ನನ್ನ ತಾಯಿಯ ತವರೂರು ಗದಗ ಜಿಲ್ಲೆಯ ಮುಳಗುಂದ .ಬಾಲಲೀಲಾ ಮಹಾಂತ ಸ್ವಾಮಿಗಳು ,ದಾವಲ ಮಲಿಕ್ ಶಿರಹಟ್ಟಿ ಫಕೀರೇಶ್ವರ ಹೀಗೆ ಬೇರೆ ಬೇರೆ ಮಹಾತ್ಮರ ಪರಿಸರದಲ್ಲಿ ನನ್ನ ತಾಯಿ ಲಿಂಗೈಕ್ಯ ಸರೋಜಾ ರುದ್ರಪ್ಪ ಪಟ್ಟಣ ಲಿಂಗೈಕ್ಯ ವೀರಭದ್ರಪ್ಪ ವಾಲಿ ಮತ್ತು ಲಿಂಗೈಕ್ಯ ಶ್ರೀಮತಿ ಚೆನ್ನವೀರವ್ವ ಅವರ ಉದರದಲ್ಲಿ ಜನಿಸಿದ ಹಿರಿಯ ಮಗಳು. ಐವತ್ತು ವರುಷದ ಹಿಂದೆ ನಾನು ಬಾಲಕನಾಗಿದ್ದಾಗ ನನ್ನ ಅಜ್ಜ ಲಿಂಗೈಕ್ಯ ವೀರಭದ್ರಪ್ಪ ವಾಲಿ ಅವರು ನನಗೆ ನಿತ್ಯ ಸಂಜೆ ರಾತ್ರಿ ಕಥೆ ಹೇಳುತ್ತಿದ್ದರು ಅವರು ಹೇಳಿದ ಒಂದು ಸಹಜ ಪ್ರಕರಣದ ಭಾಗವನ್ನು ಇಲ್ಲಿ ಸ್ಮರಿಸುತ್ತೇನೆ.
ಮುಳಗುಂದ ವ್ಯಾಪಾರಸ್ಥರು ಒಮ್ಮೆ ಶ್ರೀ ಪಂಚಾಕ್ಷರಿ ಗವಾಯಿಗಳನ್ನು ಜಾತ್ರಾ ಮಹೋತ್ಸವಕ್ಕೆ ಮುಳಗುಂದಕ್ಕೆ ಕರೆಸಿದರಂತೆ ಕಾರ್ಯಕ್ರಮ ಮುಗಿದ ಮೇಲೆ ಶ್ರೀ ಪಂಚಾಕ್ಷರಿ ಗವಾಯಿಗಳು ತಾವು ತಂದ ಧೋತರ ಅಲ್ಲಿನವರು ಬೇರೆಯವರ ಧೋತರಗಳ ಜೊತೆಗೆ ಬೆರೆಸಿ ಇಟ್ಟಿದ್ದರಂತೆ ,ಇವರ ತೀಕ್ಷ್ಣತೆ ಪರೀಕ್ಷೆ ಮಾಡಲು, ಇಪ್ಪತ್ತು ದೋತರಗಳಲ್ಲಿ ಶ್ರೀ ಪಂಚಾಕ್ಷರಿ ಗವಾಯಿಗಳು ತಮ್ಮ ದೋತರವನ್ನೇ ಆಯ್ಕೆ ಮಾಡಿಕೊಂಡರಂತೆ. ಅದೇ ರೀತಿ ಅವರ ಉಣ್ಣುವ ಗಂಗಾಳ ಮತ್ತು ಚರಿಗೆಯನ್ನು ಅವರು ಪತ್ತೆ ಹಚ್ಚಿ ಜನರಿಗೆ ಆಶ್ಚರ್ಯವನ್ನು ಉಂಟು ಮಾಡುತ್ತಿದ್ದರಂತೆ ,ಇದನ್ನು ನನ್ನ ಅಜ್ಜ ಸ್ವತಃ ಕಣ್ಣಿಂದ ಕಂಡ ದೃಶ್ಯವೆಂದರೆ ಶ್ರೀ ಪಂಚಾಕ್ಷರಿ ಗವಾಯಿಗಳು ಎಷ್ಟು ತೀಕ್ಷ್ಣಮತಿಗಳಾಗಿದ್ದರು ಎಂದು ತಿಳಿಯುತ್ತದೆ. ಇಂತಹ ಅಪ್ರತಿಮ ಸಂಗೀತ ಸಾಮ್ರಾಟನ ಪರಿಚಯ ಮಾಡುವುದು ನನ್ನ ಸೌಭಾಗ್ಯವೆಂದೇ ಭಾವಿಸಿದ್ದೇನೆ.
ಕರ್ನಾಟಕವು ಅದರಲ್ಲೂ ಉತ್ತರ ಕರ್ನಾಟಕವು ಸಂಗೀತ ಸಾಹಿತ್ಯ ದಿಗ್ಗಜರನ್ನು ನಾಡಿಗೆ ಸಮರ್ಪಿಸಿದೆ .ಅಂತಹ ಸಾಧಕರಲ್ಲಿ ನಮ್ಮ ಪಂಚಾಕ್ಷರಿ ಗವಾಯಿಗಳು.
ಶ್ರೀ ಪಂಚಾಕ್ಷರ ಗವಾಯಿಗಳು ಗದುಗಿನಲ್ಲಿರುವ ಪ್ರಸಿದ್ಧ ಸಂಗೀತ ಆಶ್ರಮವಾದ “ಶ್ರೀ ವೀರೇಶ್ವರ ಪುಣ್ಯಾಶ್ರಮ”ದ ಸಂಸ್ಥಾಪಕರು. ಇವರು ಜನಿಸಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ, ದಿನಾಂಕ: ೨, ಫೆಬ್ರುವರಿ ೧೮೯೨ರಂದು. ಇವರ ತಾಯಿ ನೀಲಮ್ಮ ಹಾಗು ತಂದೆ ಗುರುಪಾದಯ್ಯ ಚರಂತಿಮಠ. ಗದಿಗೆಯ್ಯ ಇವರ ಹುಟ್ಟು ಹೆಸರು.
ಗದಿಗೆಯ್ಯ ಹಾಗು ಇವರ ಅಣ್ಣ ಗುರುಬಸಯ್ಯ ಇಬ್ಬರೂ ಹುಟ್ಟು ಕುರುಡರು. ಸ್ಥಳೀಯವಾಗಿ ಸಾಧ್ಯವಿದ್ದ ಸಂಗೀತ ಶಿಕ್ಷಣವನ್ನು ಪಡೆದಿದ್ದರು. ಒಮ್ಮೆ ಶ್ರೀ ಹಕ್ಕಲ ಬಸವೇಶ್ವರ ಜಾತ್ರೆಯಲ್ಲಿ ಹಾಡುತ್ತಿದ್ದ ಈ ಕುರುಡು ಬಾಲಕರ ಹಾಡು ಕೇಳಿದ ಪೂಜ್ಯ ಹಾನಗಲ್ ಕುಮಾರಸ್ವಾಮಿಯವರು ಈ ಎಳೆಯರನ್ನು ತಮ್ಮ ಉಡಿಯಲ್ಲಿ ಹಾಕಿಕೊಂಡರು.ಹಾನಗಲ್ ಕುಮಾರಸ್ವಾಮಿಗಳು ಇವರಿಗೆ ಸಂಗೀತ ಶಿಕ್ಷಣಕ್ಕೆ ಪ್ರೋತ್ಸಾಹಿಸಿದರು.
*ಸಂಗೀತ ಶಿಕ್ಷಣ*
ಅಣ್ಣತಮ್ಮಂದಿರಿಬ್ಬರಿಗೂ ಅನೇಕ ಗುರುಗಳಿಂದ ಸಂಗೀತ ಶಿಕ್ಷಣ ದೊರೆಯಿತು. ಶ್ರೀ ಕುಮಾರಸ್ವಾಮಿಗಳು ಹಳ್ಳಿಹಳ್ಳಿಗಳಲ್ಲಿ ಭಿಕ್ಷೆ ಎತ್ತಿ ನೆಲವಿಗಿಯಲ್ಲೊಂದು ಶಿವಯೋಗ ಮಂದಿರ ಸ್ಥಾಪಿಸಿದ್ದರು. ಅಲ್ಲಿ ಇತರ ಹುಡುಗರ ಜೊತೆಗೆ ಈ ಹುಡುಗರೂ ಸಹ ಸಂಗೀತಾಭ್ಯಾಸ ಮಾಡುತ್ತಿದ್ದಾಗ ಅಣ್ಣ ಗುರುಬಸಯ್ಯ ಕಾಲರಾ ರೋಗದಿಂದ ಮರಣವನ್ನಪ್ಪಿದ.
ಗದಿಗೆಯ್ಯನಿಗೆ ಹದಿನೆಂಟು ವರ್ಷವಾದಾಗ ಮೈಸೂರಿನಲ್ಲಿ ಗೌರಿಶಂಕರ ಸ್ವಾಮಿಗಳಲ್ಲಿ ಕರ್ನಾಟಕ ಸಂಗೀತ ವಿದ್ಯಾಭ್ಯಾಸವಾಯಿತು. ನಾಲ್ಕು ವರ್ಷ ಮೈಸೂರಿನಲ್ಲಿ ಜೋಳಿಗೆ ಹಿಡಿದು ಹೊಟ್ಟೆ ತುಂಬಿಸಿಕೊಂಡ ಗದಿಗೆಯ್ಯನವರು, ಆ ಬಳಿಕ ಬಾಗಲಕೋಟೆಯಲ್ಲಿ ನಡೆಯುತ್ತಿದ್ದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಶ್ರೀ ಕುಮಾರಸ್ವಾಮಿಗಳಿಂದ “ಪಂಚಾಕ್ಷರಿ ಗವಾಯಿ” ಎಂದು ಉದ್ಘೋಷಿತರಾದರು. ಆ ಬಳಿಕ ಸಹ ಮತ್ತೆ ನಾಲ್ಕು ವರ್ಷ ಹಿಂದುಸ್ತಾನಿ ಸಂಗೀತವನ್ನು ಅಭ್ಯಸಿಸಿ ಉಭಯ ಸಂಗೀತ ಪಂಡಿತರಾದರು. ಸಂಗೀತದ ಮೂಲಕವೆ ಸಮಾಜಸೇವೆ ಮಾಡಲು ಬಯಸಿದ್ದ ಪಂಚಾಕ್ಷರಿ ಗವಾಯಿಗಳು ಕಂಚಗಲ್ ಬಿದಿರೆ ಗ್ರಾಮದ ಪ್ರಭುಕುಮಾರ ಶಿವಾಚಾರ್ಯರಿಂದ ಶಿವದೀಕ್ಷೆ ಪಡೆದು ಆಧ್ಯಾತ್ಮಮಾರ್ಗದಲ್ಲೂ ಮುನ್ನಡೆದರು.
*ಸಂಗೀತ ಪ್ರಚಾರ*
_________________
ಪಂಚಾಕ್ಷರಿ ಗವಾಯಿಗಳು ನಾಡಿನಲ್ಲೆಲ್ಲ ಸಂಚರಿಸುತ್ತ ಒಂದು ಸಂಚಾರೀ ಪಾಠಶಾಲೆಯನ್ನು ಪ್ರಾರಂಭಿಸಿದರು. ೧೯೧೪ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಕೊಪ್ಪದಲ್ಲಿ ಶಿವಯೋಗ ಮಂದಿರದಲ್ಲಿ ಹಾನಗಲ್ಲ ಕುಮಾರಸ್ವಾಮಿಗಳವರು ಬಸವ ಜಯ೦ತಿಯ೦ದು ಸ್ಥಾಪಿಸಿಕೊಟ್ಟರು. ಶಾಖೆಯಾಗಿ ಸಂಗೀತ ಶಾಲೆಯೊಂದನ್ನು ಪ್ರಾರಂಭಿಸಿದರು. ಈ ಸಂಗೀತಶಾಲೆಗಳಲ್ಲಿ ಕನ್ನಡ ಮತ್ತು ಸಂಸ್ಕೃತಗಳನ್ನು ಸಹ ಹೇಳಿಕೊಡಲಾಗುತ್ತಿತ್ತು. ಇವರ ಶಿಷ್ಯರಲ್ಲಿ ಇವರ ಉತ್ತರಾಧಿಕಾರಿಯಾಗಿ ದೊರೆತ, ಪ್ರಸಿದ್ಧ ಗವಾಯಿ ಪುಟ್ಟರಾಜರೂ ಸಹ ಕುರುಡರೇ! ಸಂಗೀತಶಾಲೆಗಳ ಖರ್ಚು ತೂಗಿಸಲು ನಾಟಕ ಕಂಪನಿಯೊಂದನ್ನು ಪ್ರಾರಂಭಿಸಿ ಕೈಸುಟ್ಟುಕೊಂಡದ್ದೂ ಆಯಿತು. ಈ ನಡುವೆ ೧೯೩೦ರಲ್ಲಿ ಪಂಚಾಕ್ಷರಿ ಗವಾಯಿಗಳ ರೂವಾರಿಯಾಗಿದ್ದ ಹಾನಗಲ್ ಕುಮಾರಸ್ವಾಮಿಗಳು ಲಿಂಗೈಕ್ಯರಾದರು. ಇದೇ ಸಮಯದಲ್ಲಿ ಬರಗಾಲ ಬಿದ್ದದ್ದರಿಂದ ಪಂಚಾಕ್ಷರಿ ಗವಾಯಿಗಳು ತಮ್ಮ ಶಿಷ್ಯರಿಗಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಆಗ ಮುಂದೆ ಬಂದು ನೆರವು ನೀಡಿದವರು ಬಸರಿಗಿಡದ ವೀರಪ್ಪನವರು. ಇವರು ಗವಾಯಿಗಳಿಗಾಗಿ ಗದಗಿನಲ್ಲಿಯೇ ತಮ್ಮ ಜಾಗದಲ್ಲಿ ಒಂದು ತಗಡಿನ ಪಾಠಶಾಲೆ ಕಟ್ಟಿಸಿಕೊಟ್ಟು, ಧನ-ಧಾನ್ಯದ ಸಹಾಯವನ್ನು ಸಹ ನೀಡಿದರು. ಈ ಸಂಗೀತಶಾಲೆಗೆ ಗವಾಯಿಗಳು “ ಶ್ರೀ ವೀರೇಶ್ವರ ಪುಣ್ಯಾಶ್ರಮ” ಎಂದೇ ಹೆಸರಿಟ್ಟರು.
*ಕನ್ನಡ ಪ್ರೇಮಿ*
____________
ಎಚ್.ಎಮ್.ವಿ. ಕಂಪನಿಯವರು ಖ್ಯಾತ ಕಲಾವಿದರ ಗಾನಮುದ್ರಿಕೆಗಳನ್ನು ಹೊರತರುವ ಸಲುವಾಗಿ ಅನೇಕ ಕಲಾವಿದರನ್ನು ಮುಂಬಯಿಗೆ ಕರೆಸಿದ್ದರು. ಕನ್ನಡದಲ್ಲಿಯೇ ಗಾಯನ ಮಾಡುವದಾಗಿ ಹಟ ಮಾಡಿದ ಪಂಚಾಕ್ಷರಿ ಗವಾಯಿಗಳು ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದಾಗ, ಕಂಪನಿಯವರು ಗವಾಯಿಗಳ ಆಗ್ರಹಕ್ಕೆ ಮಣಿಯಲೇ ಬೇಕಾಯಿತು.
*ಸ್ವದೇಶಾಭಿಮಾನಿ ಗ್ರಾಮ್ಯ ಸಂಸ್ಕೃತಿ*
——————————————
ಪಂಚಾಕ್ಷರಿ ಗವಾಯಿಗಳು ಖಾದಿಯನ್ನೇ ತೊಡುತ್ತಿದ್ದರು. ಉದರ ರೋಗದಿಂದ ಬಳಲುತ್ತಿರುವಾಗ ಆಯುರ್ವೇದದ ಹೊರತಾಗಿ, ಇಂಗ್ಲಿಷ್ ವೈದ್ಯಕೀಯಕ್ಕೆ ಗವಾಯಿಗಳು ಒಪ್ಪಿಕೊಳ್ಳಲಿಲ್ಲ. ಕೊನೆಗೂ ಇದೇ ರೋಗಕ್ಕೆ ಗವಾಯಿಗಳು ಬಲಿಯಾದರು.
*ಲಿಂಗೈಕ್ಯ*
——————-
ಸುಮಾರು ನಾಲ್ಕು ವರ್ಷಗಳವರೆಗೆ ಗವಾಯಿಗಳು ಉದರ ರೋಗದಿಂದ ಬಳಲಿದರು. ಕೊನೆಗೆ ದಿನಾಂಕ ೧೧, ಜೂನ್ ೧೯೪೪ರಂದು ಪಂಚಾಕ್ಷರ ಗವಾಯಿಗಳು ವಿಶ್ವಸಂಗೀತದಲ್ಲಿ ಲೀನರಾದರು ಮತ್ತು ನಿಧನರಾದರು.
ತಮ್ಮ ಜೀವಿತ ಐವತ್ತೆರಡು ವರುಷಗಳಲ್ಲಿ ಸಂಗೀತ ಸಾಮ್ರಾಜ್ಯವನ್ನು ಕಟ್ಟಿದರು .
_________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ

