ಹೈನುಗಾರ ರೈತರು ಮೃತಪಟ್ಟರೆ ೧ ಲಕ್ಷ ಜೀವವಿಮಾ ಸೌಲಭ್ಯ – ಬಾಲಚಂದ್ರ ಜಾರಕಿಹೊಳಿ

Must Read

ಬೆಳಗಾವಿ- ಹಾಲು‌ ಉತ್ಪಾದಕರ ಸಹಕಾರ ಸಂಘಗಳಿಗೆ ದಿನನಿತ್ಯ ಹಾಲು ಪೂರೈಕೆ ಮಾಡುತ್ತಿರುವ ಹೈನುಗಾರ ರೈತರು ಮೃತಪಟ್ಟರೆ ಅವರ ಕುಟುಂಬ ವರ್ಗಕ್ಕೆ 1 ಲಕ್ಷ ರೂಪಾಯಿ ಜೀವ ವಿಮಾ ಸೌಲಭ್ಯವನ್ನು ಜಾರಿ ಮಾಡಲು ತೀರ್ಮಾನಿಸಲಾಗಿದೆ ಎಂದು ಬೆಮುಲ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಪ್ರಕಟಿಸಿದರು.

ನಗರದ ಗಾಂಧೀ ಭವನದಲ್ಲಿ ಗುರುವಾರದಂದು ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಜರುಗಿದ 2024-25 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಒಕ್ಕೂಟಕ್ಕೆ ಹಾಲು ಪೂರೈಸುವ 35 ಸಾವಿರ ಹಾಲು ಉತ್ಪಾದಕ ಸದಸ್ಯರಿಗೂ ಸಹ ಶೇ. 75 ರ ಅನುದಾನದಲ್ಲಿ ವಿಮಾ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು ಎಂದು  ತಿಳಿಸಿದರು.

ಈ ಹೊಸ ಯೋಜನೆಯ ಅನುಷ್ಠಾನದಿಂದ ಒಕ್ಕೂಟಕ್ಕೆ ವಾರ್ಷಿಕವಾಗಿ ಸುಮಾರು 50 ರಿಂದ 60 ಲಕ್ಷ ರೂಪಾಯಿ ಹೊರೆಯಾಗಲಿದೆ ಎಂದು ಹೇಳಿದರು. ಒಕ್ಕೂಟದ ವ್ಯಾಪ್ತಿಯಲ್ಲಿ ಸುಮಾರು 609 ಸಂಘಗಳಿಂದ ದಿನಾಲು 2.00 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಇದನ್ನು 3 ಲಕ್ಷ ಲೀಟರ್ ಹಾಲು ಸಂಗ್ರಹಣ ಹೆಚ್ಚಿಸಲು ಉದ್ದೇಶಿಸಲಾಗಿದೆ. ಕಳೆದ ಸಾಲಿನಲ್ಲಿ ಸುಮಾರು 13 ಕೋಟಿ ರೂಪಾಯಿ ಲಾಭವಾಗಿದ್ದು, ಈ ಲಾಭಾಂಶವನ್ನು ಶೇ. 60 ರಷ್ಟು ರೈತರಿಗೆ ಕೃಷಿ ಸಲಕರಣೆಗಾಗಿ ಅನುದಾನವನ್ನು ಒಕ್ಕೂಟದಿಂದ ನೀಡಲಾಗುತ್ತಿದೆ. ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರಗಳನ್ನು ರೈತರಿಗೆ ವಿತರಣೆಯನ್ನು ಮಾಡಲಾಗಿದೆ ಎಂದು ಅವರು ಹೇಳಿದರು.

ಉತ್ತರ ಕರ್ನಾಟಕ ಭಾಗದ ಎಲ್ಲ ಹಾಲು ಒಕ್ಕೂಟಗಳಲ್ಲಿ ಬೆಳಗಾವಿ ಹಾಲು ಒಕ್ಕೂಟವನ್ನು ನಂ.1 ಮಾಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತಿದ್ದೇವೆ. ಖಾಸಗಿ ಡೈರಿಗಳಿಗಿಂತ ನಮ್ಮ ಒಕ್ಕೂಟವು ಹೆಚ್ಚಿನ ಪ್ರಮಾಣದಲ್ಲಿ ಆಕಳು ಹಾಲು ಮಾರಾಟವಾಗುತ್ತಿದೆ. ಆದರೆ, ಗ್ರಾಹಕರಿಂದ ಎಮ್ಮೆ ಹಾಲಿಗೆ ಬೇಡಿಕೆ ಬರುತ್ತಿದೆ. ಬೆಳಗಾವಿ, ಪುಣೆ, ಮುಂಬೈ ನಗರದಲ್ಲಿ ಎಮ್ಮೆ ಹಾಲಿಗೆ ಬೇಡಿಕೆಗಳು ಬರುತ್ತಿದ್ದು, ದರದಲ್ಲಿ ಹೆಚ್ಚಳ ಮಾಡುವುದರ ಬಗ್ಗೆ ಚಿಂತನೆಯನ್ನು ನಡೆಸಲಾಗುತ್ತಿದೆ. ಹಾಲು ಪೂರೈಕೆ ಮಾಡುವ ರೈತರಿಗೆ ಕೇವಲ 10 ದಿನಗಳಲ್ಲಿ ಬಿಲ್ ಸಂದಾಯ ಮಾಡುತ್ತಿದ್ದೇವೆ. ಈ ಹಣದಲ್ಲಿ ರೈತರು ವಾರದ ಸಂತೆಯನ್ನು ಮಾಡಲಿಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಬೆಳಗಾವಿ ಹಾಲು ಒಕ್ಕೂಟದಲ್ಲಿ ಪ್ರಸ್ತುತ 2 ರಿಂದ 3 ಲಕ್ಷ ಲೀಟರ್ ಶೇಖರಣಾ ಸಾಮರ್ಥ್ಯವನ್ನು ಹೊಂದಿದ್ದು, ಇದನ್ನು 3 ರಿಂದ 5 ಲಕ್ಷ ಲೀಟರ್ ಶೇಖರಣಾ ಸಾಮರ್ಥ್ಯಕ್ಕೆ ಹೆಚ್ಚಿಸಲು ಪ್ರಯತ್ನ ಮಾಡಲಾಗುವುದು. ಮೇಗಾ ಡೇರಿ ನಿರ್ಮಾಣಕ್ಕೆ ಅಗತ್ಯವಿರುವ ಯಂತ್ರೋಪಕರಣಗಳ ಕುರಿತಂತೆ ಎನ್ಡಿಡಿಬಿ ಸಮಾಲೋಚನೆಯನ್ನು ನಡೆಸಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ ಒಕ್ಕೂಟದ ಪರವಾಗಿ ನೂರು ಪ್ರಾಂಚೈಸಿ ಮತ್ತು ಮಾರಾಟ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ದಿನವಾಗಿದ್ದ ನಿನ್ನೆಯ ದಿನ (ಸೆ. 17ರಂದು) ಒಂದೇ ದಿನದಲ್ಲಿ 33 ನೂತನ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಿರುವುದು ಒಕ್ಕೂಟದ ಮೈಲುಗಲ್ಲಾಗಿದೆ. ಒಕ್ಕೂಟದ ಸಿಹಿ ಉತ್ಪನ್ನಗಳಿಗೆ ಗ್ರಾಹಕರಿಂದ ಬೇಡಿಕೆಗಳು ಹೆಚ್ಚಾಗುತ್ತಿವೆ. ಇದೇ ಸಾಲಿನಲ್ಲಿ ಒಂದೂವರೆ ಲಕ್ಷ ಲೀಟರ್ ಸ್ಯಾಚೆ ಮತ್ತು ಯುಎಚ್ಟಿ ಒಳಗೊಂಡ 15 ಸಾವಿರ ಕಿಲೋ ಮೊಸರು ಮಾರಾಟ ಮಾಡುವ ಗುರಿ ಹೊಂದಿದೆ. ಗ್ರಾಹಕರನ್ನು ಆಕರ್ಷಿಸಲು ನಂದಿನಿ ಉತ್ಪನ್ನಗಳ ಮಾರಾಟ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.

ವೇದಿಕೆಯಲ್ಲಿ ಬೆಮುಲ್ ಆಡಳಿತ ಮಂಡಳಿಯ ಸದಸ್ಯರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಡಾ. ಬಸವರಾಜ ಪರವಣ್ಣವರ, ಬಾಬುರಾವ ವಾಘಮೋಡೆ, ವಿರುಪಾಕ್ಷಿ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಮಹಾದೇವ ಬಿಳಿಕುರಿ, ಸಂಜಯ ಶಿಂತ್ರೆ, ರಮೇಶ ಅಣ್ಣಿಗೇರಿ, ಸದೆಪ್ಪ ವಾರಿ, ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಕಾಂತ್ ವಿ.ಎನ್ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು.

ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟವನ್ನು ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇನೆ. ದಕ್ಷಿಣ ಕರ್ನಾಟಕದಲ್ಲಿರುವ ಹಾಲು ಒಕ್ಕೂಟಗಳಿಗೆ ಆರ್ಥಿಕವಾಗಿ ಸರಿಸಮಾನವಾಗಿ ನಿಲ್ಲಬೇಕೆಂಬ ಸಂಕಲ್ಪವನ್ನು ಮಾಡಿದ್ದೇನೆ. ಒಕ್ಕೂಟದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ 400 ಕೋಟಿ ರೂಪಾಯಿ ವ್ಯಾಪಾರ ವಹಿವಾಟು ನಡೆಸಿದ್ದು, ಮುಂದಿನ ಸಾಲಿನಲ್ಲಿ ಐನೂರು ಕೋಟಿ ರೂಪಾಯಿ ವ್ಯಾಪಾರ ವಹಿವಾಟು ನಡೆಸುವ ಗುರಿಯನ್ನು ಹೊಂದಿದ್ದೇನೆ.

ಬಾಲಚಂದ್ರ ಜಾರಕಿಹೊಳಿ
ಬೆಮುಲ್ ಅಧ್ಯಕ್ಷರು & ಶಾಸಕರು ಅರಭಾವಿ.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group