ಬೀದರ – ಜಿಲ್ಲಾ ಉಸ್ತುವಾರಿ ಸಚಿವರ ತವರೂರು ಔರಾದ ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ತಾಲೂಕಿನ ಬಾದಲಗಾಂವ ಪಂಚಾಯತ ನಲ್ಲಿ ನಾಲ್ಕು ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಬಂದಿದೆ.
ಜಿಲ್ಲಾ ಉಸ್ತುವಾರಿ ಸಚಿವರ ತವರೂರು ಬೀದರ ಜಿಲ್ಲೆಯ ಔರಾದ ತಾಲೂಕಿನ ಬಾದಲಗಾಂವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಸರಕಾರದಿಂದ ಬರುವ 2016-19 ರ ಎಲ್ಲಾ ಯೋಜನೆಯ ಕಾಮಗಾರಿಗಳು 100% ಬೊಗಸ್ ಬಿಲ್ಲು ಮಾಡಿ ಸರ್ಕಾರದ ಹಣ ಲೂಟಿ ಮಾಡಿದ್ದಾರೆ ಎಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವನಮಾರಪಳ್ಳಿ ಗ್ರಾಮಸ್ಥರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಆದರೆ 2016-2019ರಲ್ಲಿ ನಡೆದ ಹಗರಣ ವಿರುದ್ದ ಯಾವುದೆ ರೀತಿಯ ಸ್ಪಷ್ಟವಾದ ಪರಿಶೀಲನೆ ಯಾಗಿಲ್ಲ.
ಗ್ರಾಮಸ್ಥರಾದ ಬಾಬುರಾವ ಬಿರಾದಾರ ಮೂಲ ದಾಖಲೆಗಳನ್ನು ಇಟ್ಟುಕೊಂಡು ಮಾಹಿತಿ ಹಾಕಿರುತ್ತಾರೆ.
ಆದರೆ ಜಿಲ್ಲಾ ಪಂಚಾಯತ ಯೋಜನಾ ಅಧಿಕಾರಿಗಳು ಯಾವುದೇ ಮಟ್ಟದ ತನಿಖೆ ನಡೆಸದೆ ಉಡಾಫೆ ಉತ್ತರ ನಿಡಿರುತ್ತಾರೆ.
ಗ್ರಾಮದಲ್ಲಿ ನಡೆದ ಕಾಮಗಾರಿಗಳ ಪರಿಶೀಲಿಸಿ ಗ್ರಾಮಸ್ಥರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಅಧಿಕಾರಿಗಳ ಉಡಾಫೆ ಉತ್ತರದಿಂದ ಕಣ್ಣಿದ್ದು ಕುರುಡರಂತಾಗಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.
ಕೆಲವು ವ್ಯಕ್ತಿಗಳು ಸಾವನ್ನಪ್ಪಿರುತ್ತಾರೆ ಆದರೆ ಅವರ ಖಾತೆಗೆ ಹಣ ಜಮೆಮಾಡಿ ಶೌಚಾಲಯದ ಬೊಗಸ್ ಬಿಲ್ಲು ಎತ್ತಿಕೊಂಡಿರುತ್ತಾರೆ ಜನರು ಸತ್ತವರ ಹೆಸರಲ್ಲಿ ಹೇಗೆ ಹಣ ಪಾವತಿ ಮಾಡುತ್ತೀರಿ ಎಂದು ಕೇಳಿದರೆ ಪಿ. ಡಿ. ಒ ಉತ್ತರ ತೋರಿಕೆಗೆ ಮಾತ್ರ ಎಂದು ಜನರ ಅಭಿಪ್ರಾಯವಾಗಿದೆ. ಪ್ರತ್ಯೇಕ ರೈತನ ಹೊಲದಲ್ಲಿ ಗಂಡಿ ಕಾಲುವೆ ಮಾಡಿಸಿಕೊಡುತ್ತೇವೆ ಎಂದು ನಂಬಿಸಿ ಆತನ ಹೊಲದಲ್ಲಿ ಯಾವುದೇ ಕಾಮಗಾರಿ ಮಾಡದೆ ಆ ವ್ಯಕ್ತಿಯ ಹೊಲದ ಸರ್ವೆ ನಂಬರ್ ಮೇಲೆ ಹಣ ಲೂಟಿ ಮಾಡಿರುವ ಬಗ್ಗೆ ಸ್ವತಃ ರೈತನೇ ದೂರು ನೀಡಿದ್ದಾನೆ. ಸತ್ತವರ ಹೆಸರಲ್ಲಿ ಸಹ ನರೇಗಾ ಯೋಜನೆ ಅಡಿಯಲ್ಲಿ ಭಾರಿ ಗೋಲ್ ಮಾಲ್ ಮಾಡಿರುವ ವಿಷಯ ಬಾದಲಗಾಂವ ಪಂಚಾಯತ್ ನಲ್ಲಿ ನಡೆದಿದೆ..
ಈ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಪ್ರತಿ ಗ್ರಾಮಸ್ಥರು ನಮ್ಮ ಗ್ರಾಮದಲ್ಲಿಯೂ ಆಗಿರುವ ಕಳಪೆ ಕಾಮಗಾರಿಯ ಬಗ್ಗೆ ತನಿಖೆ ಆಗಲಿ ಎಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಯ ಜನರು ದೂರು ನೀಡುತ್ತಿದ್ದಾರೆ.
ಪ್ರಮುಖವಾಗಿ ಶೌಚಾಲಯಗಳು, ತೆರೆದ ಬಾವಿಯ ಹೂಳೆತ್ತುವ ಕಾಮಗಾರಿ ಮತ್ತು ಗ್ರಾಮಸ್ಥರಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಬೋರ್ವೆಲ್ ಮತ್ತು ಪೈಪ್ ಹಾಕಿಸಿರುವುದು ಸಂಪೂರ್ಣ ಕಳಪೆ ಕಾಮಗಾರಿ ಆಗಿರುವುದಾಗಿ ಗ್ರಾಮಸ್ಥರಾದ ಬಾಬುರಾವ್ ಬಿರಾದಾರ್ ಗಂಭೀರ ಆರೋಪ ಮಾಡಿದ್ದಾರೆ.
ಖುದ್ದಾಗಿ ಗ್ರಾಮಸ್ಥರು ರೈತರೇ ಗ್ರಾಮ ಪಂಚಾಯಿತಿಯ ಭ್ರಷ್ಟಾಚಾರದ ಬಗ್ಗೆ ದೂರು ನೀಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು, ಮೇಲಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುವರು ಎಂಬುದನ್ನು ಕಾದು ನೋಡಬೇಕಾಗಿದೆ. ಜಿಲ್ಲಾ ಉಸ್ತುವಾರಿಗಳ ತವರೂರು ಭ್ರಷ್ಟಾಚಾರದಿಂದ ಮುಕ್ತವಾಗುತ್ತದೆ ಎಂಬುದು ಜನರ ಆಸೆ ಭಾವನೆ ಆಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ