Homeಸುದ್ದಿಗಳುಸಾವಿರ ಹಾಡಿನ ಸರದಾರನ 50 ನೇ ವರ್ಷದ ಹುಟ್ಟು ಹಬ್ಬ ಹಾಗೂ ಎಷ್ಟ ಚೆಂದಿತ್ತ ಆವಾಗ...

ಸಾವಿರ ಹಾಡಿನ ಸರದಾರನ 50 ನೇ ವರ್ಷದ ಹುಟ್ಟು ಹಬ್ಬ ಹಾಗೂ ಎಷ್ಟ ಚೆಂದಿತ್ತ ಆವಾಗ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ

ಹಳ್ಳೂರ- ಸಾವಿರ ಹಾಡಿನ ಸರದಾರ ಮಹಾರಾಜ ಸಿದ್ದು ಹಳ್ಳೂರ ಅವರ ಸುವರ್ಣ ಮಹೋತ್ಸವ ಹಾಗೂ ‘ಎಷ್ಟ ಚೆಂದಿತ್ತ ಆವಾಗ’ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವು ರವಿವಾರದಂದು ಮೂಡಲಗಿ ಮಂಜುನಾಥ ಸೈನಿಕ ತರಭೇತಿ ಕೇಂದ್ರದ ಆವರಣದಲ್ಲಿ ಜರುಗಲಿದೆ.

ಕಾರ್ಯಕ್ರಮದ ಸಾನ್ನಿಧ್ಯ ಬಾಗೋಜಿಕೊಪ್ಪದ ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಹಿರೇಮಠ ಮಹಾಸ್ವಾಮಿಗಳು. ಅಧ್ಯಕ್ಷತೆ ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ಪಿಎಸ್ಐ ರಾಜು ಪೂಜೆರಿ, ಲಕ್ಷ್ಮಣ ಅಡಿಹುಡಿ, ಬಾಲಶೇಖರ ಬಂದಿ, ಸಂಗಮೇಶ ಗುಜಗೊಂಡ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.

ಮಹಾರಾಜ ಸಿದ್ದು ಹಳ್ಳೂರ ಕಾವ್ಯನಾಮದಿಂದ ಸುಮಾರು ಮೂರು ದಶಕಗಳಿಂದ ಜಾನಪದ ಜಗತ್ತಿನಲ್ಲಿದ್ದು ಆರು ಸಾವಿರಕ್ಕೂ ಅಧಿಕ ಗೀತೆಗಳನ್ನೊಳಗೊಂಡ ನಾಲ್ಕುನೂರಕ್ಕೂ ಮೀರಿ ಧ್ವನಿಸುರುಳಿಗಳನ್ನು ನೀಡಿ ಕೇಳುಗರ ಮನಸೂರೆ-ಗೊಳಿಸಿರುವ ಸಿದ್ದಪ್ಪ ಮಾಯಪ್ಪ ಮಹಾರಾಜಪ್ಪಗೋಳ ಅವರು ಎಲೆಮರೆಯ ಕಾಯಿಯಂತೆ ತೆರೆಮರೆಯಲ್ಲಿರುವರಾದರೂ ಯೂಟ್ಯೂಬ್‌ನಲ್ಲಿ ಬಹಳಷ್ಟು ಸದ್ದು-ಮಾಡುತ್ತಿದ್ದು ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಕೃಷಿಕ ಕುಟುಂಬದ ಮಾಯಪ್ಪ ಮತ್ತು ಶ್ರೀಮತಿ ಸಾಂಯವ್ವ ದಂಪತಿಗಳ ಒಡಲ ಕುಡಿಯಾಗಿ ೨೦-೦೬-೧೯೭೫ ರಲ್ಲಿ ಜನಿಸಿದ ಸಿದ್ದುರವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿ ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿ ಪದವಿ ಪೂರ್ವ ಶಿಕ್ಷಣ ಪಡೆದು, ಪ್ರಸ್ತುತ ತಮ್ಮದೇ ಊರಿನ ಶ್ರೀ ಹಳ್ಳದರಂಗ ಕೋ.ಆಪ್. ಕ್ರೆಡೀಟ್ ಲಿ. ಸಂಘದ ಶಾಖೆಯೊಂದರ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವರ್ತಮಾನದ ವಿದ್ಯಮಾನಗಳಿಗೆ ತೀವ್ರವಾಗಿ ಸ್ಪಂದಿಸುವ ಈ ಕವಿ ದೇಶಭಕ್ತಿ, ದೈವಭಕ್ತಿ, ಪ್ರೀತಿ, ಪ್ರೇಮ, ದಾಂಪತ್ಯಕ್ಕೆ ಹಳ್ಳಿಯ ಸೊಗಡಿನ ಲೇಪನ ಬಳಿದು ಸಹಜವಾಗಿ ಕವಿತೆಗಳನ್ನು ಬರೆಯಬಲ್ಲವರಾಗಿದ್ದಾರೆ. ಅಷ್ಟೇ ಅಲ್ಲದೇ ಬಿ. ಆರ್. ಛಾಯಾ, ಮಂಜುಳಾ ಗುರುರಾಜ, ಅನುರಾಧಾ ಭಟ್, ದಿ. ಜಿ. ವಿ. ಅತ್ರಿ, ಉತ್ತರ ಕರ್ನಾಟಕದ ಜಾನಪದ ಜಾಣ ಶಬ್ಬಿರ ಡಾಂಗೆ, ಬಸವರಾಜ ಘಿವಾರಿಯವರಂತಹ ಅನೇಕ ಖ್ಯಾತನಾಮ ಗಾಯಕರು ಇವರ ಕವಿತೆಗಳಿಗೆ ಧ್ವನಿಯಾಗಿರುವುದು ವಿಶೇಷವಾಗಿದೆ.

ಅನೇಕ ಮಠ ಮಾನ್ಯಗಳಿಂದ, ಸಂಘ, ಸಂಸ್ಥೆಗಳಿಂದ ಸಾಹಿತ್ಯ ರತ್ನ, ಸಾಹಿತ್ಯ ಭೂಷಣ, ಸರಸ್ವತಿಶ್ರೀ ಹಾಗೂ ಸಾಹಿತ್ಯ ಸಾಮ್ರಾಟ ಪ್ರಶಸ್ತಿಗಳನ್ನು ಪಡೆದಿರುವ ಮಹಾರಾಜರು ಕನ್ನಡ ಸಾಹಿತ್ಯ ಪರಿಷತ್ತು ಒಳಗೊಂಡು ಅನೇಕ ಸಾಹಿತ್ಯಿಕ, ಸಾಂಸ್ಕೃತಿಕ ಸಂಘಟನೆಗಳ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಕಾವ್ಯವು ಮಾನವ ಮನಸ್ಸಿನ ಸ್ವಯಂ ಪ್ರೇರಿತ ಉಕ್ಕಿ ಹರಿಯುವಿಕೆ. ಅದೊಂದು ಅಂತರಂಗದ ಸ್ಪುರಣ, ಭಾವನಾತ್ಮಕ ಅಭಿವ್ಯಕ್ತಿ. ಅದು ಸೃಜನಶೀಲ ಮನಸ್ಸಿನ ಬಹಿರಂಗ ಪ್ರತಿಪಾದನೆಯೂ ಹೌದು. ಕಾವ್ಯ ಕಳಪೆಯಾಗಿಹ ಕಾಲ ಘಟ್ಟ ಇದಾಗಿದೆ. ಸಹೃದಯನ ಅನುಸ್ಥಿತಿ ಎದ್ದು ಕಾಣುತ್ತಿದೆ. ಈ ಸಂದರ್ಭದಲ್ಲಿ ‘ಎಷ್ಟ ಚೆಂದಿತ್ತ ಆವಾಗ’ ಕವನ ಸಂಕಲನ ಪ್ರಕಟಿಸುವ ತವಕದಲ್ಲಿರುವ ಮಹಾರಾಜ ಸಿದ್ದುರವರು ಜೀವನಾನುಭವದ ಜೊತೆಗೆ ಓದಿನ ಹರವು ವಿಸ್ತರಿಸಿಕೊಂಡು ಇನ್ನಷ್ಟು ಮೌಲಿಕ ಕವನಗಳನ್ನೊಳಗೊಂಡ ಕೃತಿಗಳನ್ನು ಕಾವ್ಯ ಲೋಕಕ್ಕೆ ನೀಡಲೆಂದು ಶುಭಹಾರೈಸುವೆ.

ವರದಿ: ಮುರಿಗೆಪ್ಪ ಮಾಲಗಾರ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group