ಸಂಗೀತ ಕೃಪಾ ಕುಟೀರದ 41 ನೇ ವಾರ್ಷಿಕೋತ್ಸವ

Must Read
     ನಗರದ ಸಂಗೀತಾಸಕ್ತರ ಪಾಲಿಗೆ ಸಾಂಸ್ಕೃತಿಕ ತಪೋಭೂಮಿಯಾಗಿ ಗುರುತಿಸಿಕೊಂಡಿರುವ ‘ಸಂಗೀತ ಕೃಪಾ ಕುಟೀರ’ ತನ್ನ 41ನೇ ವಾರ್ಷಿಕೋತ್ಸವವನ್ನು ಭಕ್ತಿಭಾವ, ಶಿಸ್ತು ಹಾಗೂ ಕಲಾತ್ಮಕ ವೈಭವದೊಂದಿಗೆ ಆಚರಿಸಲು ಸಜ್ಜಾಗಿದೆ.

   ಭಾರತೀಯ ಶಾಸ್ತ್ರೀಯ ಸಂಗೀತದ ಶ್ರೀಮಂತ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಸಂಗೀತ ಕೃಪಾ ಕುಟೀರವು, ಅನೇಕ ಯುವ ಪ್ರತಿಭೆಗಳಿಗೆ ಸಂಗೀತ ಶಿಕ್ಷಣ, ವೇದಿಕೆ ಮತ್ತು ಮಾರ್ಗದರ್ಶನವನ್ನು ನೀಡುತ್ತ ಬಂದಿದೆ. ಗುರು–ಶಿಷ್ಯ ಪರಂಪರೆಯನ್ನು ಜೀವಂತವಾಗಿ ಉಳಿಸಿಕೊಂಡು, ಸಂಗೀತವನ್ನು ಜೀವನ ಮೌಲ್ಯಗಳೊಂದಿಗೆ ಬೆಸೆಯುವ ಈ ಸಂಸ್ಥೆಯ ಸೇವೆ ಸಾಂಸ್ಕೃತಿಕ ವಲಯದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.

    ಡಿಸೆಂಬರ್ 28, ಭಾನುವಾರ ಬೆಳಿಗ್ಗೆ 9.30 ಗಂಟೆಗೆ, ನಗರದ ಬನಶಂಕರಿ ಪ್ರಥಮ ಹಂತದ ಪಿ.ಎಸ್. ಕಾಲೇಜ್ ಹಿಂಭಾಗದಲ್ಲಿರುವ ಸ್ವಾಮಿ ವಿವೇಕಾನಂದ ವಿದ್ಯಾ ಶಾಲೆಯಲ್ಲಿ 41ನೇ ವಾರ್ಷಿಕೋತ್ಸವದ ಸಂಭ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ಖ್ಯಾತ ವಿಮರ್ಶಕ ಕರ್ನಾಟಕ ಕಲಾಶ್ರೀ ಡಾ. ಎಂ. ಸೂರ್ಯಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಖ್ಯಾತ ಸಂಗೀತ ಕಲಾವಿದ ವಿದ್ವಾನ್ ಬಿ. ಹುಸೇನ್ ಸಾಬ್ ಕನಕಗಿರಿ ಹಾಗೂ ಖ್ಯಾತ ಹಾರ್ಮೋನಿಯಂ ವಾದಕ ವಿದ್ವಾನ್ ಕೆ. ಗುರುರಾಜ್ ಅವರಿಗೆ ‘ಸಂಗೀತ ಕಲಾರವಿಂದ’ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು.

ನಂತರ ‘ದಾಸವಾಣಿ ಸೌರಭ’ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ಬಿ. ಹುಸೇನ್ ಸಾಬ್ ಕನಕಗಿರಿ ಅವರ ಗಾಯನಕ್ಕೆ ಹಾರ್ಮೋನಿಯಂನಲ್ಲಿ ವಿದ್ವಾನ್ ಕೆ. ಗುರುರಾಜ್, ತಬಲದಲ್ಲಿ ವಿದ್ವಾನ್ ಸಂತೋಷ್ ಕೊಡ್ಲಿ, ವಿಶೇಷ ಲಯವಾದ್ಯದಲ್ಲಿ ವಿದ್ವಾನ್ ಶಾಮದತ್ ಹಾಗೂ ತಾಳದಲ್ಲಿ ವಿದ್ವಾನ್ ವೀರೇಂದ್ರ ಮತ್ತು ವಿದ್ವಾನ್ ಪ್ರಸಾದ್ ಸಾಥ್ ನೀಡಲಿದ್ದಾರೆ.

ವಾರ್ಷಿಕೋತ್ಸವದ ಅಂಗವಾಗಿ ಸಂಸ್ಥೆಯ ಸ್ಥಾಪಕರು ಹಾಗೂ ಗುರುಗಳು ಸಂಗೀತ ಕೃಪಾ ಕುಟೀರದ ಈ ದೀರ್ಘ ಸಂಗೀತಯಾನವನ್ನು ಸ್ಮರಿಸಿ, ಮುಂದಿನ ತಲೆಮಾರಿಗೆ ಸಂಗೀತ ಸಂಸ್ಕೃತಿಯನ್ನು ಹಸ್ತಾಂತರಿಸುವ ಸಂಕಲ್ಪವನ್ನು ವ್ಯಕ್ತಪಡಿಸಲಿದ್ದಾರೆ.

ಸಂಗೀತ ಕೃಪಾ ಕುಟೀರವು ಕೇವಲ ಸಂಗೀತ ತರಬೇತಿಗಷ್ಟೇ ಸೀಮಿತವಾಗದೆ, ಶಿಸ್ತಿನ ಬದುಕು, ಸಂಸ್ಕಾರ ಮತ್ತು ಸಾತ್ವಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತಿರುವುದು ಇದರ ಪ್ರಮುಖ ವೈಶಿಷ್ಟ್ಯವಾಗಿದೆ. 41 ವರ್ಷಗಳ ಈ ಸಾಧನಯಾನವು, ಭಾರತೀಯ ಸಂಗೀತ ಪರಂಪರೆಯ ಮೇಲಿನ ಸಂಸ್ಥೆಯ ಅಪಾರ ಶ್ರದ್ಧೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಹೆಚ್. ಸುಬ್ರಮಣ್ಯ ಜೋಯಿಸ್ ಹಾಗೂ ಕಾರ್ಯದರ್ಶಿ ಎನ್.ಎಸ್. ಗುಂಡಾ ಜೋಯಿಸ್ ತಿಳಿಸಿದ್ದಾರೆ.

ಸಂಗೀತಪ್ರಿಯರು, ಕಲಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಾಂಸ್ಕೃತಿಕ ಸಂಭ್ರಮಕ್ಕೆ ಸಾಕ್ಷಿಯಾಗಬೇಕೆಂದು ಸಂಸ್ಥೆಯು ವಿನಂತಿಸಿದೆ.

LEAVE A REPLY

Please enter your comment!
Please enter your name here

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group