ಸಿಂದಗಿ: ಖ್ಯಾತ ಹಾಸ್ಯನಟ ಹಾಗೂ ಟಿಪ್ಪು ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ರಾಜು ತಾಳಿಕೋಟಿ ಅವರ ಮೇಲೆ ಹಲ್ಲೆಯನ್ನು ಖಂಡಿಸಿ ಟಿಪ್ಪು ಕ್ರಾಂತಿ ಸೇನೆ ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಗ್ರೇಡ್-2 ತಹಶೀಲ್ದಾರ ಪ್ರಕಾಶ ಸಿಂದಗಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಟಿಪ್ಪು ಕ್ರಾಂತಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ದಸ್ತಗೀರ ಮುಲ್ಲಾ, ದಸಂಸ ಜಿಲ್ಲಾ ಸಂ.ಸಂಚಾಲಕ ವೈ.ಸಿ.ಮಯೂರ, ಲಿಂಗಾಯತ ಹಿತ ರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ ಕಲಬುರ್ಗಿ, ರಾಜು ಗುಬ್ಬೇವಾಡ ಮಾತನಾಡಿ, ಜಿಲ್ಲೆಯಲ್ಲಿ ಹಂದಿಗನೂರ ಸಿದ್ರಾಮಪ್ಪ ಕಲಾವಿದರ ನಂತರ ಅವಳಿ ಜಿಲ್ಲೆಯಲ್ಲಿ ಹೆಸರು ಮಾಡಿದ ಡಾ. ರಾಜು ತಾಳಿಕೋಟಿ ಅವರು ಒಬ್ಬರು. ನಾಟಕರಂಗದಲ್ಲಿ ಹಾಸ್ಯಪಾತ್ರ, ಖಳನಾಯಕ ಪಾತ್ರ ಮಾಡಿ ಚಲನಚಿತ್ರ ನಟರಾಗಿ ಸಾಮಾಜಿಕವಾಗಿ ಬೆಳೆದಿದ್ದಾರೆ ಇವರ ಬೆಳವಣಿಗೆಯನ್ನು ನೋಡದೇ ಅವರ ವೃತ್ತಿರಂಗಕ್ಕೆ ಚ್ಯುತಿ ತರಬೇಕು ಎಂದು ಇಲ್ಲಸಲ್ಲದ ಆರೋಪಗಳನ್ನು ಹಾಕಿ ಅವರಿಗೆ ಪಿಸ್ತೂಲಿನಿಂದ ಹೆದರಿಸಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದರು.
ಕೂಲಿ ಕಬ್ಬಲಗಿ ಯುವ ವೇದಿಕೆಯ ರಾಜ್ಯಾಧ್ಯಕ್ಷ ಶಿವಾಜಿ ಮೇಟಗಾರ ಮಾತನಾಡಿ, ಕಲಾವಿದರು ಸರಕಾರದ ಸಂಪತ್ತು ಅವರಿಗೆ ಸೂಕ್ತ ರಕ್ಷಣೆ ಕೊಡಲೇಬೇಕು ಅವರಿಗೆ ಸೂಕ್ತ ರಕ್ಷಣೆ ನೀಡಬೇಕು. ಜಿಲ್ಲಾ ವರಿಷ್ಠಾಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ ಯಾರೆ ತಪ್ಪಿತಸ್ಥರಿದ್ದರು ಕೂಡಾ ನಿರ್ಬಿಢೆಯಾಗಿ ಬಂಧಿಸಿ ಶಿಕ್ಷೆಗೆ ಗುರಿ ಪಡಿಸಬೇಕು ಇದರಲ್ಲಿ ವಿಳಂಬ ನೀತಿ ಅನುಸರಿಸಿದರೆ ಟಿಪ್ಪು ಸೇನೆ ಪದಾಧಿಕಾರಿಗಳು ಸೇರಿದಂತೆ ದಸಂಸ ಸಂಘಟನೆ, ಕೂಲಿ ಕಬ್ಬಲಗಿ ಸಂಘಟನೆ, ಲಿಂಗಾಯತ ಹಿತರಕ್ಷಣಾ ಸಮಿತಿಯು ಉಗ್ರವಾದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಒಕ್ಕೂರಲಿನಿಂದ ಎಚ್ಚರಿಕೆ ನೀಡಿದರು.
ಡಾ. ರಾಜು ತಾಳಿಕೋಟಿಯವರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಬೇಕು, ಅವರ ಮೇಲೆ ಮಾಡಿರುವ ಸುಳ್ಳು ಪ್ರಕರಣವನ್ನು ತೆಗೆದು ಹಾಕಿ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಉತ್ತರ ಕರ್ನಾಟಕ ಅಧ್ಯಕ್ಷ ರಜಾಕ ನಾಟೀಕಾರ, ರಮೇಶ ಐಹೋಳೆ, ರಾಜು ಮದರಖಾನ, ಶಬ್ಬೀರ ಬಾಗವಾನ, ಯುಸೂಪ ಮನಿಯಾರ, ಕಿಜರ್ ಮುಲ್ಲಾ, ಶಾಜೀದ ರಾಂಪೂರ, ಅಬ್ಬಾಸ ನಾಲತವಾಡ, ಜಬ್ಬಾರ ಮುಗುಳಿ, ಇಮ್ರಾನ ಬಳಗಾನೂರ, ಅಸ್ಲಾಮ ರಾಂಪೂರ, ಜುಬೇರ ಬಾಗವಾನ, ಮುಸ್ತಾಪ ಯಂಕಂಚಿ, ಮೋದಿನ ಯಂಕಂಚಿ, ಮಡಿವಾಳ ತಳವಾರ, ಇರ್ಫಾನ ಬಾಗವಾನ ಜೈಭೀಮ ತಳಕೇರಿ ಸೇರಿದಂತೆ ಅನೇಕರು ಆಗ್ರಹಿಸಿದರು.