ಮುಖ್ಯ ಭಾಷೆ ಆಂಗ್ಲ, ಮಾತೃಭಾಷೆ ಕನ್ನಡ. ಹಾಗೆಯೆ ವಿಷಯಗಳಲ್ಲಿ ಇತಿಹಾಸ ವಿಜ್ಞಾನ,ಗಣಿತ ಇದರಲ್ಲಿ ಪುರಾಣದ ರಾಜಪ್ರಭುತ್ವದ ರಾಜಕೀಯ ಜ್ಞಾನ,ವಿಜ್ಞಾನದಲ್ಲಿ ಪ್ರಾಣಿ ಪಕ್ಷಿಗಳ ಶಾರೀರಿಕ ಬೆಳವಣಿಗೆ, ಆಕಾಶದೆತ್ತರ ಹಾರೋ ಜ್ಞಾನ, ಇತರ ಗ್ರಹ ನಕ್ಷತ್ರಗಳ ಚಲನ ವಲನಗಳ ಪರಿಶೀಲನೆ…
ಇನ್ನು ಗಣಿತ ಲೆಕ್ಕಚಾರದಿಂದ ಜೀವನ ನಡೆಸುವುದು ಹೇಗೆ ಎನ್ನುವ ವ್ಯವಹಾರಜ್ಞಾನ. ಇಲ್ಲಿ ಸಾಮಾನ್ಯಜ್ಞಾನ, ಕಲೆ, ಸಾಹಿತ್ಯ,ಸಂಗೀತ, ನೃತ್ಯ,ಆಟ ಯೋಗ….ಇವುಗಳಿಗೆ ಬೆಲೆಯಿಲ್ಲದೆ ಮಕ್ಕಳನ್ನು ಹೊಡೆದು ಬಡಿದು ಕಲಿಸುವ ಶಿಕ್ಷಣವನ್ನು ಪೋಷಕರ ಸಹಕಾರ,ಹಣ,ಮಕ್ಕಳಿಂದ ಬೆಳೆಸಿರುವುದು ಯಾರು? ಗಮನಿಸಿ , ನಾವೀಗ ಹೊರಗಿನ ರಾಜಕೀಯ ಸರಿಯಿಲ್ಲ ಎನ್ನುವ ಮೊದಲು ನಾವು ಯಾರ ರಾಜಕೀಯದ ಆಟದ ಗೊಂಬೆಗಳಾಗಿ ಹೊರಬಂದು ಜೀವನ ನಡೆಸಿದೆವು?ಇದರಿಂದ ಸಿಕ್ಕಿದ ಫಲಿತಾಂಶ? ಇಲ್ಲಿ ಫಲಿತಾಂಶ ಕೊಡುವುದು ಅಂಕಗಳ ಆಧಾರದ ಮೇಲೆ.
ಮುಖ್ಯವಾದ ವಿಷಯಗಳಿಗೆ ಅಂಕಗಳಿಲ್ಲ. ಅಂದರೆ, ಚಿತ್ರಕಲೆ,ಸಂಗೀತ, ಸಾಹಿತ್ಯ, ಆಟ,ಯೋಗ ಇನ್ನಿತರ ಸಾಂಸ್ಕೃತಿಕ ಜ್ಞಾನ,ಸಾಮಾನ್ಯಜ್ಞಾನವನ್ನು ಪೋಷಕರಾಗಲಿ,ಶಿಕ್ಷಕರಾಗಲಿ ಹೆಚ್ಚಾಗಿ ಗಮನಿಸದೆ ಉಳಿದ ವಿಷಯಗಳನ್ನು ಒತ್ತಾಯವಾಗಿ ತಲೆಗೆ ತುಂಬಿ ಮಕ್ಕಳೊಳಗಿನ ಮೂಲ ಜ್ಞಾನ,ಪ್ರತಿಭೆಗೆ ವಿರುದ್ದ ನಿಂತರೆ, ದೊಡ್ಡವರಾದ ಮೇಲೆ ಇವರಿಗೆ ಶಿಕ್ಷಕರಲ್ಲಿ,ಗುರು ಹಿರಿಯರಲ್ಲಿ,ಪೋಷಕರಲ್ಲಿ ಭಕ್ತಿ ಗೌರವ ಮೂಡಲು ಅಸಾಧ್ಯ.
ಕಾರಣ, ಅವರೊಳಗಿನ ಆತ್ಮಜ್ಞಾನವನ್ನರಿಯದೆ ಕಲಿಸಿದ ವಿಷಯಗಳೇ ಅವರಿಗೆ ವಿಷವಾಗಿರುತ್ತದೆ. ವಿಷತಿಂದ ಮೇಲೆ ದೇಹವನ್ನು ಉಳಿಸಿಕೊಂಡರೂಪ್ರಯೋಜನ ವಿಲ್ಲ. ಮಾತೃಭಾಷೆ ಹಾಳಾಗುತ್ತಿದೆ. ಹಿಂದುಳಿಯುತ್ತಿದೆ ಎನ್ನುವವರೊಮ್ಮೆ ಶಾಲಾ ಕಾಲೇಜುಗಳಲ್ಲಿ ಯಾವ ರೀತಿಯಲ್ಲಿ ಸಂಸ್ಕೃತಿ, ಧರ್ಮ,ಭಾಷೆಗಳನ್ನು ಎತ್ತಿ ಹಿಡಿದು ಕಲಿಸಲಾಗುತ್ತಿದೆ? ಹಾಗೆಯೇ ಇತರ ವಿಷಯಗಳಲ್ಲಿ ಅಡಗಿರುವ ವಿಚಾರಗಳಿಂದ ಮಕ್ಕಳಿಗೆ ಏನುಜ್ಞಾನ ಸಿಗುತ್ತಿದೆ?
ಪ್ರತಿಭಾವಂತ, ಜ್ಞಾನವಂತ, ಬುದ್ದಿವಂತ, ಆರೋಗ್ಯವಂತರಿಗೆ ಯಾವ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ ಗಮನಿಸಿ, ಇಲ್ಲಾ ಅಲ್ಲಿನ ಪೋಷಕರಿಂದ ತಿಳಿಯಬಹುದು.ಅದರಲ್ಲೂ ಹೆಚ್ಚು ಅಂಕ ಪಡೆದವರಿಗೊಂದು ನ್ಯಾಯ,ಕಡಿಮೆ ಅಂಕ ಪಡೆದ ಪೋಷಕರಿಗೊಂದು ನ್ಯಾಯ. ರಾಜಕೀಯ ನಡೆಸುವವರು ಇವರ ಹಣ,ಮಕ್ಕಳಿಂದಲೇ ಶಾಲೆ
ಕಾಲೇಜು ನಡೆಸುತ್ತಿರುವುದೆಂಬ ಸಾಮಾನ್ಯಪ್ರಜ್ಞೆ ಇಲ್ಲದೆ ಶಿಕ್ಷಣ ಸಂಸ್ಥೆಗಳನ್ನು ವಿದೇಶ ಮಾಡಲು ತಮ್ಮ ಪೂರ್ಣ ತಯಾರಿ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಿ ಹೊರ ಕಳಿಸಿದರೆ , ದೇಶಭಕ್ತಿ ಎಲ್ಲಿರಬೇಕು?
ಬೇಡದ್ದಕ್ಕೆ ವಿಧ್ಯಾರ್ಥಿಗಳ ಚುನಾವಣೆ.ಇದರಿಂದ ಮಕ್ಕಳಲ್ಲಿಯೇ ಪಕ್ಷಪಾತವನ್ನು ಹುಟ್ಟಿಸಿ, ಅವರಿಗೆ ರಾಜಕೀಯ ತರಬೇತಿ ಕೊಟ್ಟಾಗ ಎಲ್ಲಿದೆ ಏಕತೆ?. ಇಷ್ಟು ವರ್ಷ ತಿಳಿಯದೆ ಬೆಳೆಸಿದ ಶಿಕ್ಷಣದ ವಿಷಯ ದಲ್ಲೇ ವಿಷ ತುಂಬಿರುವಾಗ ಅಮೃತ ಎಲ್ಲಿಂದ ತರಬೇಕು? ನಮ್ಮೊಳಗೆ ಅಡಗಿದ್ದ ಅಮೃತಜ್ಞಾನ ಈಗಲಾದರೂ ತಿಳಿದು ಮಕ್ಕಳಿಗೆ ಮನೆಯೊಳಗಿಂದಲೇ ನೀಡಿದರೆ ಹೊರಗಿನ ಶಿಕ್ಷಣದಲ್ಲಿ ಅಳವಡಿಸಲು ಪೋಷಕರು ಸಹಕರಿಸಬಹುದು.
ಶಿಕ್ಷಣವು ಶಿಕ್ಷೆ ನೀಡುವ ಕ್ಷಣವಾಗಲು ಕಾರಣವೆ ಮಕ್ಕಳ ಆತ್ಮಶಕ್ತಿಯನ್ನರಿಯದೆ,ಪ್ರತಿಭೆಯನ್ನು ಗುರುತಿಸದೆ ಮನಸ್ಸಿಗೆ ಬಂದಂತೆ ತುರುಕುವ ಹೊರಗಿನ ವಿಷಯಗಳು. ಮಾತೃಭಾಷೆ ಬಿಟ್ಟು ಪರಭಾಷೆಯಲ್ಲಿ ಒತ್ತಾಯಪೂರ್ವಕವಾಗಿ ಕಲಿಸುವುದು.ಇವೆಲ್ಲವೂ ಮಕ್ಕಳ ಸೂಕ್ಷ್ಮ ಬುದ್ಧಿಯನ್ನು ಅಳಿಸಿ,ಮುದ್ಗತೆ ಅಳಿಸಿ ಪ್ರಭುದ್ದತೆ ಬೆಳೆಸುತ್ತದೆ. ಪೋಷಕರನ್ನು ಮಕ್ಕಳೇ ಶೋಷಣೆ ಮಾಡುವಷ್ಟು ಅಜ್ಞಾನ ಬೆಳೆಸಬಾರದಲ್ಲವೆ. ಇದಕ್ಕೆ ಸರ್ಕಾರ ಕಾರಣವಲ್ಲ. ಶಿಕ್ಷಣವೆ ಕಾರಣ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು