ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನ ಪ್ರಕಟಿಸಿರುವ ಸಂಸ್ಕೃತಿ ಚಿಂತಕ, ಅಂಕಣಕಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರ ವಂದೇ ಗುರು ಪರಂಪರಾಮ್’ ಕೃತಿಯು ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನ ವತಿಯಿಂದ ನೀಡುವ ಪ್ರತಿಷ್ಠಿತ ಗುರುಕುಲ ಸಾಹಿತ್ಯ ಶರಭ’ ಪ್ರಶಸ್ತಿಗೆ ಆಯ್ಕೆಯಾಗಿದೆ.
ಸದ್ಯದಲ್ಲೇ ತುಮಕೂರಿನಲ್ಲಿ ನಡೆಯುವ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ರಾಜ್ಯಾಧ್ಯಕ್ಷ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ ಅವರು ತಿಳಿಸಿದ್ದಾರೆ.
ಸಾಹಿತ್ಯ, ಚಿತ್ರಕಲೆ, ವೈದ್ಯಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಎಲೆಮರೆಕಾಯಿಯಂತೆ ಕೆಲಸ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಈ ಪುರಸ್ಕಾರವನ್ನು ನೀಡಲಾಗುತ್ತದೆ.
ಇತ್ತೀಚೆಗೆ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರ ವಂದೇ ಗುರು ಪರಂಪರಾಮ್’ ಕೃತಿಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶರವರು ಲೋಕಾರ್ಪಣೆಗೊಳಿಸಿರುತ್ತಾರೆ. ನಾಡಿನ ಖ್ಯಾತ ಧಾರ್ಮಿಕ – ಸಾಂಸ್ಕೃತಿಕ – ಶೈಕ್ಷಣಿಕ – ಆಧ್ಯಾತ್ಮಿಕ – ವೈಚಾರಿಕ – ಔದ್ಯಮಿಕ – ಪತ್ರಿಕೋದ್ಯಮದ ಹಲವು ಗಣ್ಯರು ಈ ಕೃತಿಯನ್ನು ಮೆಚ್ಚಿ ಅಭಿನಂದಿಸಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ತತ್ವ-ಮಹತ್ವವನ್ನು ವಿವರಿಸುವ ಲೇಖನಗಳ ಸಂಕಲನ ಇದಾಗಿದ್ದು ಆಧ್ಯಾತ್ಮಿಕ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲೊಂದು ಅಮೋಘ ದಾಖಲೆ ಸೃಷ್ಟಿಸಿದೆ ಲೋಕಾರ್ಪಣೆಗೊಂಡ ಕೇವಲ 5 ತಿಂಗಳಲ್ಲೇ 30ಕ್ಕೂ ಅಧಿಕ ಪತ್ರಿಕೆಗಳು (ದೈನಿಕ, ಸಾಪ್ತಾಹಿಕ, ಮಾಸಿಕ ಮತ್ತು ಆನ್ಲೈನ್ ಪತ್ರಿಕೆಗಳು) ಮುಕ್ತ ಕಂಠದಿಂದ ಪ್ರಶಂಸನಾತ್ಮಕವಾಗಿ ಪುಸ್ತಕ ವಿಮರ್ಶೆ ಮಾಡಿರುವುದು ವಂದೇ ಗುರು ಪರಂಪರಾಮ್’ ಕೃತಿಯ ವೈಶಿಷ್ಟ್ಯ.
ಓದುಗರು ಕೊಂಡು ಓದಿ – ಅಪಾರ ಜನಪ್ರಿಯವಾಗಿ ಸದ್ಯದಲ್ಲೇ 2ನೇ ವಿಸ್ತೃತ ಮುದ್ರಣಕ್ಕೆ ತಯಾರಾಗುತ್ತಿದೆ ಹಾಗು ತೆಲುಗು ಅವತರಣಿಕೆ ಬಿಡುಗಡೆಗೊಳ್ಳಲಿದೆ.
ಗುರುವಿನಿಂದ ಅರಿವು ಪಡೆಯಲು ಪ್ರತಿಯೊಬ್ಬ ಜಿಜ್ಞಾಸೆಯು ಈ ಕೃತಿಯನ್ನು ಓದಬೇಕು. ಶಾಲಾ ಕಾಲೇಜುಗಳ ಅಧ್ಯಾಪಕರು, ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಪುಸ್ತಕ ಇದಾಗಿದ್ದು, ಎಲ್ಲಾ ಶಾಲಾ ಕಾಲೇಜು ಗ್ರಂಥಾಲಯಗಳು ಇದನ್ನು ಖರೀದಿಸುವ ಮೂಲಕ ನಶಿಸುತ್ತಿರುವ ಸಂಸ್ಕೃತಿಯನ್ನು ಉಳಿಸಲು ಇದು ಸಹಕಾರಿ ಎಂದು ಪ್ರಶಸ್ತಿಗೆ ಭಾಜನರಾದ ಲೇಖಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಡಾ. ಗುರುರಾಜ ಪೋಶೆಟ್ಟಿಹಳ್ಳಿ – ಸಂಕ್ಷಿಪ್ತ ಪರಿಚಯ
1980 ರಲ್ಲಿ ಜನಿಸಿದ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಇವರು ಪತ್ರಿಕೋದ್ಯಮ – ವಿಷಯದಲ್ಲಿ ಪದವಿ, ಕನ್ನಡ ಭಾಷೆಯಲ್ಲಿ ಎಂ. ಎ. ಪದವಿ ಪಡೆದು, ನೀತಿ ಆಯೋಗದಿಂದ ಮಾನ್ಯತೆ ಪಡೆದ ಐವಿಎಪಿಯಿಂದ ಇಂಡಾಲಜಿ – ಗಣಪತಿ’ ಕುರಿತಾದ ವಿಶೇಷ ಅಧ್ಯಯನಕ್ಕೆ ರಾಜಮಾತಾ ಶ್ರೀಮತಿ ಪ್ರಮೋದದೇವಿ ಒಡೆಯರ್ರಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಸಂಸ್ಕøತಿ ಚಿಂತಕ – ಅಂಕಣಕಾರ, ಮಾಧ್ಯಮ ಸಮಾಲೋಚಕರಾಗಿ, ಸಂಘಟಕರಾಗಿದ್ದು, ಪ್ರಣವ ಮೀಡಿಯಾ ಹೌಸ್ನ ರೂವಾರಿಗಳಾಗಿದ್ದಾರೆ.
ಶ್ರೀಯುತರು ಉಡುಪಿ ಪಲಿಮಾರು ಪರ್ಯಾಯದಲ್ಲಿ ಶ್ರೀಕೃಷ್ಣ ಸೇವಾಮಾನ್ಯ, ಸರ್. ಎಂ. ವಿ. ರಾಜ್ಯ ಪ್ರಶಸ್ತಿ, ಆಚಾರ್ಯ ವಿದ್ಯಾರಣ್ಯ, ನಾಡಭೂಷಣ, ಧನ್ವಂತರಿ ಪುರಸ್ಕಾರ, ಸುವರ್ಣ ಗಜಾನನ, ಹರಿದಾಸ ಅನುಗ್ರಹ ಹಾಗೂ ಮಹಾತ್ಮಗಾಂಧಿ ಸದ್ಭಾವನಾ ಪ್ರಶಸ್ತಿ ಮೊದಲಾದ ಗೌರವಗಳಿಗೆ ಭಾಜನರಾಗಿದ್ದಾರೆ.
ಕನ್ನಡದ ಕಂಪಿನಲಿ ಕರಿವದನ, ಭಕ್ತಿ ಪಾರಿಜಾತ, ಕಲಾಕಸ್ತೂರಿ ವರ್ಣಯಾನ, ವಂದೇ ಗುರು ಪರಂಪರಾಮ್ , ಸತ್ಸಂಗ ಸಂಪದ ಮುಂತಾದ ಪುಸ್ತಕಗಳನ್ನು ಪ್ರಕಟಿಸಿ ಪ್ರಖ್ಯಾತರಾಗಿದ್ದಾರೆ. ಅಡ್ವೈಸರ್ ಮಾಸಿಕ ಪತ್ರಿಕೆಯ `ಯೋಗ ವಿಶೇಷಾಂಕ 2018’’ರ ಅತಿಥಿ ಸಂಪಾದಕರಾಗಿ ಹಾಗೂ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ – 70 ರ ಅಭಿನಂದನಾ ಗ್ರಂಥ “ಭೀಮರಥಿ ಬಾಗಿನ’ ದ (950 ಪುಟಗಳು) ಪ್ರಧಾನ ಸಂಪಾದಕರಾಗಿ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ.
ಕಾಕೋಳು ಶ್ರೀವೇಣುಗೋಪಾಲ ದೇವಸ್ಥಾನ ಟ್ರಸ್ಟ್ (ರಿ)ನ ಟ್ರಸ್ಟಿಯಾಗಿ, ಅಖಿಲ ಕರ್ನಾಟಕ ಸತ್ಸಂಗ ಭಜನಾ ಮಹಾಮಂಡಳಿಯ ಸಹ ಕಾರ್ಯದರ್ಶಿಗಳಾಗಿ, ಟಿಟಿಡಿ ಧಾರ್ಮಿಕ ಪುಸ್ತಕ ಧನಸಹಾಯ ಪರಿಣತ ತಜ್ಞ ಸಮಿತಿ ಸದಸ್ಯರಾಗಿ, ಅಕಾಡೆಮಿಕ್ ಕೌನ್ಸಿಲ್ – ಜಿವಿಎಪಿ, ಪಾಂಚಜನ್ಯ ಪ್ರತಿಷ್ಠಾನ ಹಾಗೂ ಅಮರ ಬಾಪು ಚಿಂತನ – ಕನ್ನಡ ಮತ್ತು ಆಂಗ್ಲ ದ್ವೈಮಾಸಿಕ ಪತ್ರಿಕೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಾತ್ವಿಕ ಸಾಹಿತ್ಯ ವಕ್ತಾರರಾಗಿದ್ದಾರೆ.
ಗುರುರಾಜ ಪೋಶೆಟ್ಟಿಹಳ್ಳಿಯವರ ವಿಳಾಸ : ಫ್ಲಾಟ್ ನಂ.307, ‘ವಿಶ್ವಂಭರ’, 3ನೇ ಮಹಡಿ, ವಿ2 ಸ್ನೇಹ ಅಪಾರ್ಟ್ಮೆಂಟ್, 14ನೇ ಅಡ್ಡರಸ್ತೆ, ಗಿರಿನಗರ 3ನೇ ಹಂತ, ಆವಲಹಳ್ಳಿ ಬಿಡಿಎ ಹೊಸ ಬಡಾವಣೆ, ಬೆಂಗಳೂರು-560085