುವದಕ್ಕಿಂತ ಬಾಳಿಗೆ ಪ್ರಾಮುಖ್ಯತೆಯನ್ನು ಕೊಟ್ಟಿವರು.
ಅಥಣಿ ಪಟ್ಟಣದಲ್ಲಿ ಅಡತಿ ಅಂಗಡಿ ಪ್ರಾರಂಭಿಸಿ (ಬುಧವಾರ ಪೇಟೆಯಲ್ಲಿ) ಮಲ್ಲಪ್ಪ ಮತ್ತು ಗುರುಬಸವ್ವ ಇಬ್ಬರು ವೀರಶೈವ ಶರಣರ ತತ್ವ ಸಿದ್ದಾಂತ ಪರಿಪಾಲಕರು, ಪ್ರಾಮಾಣಿಕವಾಗಿ ರೈತರ ಜೊತೆ ಸಂಪರ್ಕ ಇಟ್ಟು ಅಥಣಿ ತಾಲೂಕಿನ ಹತ್ತಿ ಅರಳಿಯನ್ನು ಮುಂಬೈ-ಮದ್ರಾಸ್ ನಗರಗಳ ಮಾರ್ಕೆಟಿಗೆ ಕಳಿಸುತ್ತಿದ್ದರು ಶ್ರೀ ಗೌರಿ ಶಂಕರ ಜಿನ್ನಿಂಗ ಫ್ಯಾಕ್ಟರಿ (ಶಿವಣಗಿ ಪಾಂಗಿ ಅನಖಿಂಡಿ) ಜೊತೆಗೂಡಿ ಇವರು ಫ್ಯಾಕ್ಟರಿ ನಡೆಸುತ್ತಿದ್ದರು. ಆಗ ಅಥಣಿಯಲ್ಲಿ ಪ್ರಸಿದ್ಧ ವಾಲಿ ಅಡತಿ ವ್ಯಾಪಾರಸ್ಥರಾಗಿದ್ದರು ಇವರ ಪೂರ್ವಜರು.
ಅಪ್ಪ ಎಂದರೆ ಆಕಾಶ, ಅಮ್ಮ ಎಂದರೆ ಭೂಮಿ, ಅಪ್ಪನ ಪ್ರೀತಿ ಒಲುಮೆ, ಜವಾಬ್ದಾರಿ ಹೊಣೆ ಗಾರಿಕೆಯಿಂದಲೇ ಅಪ್ಪ ಆಕಾಶದೆತ್ತರಕ್ಕೆ ಏರುತ್ತಾನೆ. ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ, ನಮ್ಮ ಜನ್ಮಕ್ಕೆ ಕಾರಣಾರಾದ ನಮ್ಮ ತಂದೆ ತಾಯಿಗಳೇ ದೇವರು. ಎಂದು ಶಿವಾನಂದ ಅ ವಾಲಿ ಬರೆದಿದ್ದಾರೆ. ಹಲವರು ಕವನ ಹಾಗೂ ಇನ್ನುಳಿದವರು ವಾಲಿ ಗುರುಗಳ ಕುರಿತು ಅತ್ಯುತ್ತಮವಾಗಿ ಬರೆದಿದ್ದಾರೆ.
ಪ್ರಕಾಶಕರ ಚರವಾಣಿಗಳು 9739565298 – 9448121173
ಲೇಖಕರು,
ಶ್ರೀ. ಎಂ.ವೈ. ಮೆಣಸಿನಕಾಯಿ
ಬೆಳಗಾವಿ
9449209570