Homeಸುದ್ದಿಗಳು"ಸಮೂಹ ಮಾಧ್ಯಮಗಳು ಮತ್ತು ಯುವಜನತೆ" ರಾಜ್ಯ ಮಟ್ಟದ ಕಾರ್ಯಾಗಾರ

“ಸಮೂಹ ಮಾಧ್ಯಮಗಳು ಮತ್ತು ಯುವಜನತೆ” ರಾಜ್ಯ ಮಟ್ಟದ ಕಾರ್ಯಾಗಾರ

ಸವದತ್ತಿ: ಗ್ರಾಮೀಣ ಯುವಕರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವದರ ಜೊತೆಗೆ ತಮ್ಮಲ್ಲಿರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಕಲಿಕೆಯ ಹಂತದಲ್ಲಿಯೇ ಸಾಹಿತ್ಯ ಮತ್ತು ಪತ್ರಿಕಾ ಬರಹಗಳನ್ನು ಓದುವದು ಅನಿವಾರ್ಯ ಎಂದು ಧಾರವಾಡದ ಸಂಗಾತ ಪತ್ರಿಕೆಯ ಸಂಪಾದಕರಾದ ಟಿ.ಎಸ್. ಗೊರವರ ಹೇಳಿದರು.

ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಎಸ್.ವಿ.ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಸಮೂಹ ಮಾಧ್ಯಮಗಳು ಮತ್ತು ಯುವಜನತೆ ಎನ್ನುವ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪತ್ರಿಕೆಗೆ ಲೇಖನ ಬರೆಯಲು ಯಾವುದೆ ತರಬೇತಿಗಳು ಬೇಕೆಂದಿಲ್ಲ. ಪುಸ್ತಕಗಳನ್ನು ಓದುವ ಮೂಲಕ ಬರವಣಿಗೆಯ ಸಾಮರ್ಥ್ಯವನ್ನು ಗಳಿಸಿಕೊಳ್ಳಬೇಕೆಂದರು. ಪುಸ್ತಕ ಬದುಕನ್ನು ರೂಪಿಸುವ ಬಗೆಯನ್ನು ಹೇಳಿಕೊಡುತ್ತಿದ್ದು, ಅಭಿರುಚಿ, ಆಸಕ್ತಿ ಮತ್ತು ಪರಿಶ್ರಮದ ಮೂಲಕ ಯುವಕರು ಪ್ರತಿಭಾವಂತರಾಗಬೇಕಿದೆ ಎಂದು ಕಿವಿ ಮಾತು ಹೇಳಿದರು.

ಸವದತ್ತಿಯ ಎಸ್.ವಿ.ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಮೂಹ ಮಾಧ್ಯಮಗಳು ಮತ್ತು ಯುವಜನತೆ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ರಾಜ್ಯಮಟ್ಟದ ಶ್ರಮಿಕ ರತ್ನ ಪ್ರಶಸ್ತಿಗೆ ಭಾಜನರಾದ ಧಾರವಾಡ ಟಿವಿ 9 ವರದಿಗಾರ ನರಸಿಂಹಮೂರ್ತಿ ಪ್ಯಾಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಭೀ. ಬಾಳೋಜಿ ಕಾರ್ಯಕ್ರಮ ಉದ್ಘಾಟಿಸಿದರು.ಧಾರವಾಡ ಜಿಲ್ಲಾ ಟಿ.ವಿ.9 ವಾಹಿನಿಯ ಹಿರಿಯ ವರದಿಗಾರರಾದ ನರಸಿಂಹಮೂರ್ತಿ ಪ್ಯಾಟಿ ಮಾತನಾಡಿ, ಸಮೂಹ ಮಾಧ್ಯಮಗಳಲ್ಲಿ ಕೆಲಸ ಮಾಡಲು ಇಚ್ಚಿಸುವವರು ಮೊದಲು ಭಾಷೆಯಲ್ಲಿ ತಮ್ಮ ಪ್ರಭುತ್ವವನ್ನು ಹೊಂದಿರಬೇಕೆಂದರು. ದೃಶ್ಯ ಮಾಧ್ಯಮದಲ್ಲಿ ಭಾಷೆಯೆ ಬಂಡವಾಳವಾಗಿದ್ದು, ಮುಂದಿನ ದಿನಗಳಲ್ಲಿ ಸಮೂಹ ಮಾದ್ಯಮಗಳ ಸ್ವರೂಪವೇ ಬದಲಾಗಲಿದೆ ಎಂದರು. ಪತ್ರಿಕೋದ್ಯಮದಲ್ಲಿ ವರದಿಗಾರರಷ್ಟೆ ಛಾಯಾಗ್ರ್ರಹಣವು ಪ್ರಮುಖವಾಗಿದ್ದು, ಈ ಕ್ಷೇತ್ರದಲ್ಲಿ ಅನೇಕರು ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.

ನಂತರ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳು ಮಾದ್ಯಮಗಳ ಕುರಿತು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಪ್ರಶ್ನೋತ್ತರದೊಂದಿಗೆ ಚರ್ಚಿಸಿದರು.
ಧಾರವಾಡದ ಅಕ್ಷರತಾಯಿ ಲೂಯಿ ಸಾಲ್ಡಾನಾ ಸೇವಾ ಸಂಸ್ಥೆಯವರು ನೀಡುವ ರಾಜ್ಯಮಟ್ಟದ ಶ್ರಮಿಕ ರತ್ನ ಪ್ರಶಸ್ತಿಗೆ ಭಾಜನರಾದ ಧಾರವಾಡ ಟಿವಿ 9 ವರದಿಗಾರ ನರಸಿಂಹಮೂರ್ತಿ ಪ್ಯಾಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಮಾರುತಿ ಎ. ಡೊಂಬರ ವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದ ಗಿರೀಶ ರೇವಡಿ, ಮಕ್ತುಮ ಯಲಿಗಾರ, ಯಲ್ಲಪ್ಪ ಕೊಪ್ಪದ, ಸುರೇಶ ಬಾಳೋಜಿ, ಕೃಷ್ಣಾ ಪವಾರ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸೌಮ್ಯ ಪರದೇಶಿ ಪ್ರಾರ್ಥಿಸಿದರು. ಪ್ರೊ. ಕೆ. ರಾಮರೆಡ್ಡಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಡಾ.ಎನ್.ಎ.ಕೌಜಗೇರಿ ನಿರೂಪಿಸಿದರು. ಡಾ.ಅರುಂಧತಿ ಬದಾಮಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group