ಹಾಲು ಉತ್ಪಾದಕರ ಸಂಘಗಳ ಸದಸ್ಯರನ್ನು ಸೇರಿಸಿ ನಂದಿನಿ ಸೊಸೈಟಿ ಆರಂಭಿಸಿರುವುದಕ್ಕೆ ಹರ್ಷ
ರಾಮದುರ್ಗ – ತಾಲ್ಲೂಕಿನಲ್ಲಿರುವ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸೇರಿಸಿ ರೈತರ ಆರ್ಥಿಕ ಅಭಿವೃದ್ಧಿಗೆ ನಂದಿನಿ ಅರ್ಬನ್ ಸೊಸೈಟಿಯನ್ನು ಸ್ಥಾಪಿಸಿರುವುದು ಶ್ಲಾಘನೀಯವಾಗಿದೆ. ರೈತರ ಸಹಕಾರದೊಂದಿಗೆ ಸಂಸ್ಥೆಯು ಉತ್ತರೋತ್ತರವಾಗಿ ಬೆಳೆದು ಇನ್ನಷ್ಟು ಹೆಚ್ಚಿನ ಪ್ರಗತಿ ಸಾಧಿಸಲಿ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಆಶಿಸಿದರು.
ಮಂಗಳವಾರದಂದು ಪಟ್ಟಣದ ನಂದಿನಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಗೆ ಸೌಹಾರ್ದಯುತವಾಗಿ ಭೇಟಿ ನೀಡಿ ಮಾತನಾಡಿದ ಅವರು, ರೈತರ ಏಳ್ಗೆಗಾಗಿಯೇ ಹುಟ್ಟುಕೊಂಡಿರುವ ನಂದಿನಿ ಸೊಸೈಟಿ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ತಾಲ್ಲೂಕಿನ ಎಲ್ಲ ಹಾಲು ಉತ್ಪಾದಕರ ಸಂಘಗಳ ಸದಸ್ಯರನ್ನು ಶೇಅರ್ ಸದಸ್ಯರನ್ನಾಗಿ ಮಾಡಿಕೊಂಡು ಸಹಕಾರಿ ತತ್ವದಡಿ ಸಂಸ್ಥೆಯನ್ನು ಆರಂಭ ಮಾಡಲಾಗಿದೆ. ರೈತರನ್ನು ಮುಖ್ಯವಾಹಿನಿಗೆ ತರುವುದರ ಜತೆಗೆ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶ, ಕಳಕಳಿಯನ್ನು ಮೆಚ್ಚುವಂತಾಗಿದೆ. ಕಡಿಮೆ ಅವಧಿಯಲ್ಲಿ ೪೦ ಲಕ್ಷ ರೂಪಾಯಿ ವಹೀವಾಟು ನಡೆಸಿರುವ ಈ ಸೊಸೈಟಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಯನ್ನು ಸಾಧಿಸಲಿ. ಜಿಲ್ಲಾ ಹಾಲು ಒಕ್ಕೂಟಕ್ಕೆ ಇದು ಸಂಬಂಧವಿಲ್ಲದಿದ್ದರೂ ಸಹಕಾರಿ ತತ್ವದಡಿಯಲ್ಲಿ ನಮ್ಮ ಒಕ್ಕೂಟದ ಉಪ- ಕೇಂದ್ರದಲ್ಲಿಯೇ ಈ ಸೊಸೈಟಿಗೆ ಕೊಠಡಿಯನ್ನು ನೀಡುವ ಮೂಲಕ ಸಹಕಾರಕ್ಕೆ ಅರ್ಥವನ್ನು ಕಲ್ಪಿಸಿಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು.
ಜಿಲ್ಲಾ ಹಾಲು ಒಕ್ಕೂಟದಿಂದ ಹೈನುಗಾರ ರೈತರಿಗೆ ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಹಿಂದಿನ ಅವಧಿಯಲ್ಲಿ ಕೇವಲ ೬೮ ಲಕ್ಷ ರೂಪಾಯಿ ಲಾಭದಲ್ಲಿದ್ದ ಇದನ್ನು ನನ್ನ ಅಧಿಕಾರವಧಿಯಲ್ಲಿ ಸುಮಾರು ೧೩ ಕೋಟಿ ರೂಪಾಯಿ ಲಾಭ ಗಳಿಸುವ ಮೂಲಕ ರೈತರ ಸರ್ವಾಂಗೀಣ ಅಭಿವೃದ್ಧಿಗೆ ಸಿದ್ಧರಿದ್ದೇವೆ. ಸಹಕಾರಿ ಸಂಘಗಳು ಉಳಿಯಬೇಕು. ಬೆಳೆಯಬೇಕು. ಇದರಿಂದ ರೈತರ ಜೀವನ ಉದ್ಧಾರವಾಗಬೇಕು. ಜಗಕ್ಕೆ ಅನ್ನ ಹಾಕುವ ರೈತನ ಬದುಕು ಹಸನಾಗಲು ನಮ್ಮ ಕೆಎಂಎಫ್ ಅತೀ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಸಂಘಗಳಿಗೆ ಹಾಲು ಪೂರೈಕೆ ಮಾಡುವ ರೈತರಿಗೆ ೧೦ ದಿನಗಳಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ಬಿಲ್ ಸದಾಯ ಮಾಡಲಾಗುತ್ತಿದೆ. ಒಕ್ಕೂಟಕ್ಕೆ ಬಂದ ಲಾಭಾಂಶದಲ್ಲಿ ರೈತರಿಗೆ ಚಾಪ್ ಕಟರ್ ಸೇರಿದಂತೆ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಎಲ್ಲ ಯೋಜನೆಗಳನ್ನು ನೀಡುತ್ತಿದ್ದೇವೆ. ಪ್ರತಿಶತ ೬೦ ರಷ್ಟು ರಿಯಾಯಿತಿ ದರದಲ್ಲಿ ರೈತರಿಗೆ ಉಪಕರಣಗಳನ್ನು ನೀಡುವ ಯೋಜನೆಯನ್ನು ಜಾರಿಗೊಳಿಸಿದ್ದಾಗಿ ಅವರು ಹೇಳಿದರು.
ಧನಲಕ್ಷ್ಮೀ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮತ್ತು ಮಾಜಿ ಶಾಸಕ ಅರವಿಂದ ಪಾಟೀಲ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ರಮೇಶ ಅಣ್ಷಿಗೇರಿ,ಡಾ. ಕೆ.ವಿ. ಪಾಟೀಲ, ಜಯಪ್ರಕಾಶ ಸಿಂಧೆ, ನಂದಿನಿ ಸೊಸೈಟಿ ಅಧ್ಯಕ್ಷ ಆರ್.ಜಿ. ಸಿಂಗಾರಗೊಪ್ಪ, ಉಪಾಧ್ಯಕ್ಷ ಶಿವಾನಂದ ಶಿರೂರ, ಆಡಳಿತ ಮಂಡಳಿಯ ಸದಸ್ಯರಾದ ಯಲ್ಲಪ್ಪ ಬೀರಸಿದ್ಧ, ತುಳಸಿಗಿರಿಗೌಡ ಪಾಟೀಲ, ಈರಣ್ಣ ನವರಕ್ಕಿ, ಮುಖ್ಯ ಕಾರ್ಯನಿರ್ವಾಹಕ ವಿನಾಯಕ ನಾಯಿಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರು ರಾಸು ವಿಮೆ ಮತ್ತು ಕಲ್ಯಾಣ ಸಂಘದಿಂದ ಚೆಕ್ಕುಗಳನ್ನು ವಿತರಿಸಿದರು.