ಬೆಂಗಳೂರು: ಬನಶಂಕರಿ ೩ನೇ ಹಂತದ ಇಟ್ಟಮಡುವಿನ ಬೆಸ್ಕಾಂ ಕಛೇರಿಯಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಕಛೇರಿಯ ಸಿಬ್ಬಂದಿ ವರ್ಗದವರು ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿ ವಿನಾಯಕ ಚತುರ್ಥಿ ಆಚರಿಸಿದರು.
ಇಟ್ಟಮಡುವಿನ ಬೆಸ್ಕಾಂ ಕಛೇರಿಗೆ ಪೂಜೆ ಮಾಡಿಸಲು ಪೂರೋಹಿತರಾದ ಶ್ರೀನಿವಾಸ್ ಮತ್ತು ವರುಣ್ ರವರು ಬಂದು ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿ, ಪೂಜೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಹಣೆಗೆ ಕುಂಕುಮದ ತಿಲಕವಿಟ್ಟು – ಜಗತ್ತಿನೆಲ್ಲೆಡೆ ಶಾಂತಿ ನೆಲಸಲಿ ಹಾಗೂ ಕೋವಿಡ್ ೧೯ ಮಹಾಮಾರಿಯಿಂದ ಭಾರತಕ್ಕೆ ಮುಕ್ತಿ ಸಿಗಲಿಯೆಂದು ವಿನಾಯಕನಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಬೆಸ್ಕಾಂ ಕಛೇರಿಯ ಮುಂಭಾಗದಲ್ಲಿ ಬಣ್ಣ-ಬಣ್ಣದ ರಂಗೋಲಿ ಹಾಕಿ, ಬಾಳೇ ಕಂಬ, ಮಾವಿನ ತೋರಣ ಕಟ್ಟಿ- ವಿನಾಯಕನ ಮಂಟಪವನ್ನು ವಿವಿಧ ಪುಷ್ಪಗಳಿಂದ ಅಲಂಕರ ಮಾಡಲಾಗಿತ್ತು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲಕ್ಷ್ಮೀಶ್ ಮತ್ತು ಜ್ಯೂನಿಯರ್ ಇಂಜಿನಿಯರ್ ಶಂಕರಪ್ಪ ಹಾಗೂ ಕಛೇರಿಯ ಸಿಬ್ಬಂದಿಗಳು ಭಾಗವಹಿಸಿದ್ದರು.
ವಿನಾಯಕ ಚತುರ್ಥಿಹಬ್ಬವಾದ ಇಂದು ವಿನಾಯಕನ ಮೂರ್ತಿ ಪ್ರತಿಷ್ಠೆ ಮಾಡಿ ಈ ದಿನದ ಸಂಜೆ ಕಛೇರಿಯ ಹಿಂಭಾಗ ಇರುವ ಬಾವಿಯಲ್ಲಿ ವಿಸರ್ಜನೆ ಮಾಡುತ್ತೇವೆ ಎಂದು ಪತ್ರಿಕೆಗೆ ಶಂಕರಪ್ಪ ತಿಳಿಸಿದರು.
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ