ಸವದತ್ತಿ: ಕೃಷ್ಣನ ಬಾಲ್ಯದ ಪವಾಡಗಳು, ಗೋಪಿಕೆಯರೊಂದಿಗಿನ ಒಡನಾಟ ಮತ್ತು ಕುರುಕ್ಷೇತ್ರ ಯುದ್ಧದಲ್ಲಿನ ಪ್ರಸಂಗಗಳು ಹಾಗೂ ಶ್ರೀಕೃಷ್ಣನ ಭಗವದ್ಗೀತೆಯ ಸಾರವನ್ನು ಮಕ್ಕಳಿಗೆ ಕಥೆಯ ರೂಪದಲ್ಲಿ ತಿಳಿಸಬೇಕು ಹಾಗೂ ನಾವುಗಳು ತಿಳಿದುಕೊಳ್ಳಬೇಕು ಎಂದು ಶಿಕ್ಷಕ ಎನ್.ಎನ್.ಕಬ್ಬೂರ ಅಭಿಪ್ರಾಯ ಪಟ್ಟರು.
ಸವದತ್ತಿ ನಗರದ ಮಾಮನಿಕೆರೆ ರಸ್ತೆಯ ಬಸವೇಶ್ವರ ಬಡಾವಣೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬಡಾವಣೆಯ ಸುಮಾರು 50 ಕ್ಕಿಂತ ಹೆಚ್ಚು ಮಕ್ಕಳು ರಾಧಾ-ಕೃಷ್ಣನ ವೇಷದಲ್ಲಿ ಪಾಲ್ಗೊಂಡಿದ್ದರು. ಏಕಪಾತ್ರಾಭಿನಯ, ಭಕ್ತಿಗೀತೆ, ಕಿರುನಾಟಕಗಳ ಮೂಲಕ ಮಕ್ಕಳು ರಂಜಿಸಿದರು.
ಕಾರ್ಯಕ್ರಮದಲ್ಲಿ ಶಿಲ್ಪಾ ತೊಡಕರ ನಿರೂಪಿಸಿದರು, ಇಂದಿರಾ ಬಜೇರಿ ಪ್ರಾರ್ಥಿಸಿದರು, ಅನ್ನಪೂರ್ಣ ಕಾಜಗಾರ ವಂದಿಸಿದರು. ಬಡಾವಣೆಯ ಪಾಲಕ ಪೋಷಕರು ಬಾಗವಹಿಸಿದ್ದರು.