ಗುರುವಿಗೆ…
ಜಗವ ಕಾಣುವ ಮೊದಲೇ
ಅದರರಿವು ಇತ್ತವ ನೀನು…
ಹಸಿದಡೆ ಉಣ್ಣುವುದು,
ದಣಿದಡೆ ಮಲಗುವುದು,
ಸೂರ್ಯ ಚಂದ್ರರ ನೋಡಿ
ನಕ್ಕು ನಲಿದಾಡುವುದು
ತೊಟ್ಟಿಲಲಿ ಮಲಗಿದವಗೆ
ಎಲ್ಲಾ ಪ್ರೀತಿಯನಿತ್ತವ ನೀನು….
ಗುರುವೇ ನಿನಗೆ ಶರಣು..
ಅಮ್ಮನೇ ಮೊದಲಾದ
ಬಂಧುಗಳ ತೋರಿದೆ ನೀನು
ಗಿಡ ಮರ ಬಳ್ಳಿಗಳ
ಕಾಣಲು ಕಲಿಸಿದೆ ನೀನು
ಓದು ಬರಹದಲಿ
ಬ್ರಹ್ಮಾಂಡವ ತೋರಿದೆ ನೀನು…
ನೂರು ದಾರಿಗಳಲ್ಲಿ
ಬದುಕನು ಕಲಿಸಿದೆ ನೀನು…
ಗುರುವೇ ನಿನಗೆ ಶರಣು….
ನಾನಾರೆಂಬುವ ಮಾತು
ಮರೆತು ಸಾಯುವ ಜಗಕೆ
ಪರಿಪರಿಯಾಗಿ ಅರುಹುವ
ಕರುಣಾಳು ನೀನೇ…
ಎಲ್ಲವೂ ನಾನೇ..
ಜಗವೆಲ್ಲವೂ ನನ್ನಿಂದೆ
ಎಂಬೀ ಬರೀ ಗುಡುಗಿನ
ಸದ್ದಡಗಿಸಿದ ಗುರುವೇ…
ನಾನೆಂಬುದು ಇಲ್ಲಿಲ್ಲ…
ಯಾವುದೂ ನಿನ್ನಿಂದಲ್ಲ
ಹರನ ಕರುಣೆಯೇ
ನರರೂಪದ ನೀನೆಂದು
ಅರುಹಿದ ಸುರಗುರುವೇ
ನಿನಗೆ ಶರಣು….
ನೂರು ಜನ್ಮವ ತೊಡೆದು
ಹರಜನ್ಮವ ತಾಳುವುದಕೆ
ಸಕಲ ಜೀವಕೆ ಎಲ್ಲ
ಪ್ರೀತಿಯನುಣಿಸುವುದಕೆ
ಬರೀ ಮಾನವನೆಂಬುದ ಅಳಿಸಿ,
ಮಹಾದೇವನಾಗಿಸಿದ
ಗುರುವೇ ನಿನಗೆ ಶರಣು…
ತಾಯಿಯಾಗಿ ಕಲಿಸಿ
ತಂದೆಯಾಗಿ ಸಲಹಿ
ಓದಲು ಶಾಲೆಗೆ ಕರೆಸಿ
ತಿದ್ದಿ ತೀಡಿ ಬರೆಸಿ
ಬುದ್ಧಿಯನು ಹರಹುತ್ತ
ಶುದ್ಧ ಜ್ಞಾನದಿಂದ
ಬುದ್ಧನಾಗಿಸಿದ ಗುರುವೇ
ಶರಣು ನಿನಗೆ ಶರಣು….
ನಂದಾದೀಪವು ನೀನು,
ಬರೀ ಹಣತೆಯು ನಾನು
ಎಣ್ಣೆ ಬತ್ತಿಯನಿಕ್ಕಿ
ನಿನ್ನಂತಾಗಿಸಿದ
ಗುರುವೇ ಮಹಾಗುರುವೇ
ಶರಣು ನಿಮಗೆ ಶರಣು
ಸಾವಿರದ ಶರಣು…
ಕೆ.ಶಶಿಕಾಂತ
ಗುರು ಪೂರ್ಣಿಮಾ
ನಮಗೆ ಉಸಿರು ನೀಡಿದ ತಾಯಿ
ಉಸಿರಿಗೆ ಹೆಸರನ್ನು ಕೊಟ್ಟ ತಂದೆ
ನಿಮ್ಮ ಪ್ರೇಮ ಬಂಧನದಲ್ಲಿ
ಬೆಳೆದ ಕುಸುಮಗಳು ನಾವು
ಕಣ್ಣು ಕಂಡ ಮೊದಲ ಗುರು ನೀವು
ನಿಮಗಿದೋ ನನ್ನ ನಮನ.
ಬಾಲ್ಯದಲಿ ತುಂಟಾಟ ಮಾಡುತ್ತಾ
ಶಾಲೆಯ ಹೆಸರು ಕೇಳಿ ಅಳುತ್ತಾ ಕರೆಯುತ್ತಾ
ಕೊಸರಾಡಿ ಹೋದವರು ನಾವು
ಕೈ ಹಿಡಿದು ಅಕ್ಷರವ ತೀಡಿ ತಿದ್ದಿ
ರಮಿಸಿ ಓಲೈಸಿ ದಂಡಿಸಿ
ಜೀವನಕೆ ಭದ್ರ ಬುನಾದಿ ಹಾಕಿದ
ಗುರುಗಳಿಗೆ ನನ್ನ ನಮನ.
ಹೆಜ್ಜೆ ಹೆಜ್ಜೆಗೂ ಬುದ್ದಿ ಮಾತನು ಹೇಳಿ
ನಡೆ ನುಡಿಯ ತಿದ್ದಿದ
ಬದುಕಲ್ಲಿ ಉತ್ಸಾಹ ತುಂಬಿದ
ಸಕಲ ಸ್ನೇಹಿತಕುಲಕೆ
ನನ್ನ ಹೃದಯಾಳದ ನಮನ
ಗುರಿ ಇರಬೇಕು ಮುಂದೆ
ಗುರುವಿರಬೇಕು ಬೆನ್ನ ಹಿಂದೆ
ಇದ್ದರೆ ಅದುವೇ ನಾಕ
ನಮ್ಮ ಜೀವನ ಸಾರ್ಥಕ.
ಭಾರತಿ ಮದಭಾವಿ
ಗುರುವೇ……
ಸುತ್ತಲೂ ಅಂಧಕಾರ
ಸಮಸ್ಯೆಗಳ ಸುರಿಮಳೆಯಿಂದ
ಹೊರಬರಲು ದಿವ್ಯ ಮಾರ್ಗವ
ತೋರಿದ ಪರಮ ಗುರುವೇ
ನಿಮ್ಮ ಹಸ್ತ ನನ್ನ ಮಸ್ತಕವ
ಕಾಯುವದೆ0ಬ ಭರವಸೆಯಲ್ಲಿ
ನನ್ನ ಬದುಕಿನ ಚುಕ್ಕಾಣಿಯ
ನಿನ್ನ ಕೈಗೆ ಒಪ್ಪಿಸಿರುವೆ ಗುರುವೇ
ಭವಹರನೆ ಭಯನಾಶಕನೆ
ನಿನ್ನ ಅಭಯ ಬೇಕೆನಗೆ
ಮುಕ್ತಿಯ ಮಾರ್ಗವ
ತೋರೆನಗೆ ಓ ಗುರುವೇ
ಶಿವಲೀಲಾ ಲಿಂಗರಾಜ ಪಾಟೀಲ, ಗೋಕಾಕ
ಶ್ರೀಗುರು
ಗುರುವೇ ನಿಮ್ಮ ಚರಣಕೆ ಇಂದು.. ಎಂದೆಂದು ಶಿರಬಾಗಿ ನಮಿಸುವೆನು…
ಕತ್ತಲೆಯಿಂದ ಬೆಳಕಿನೆಡೆಗೆ,
ಅಜ್ಞಾನದಿಂದ ಸುಜ್ಞಾನದೆಡೆಗೆ,
ಎನ್ನ ನೀವು ಮುನ್ನಡೆಸಿದಿರಿ
ಬಾಳ ಪಥವ ಕಲಿಸಿ ಹರಿಸಿದಿರಿ…
ಪ್ರಾಣಿ ಸಹಜ ಬುದ್ಧಿಯಲ್ಲಿ ಹುಟ್ಟಿ,
ಊಟ ಉಡುಗೆ ನಡಿಗೆ ಕಲಿತೆ,
ಮತಿಗೆ ನೀವು ವಿದ್ಯೆಯ ತುಂಬಿ
ಬುದ್ಧಿವಂತ ಮಾನವನನ್ನಾಗಿಸಿರಿ…
ನುಡಿಗಳಿಂದ ಸ್ಪೂರ್ತಿಯ ತುಂಬಿ,
ನಡೆಗಳಿಂದ ಮಾದರಿಯಾಗಿ,
ಹರಿವ ಕದವ ತೆರೆದು ನಿಂದು
ಜ್ಞಾನ ಪ್ರಣತೆ ಹೊತ್ತಿಸಿದಿರಿ…
ಜ್ಞಾನದಾಹ ಬಡಿದೆಬ್ಬಿಸಿ,
ಕೊಡವ ತುಂಬಲು ತಿಳುವ ಸುರಿಸಿ,
ವಿದ್ಯೆ ಹೊಳೆಯ ಹರಿಸಿ.. ತೋರಿಸಿ
ಜ್ಞಾನ ಸಾಗರದಿ ಈಸಲು ಕಲಿಸಿದಿರಿ…
ಮೂರ್ತದಿಂದ ಅಮೂರ್ತದೆಡೆಗೆ,
ಹುಟ್ಟು ಸಾವಿನಿಂದ ಮೋಕ್ಷದೆಡೆಗೆ,
ನಡೆವ ಪಥದಿ ಬೆಳಕು ತೋರಿ
ಮನುಜ ಮತದಿ ಅರಿವು ಬೀರಿ…
ಮೈತ್ರಾದೇವಿ ರಾಚಯ್ಯ ಹಿರೇಮಠ
ಚಿರ ಋಣಿ
ಚಿರಋಣಿ ನಾ ಚಿರಋಣಿ
ಜ್ಞಾನ ನೀಡಿದ ಗುರುವಿಗೆ…
ಚಿರಋಣಿ ನಾ ಚಿರಋಣಿ
ಬದುಕ ಬೆಳಗಿದ ದೇವಗೆ…..
ಸಹನೆ,ತ್ಯಾಗ, ಪ್ರೀತಿ ಲತೆಯಲಿ
ಮಾನವೀಯತೆ ಮರ್ಮ ತಿಳಿಸಿ
ಬದುಕ ಬಂಡಿಯ ಸಾರಥ್ಯ ಕಲಿಸಿದ
ಕೃಷ್ಣ ರೂಪಿ ಮಹಿಮಗೆ ನಾ ಚಿರಋಣಿ…
ಬುದ್ಧ,ಬಸವ,ಗಾಂಧಿಯಾದಿ
ವಿವೇಕಾನಂದರ ಜಗಕೆ ನೀಡಿದ
ಮಾನವೀಯತೆಯ ಮಹಾನ್ ಶಿಲ್ಪಿ
ಮಹಾನ್ ಗುರುವಿಗೆ ನಾ ಚಿರಋಣಿ…..
ಸುಡು ಬಿಸಿಲಂತ ಬದುಕಲಿ
ಅಕ್ಷರದ ಅಕ್ಷಯ ಪಾತ್ರೆ ನೀಡಿ
ಛಲಕೆ ಬಲವಾಗಿ,ಪ್ರೀತಿ ಸೆಲೆಯಾದ
ದಿವ್ಯಚೇತನಕೆ ನಾ ಚಿರಋಣಿ…..
ಮಹಾನ್ ಚೇತನವೇ ನೀವು ರಾಷ್ಟ್ರದ ಕಣ್ಣು
ಧನ್ಯ ಮಾನ್ಯವಿದು ನೀವ್ ಮೆಟ್ಟಿದ ಮಣ್ಣು
ಕಾಡ ಶಿಲೆಗೆ ಜೀವ ನೀಡಿದ
ದೇವಶಿಲ್ಪಿಗೆ ನಾ ಚಿರಋಣಿ….
ಶ್ರೀಮತಿ ಮೀನಾಕ್ಷಿ ಸೂಡಿ
ಬೆಳಗಾವಿ