ದೇಶದಲ್ಲಿ ಎಲ್ಲರಿಗೂ ಆಗಷ್ಟ್ ೧೫ ಎಂದರೆ ಸಂಭ್ರಮದ ದಿನ. ಬ್ರಿಟೀಷರ ಕಪಿ ಮುಷ್ಟಿಯಿಂದ ಭಾರತ ಬಿಡುಗಡೆಗೊಂಡು ಸ್ವಾತಂತ್ರ್ಯ ಹೊಂದಿದ ದಿನ. ಆದರೆ ಅದಕ್ಕಿಂತ ಮುಂಚೆ ಒಂದು ದಿನ ಆಗಷ್ಟ್ ೧೪ ನ್ನು ಭಾರತ ಎಂದೂ ಮರೆಯಲಾಗದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಆ.೧೪ ಕ್ಕೆ ವಿಶೇಷ ಪ್ರಾಧಾನ್ಯತೆ ನೀಡಿದ್ದು ಪ್ರತಿ ವರ್ಷ ಈ ದಿನವನ್ನು ‘ ಭಯಾನಕ ವಿಭಜನಾ ನೆನಪಿನ ದಿನ ‘ ವನ್ನಾಗಿ ಆಚರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ದಿನದ ಮುನ್ನಾ ದಿನವಾದ ಇಂದು ಮೋದಿಯವರು ಸರಣಿ ಟ್ವೀಟ್ ಮಾಡಿದ್ದು ಇಂದಿನ ಟ್ವೀಟ್ ನಲ್ಲಿ ಭಾರತ ದೇಶದ ವಿಭಜನೆಯಾಗಿ ಪಾಕಿಸ್ತಾನ ರಚನೆಯಾಗಿದ್ದನ್ನು ಸ್ಮರಿಸಿಕೊಂಡು ವಿಭಜನೆಯ ಕಾಲಕ್ಕೆ ನಡೆದ ಗಲಭೆಗಳು, ಉಂಟಾದ ಪ್ರಾಣಹಾನಿಗಳನ್ನು ಸ್ಮರಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ದೇಶದ ವಿಭಜನೆಯ ಕಾಲಕ್ಕೆ ನಮ್ಮ ದೇಶವಾಸಿಗಳು ಅನುಭವಿಸಿದ ನೋವನ್ನು ಎಂದೂ ಮರೆಯಲಾಗದು ಎಂದಿದ್ದಾರೆ.
“ದೇಶದ ವಿಭಜನೆಯ ನೋವನ್ನು ಎಂದೂ ಮರೆಯಲಾಗದು. ದ್ವೇಷ ಹಾಗೂ ಹಿಂಸೆಯ ಕಾರಣದಿಂದ ನಮ್ಮ ಸಹೋದರ ಸಹೋದರಿಯರು ತಮ್ಮ ಸ್ಥಳ ತೊರೆಯಬೇಕಾಯಿತು ಅಷ್ಟೇ ಅಲ್ಲದೆ ಜೀವವನ್ನೇ ಕಳೆದುಕೊಳ್ಳಬೇಕಾಯಿತು. ಅವರ ಸಂಘರ್ಷ ಮತ್ತು ಬಲಿದಾನದ ನೆನಪಿಗಾಗಿ ಆ.೧೪ ನ್ನು partition horrors remembrance day ಎಂದು ಆಚರಿಸಲು ತೀರ್ಮಾನಿಸಲಾಗಿದೆ ” ಎಂದು ಅವರು ಟ್ವೀಟ್ ಮಾಡಿದ್ದಾರೆ
ಇನ್ನೊಂದು ಟ್ವೀಟ್ ನಲ್ಲಿ ಮೋದಿಯವರು, ” Partition Horrors Remembrance Day ಯನ್ನು ಭೇದಭಾವ, ವೈಮನಸ್ಯ ಹಾಗೂ ಕೆಟ್ಟ ಮನಸ್ಸುಗಳಂಥ ವಿಷವನ್ನು ತೊಡೆದುಹಾಕಲು ಪ್ರೇರೇಪಿಸುವುದು ಅಷ್ಟೇ ಅಲ್ಲ ಏಕತೆ, ಸಾಮಾಜಿಕ ಸದ್ಭಾವನೆ ಹಾಗೂ ಮಾನವೀಯ ಸಂವೇದನೆಗಳನ್ನು ಕೂಡ ಬಲಪಡಿಸುವುದು ” ಎಂದಿದ್ದಾರೆ.

