ಮೂಡಲಗಿಯಲ್ಲಿದೆಯೇ ನಕಲಿ ಪೈಪ್ ಮೇಲೆ ಪ್ರತಿಷ್ಠಿತ ಕಂಪನಿಗಳ ಹೆಸರು ಹಾಕುವ ಜಾಲ ?
ಮೂಡಲಗಿ – ಪ್ರತಿ ಮನೆಗೂ ಶುದ್ಧ ನೀರಿನ ಸಂಪರ್ಕ ಕಲ್ಪಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಯಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಪೈಪ್ ಗಳನ್ನು ಗುತ್ತಿಗೆದಾರ ಬಳಕೆ ಮಾಡಿದ್ದು ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡರಾದ ಲಕ್ಕಣ್ಣ ಸವಸುದ್ದಿ ಹಾಗೂ ಗುರುನಾಥ ಗಂಗಣ್ಣವರ ಆಗ್ರಹಿಸಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಗುಜನಟ್ಟಿ ಹಾಗೂ ಇತರೆ ಪಂಚಾಯತಗಳ ವ್ಯಾಪ್ತಿಯಲ್ಲಿ ರೂ.೨.೫೦ ಕೋಟಿಯ ಜಲ ಜೀವನ ಮಿಷನ್ ಕಾಮಗಾರಿ ನಡೆದಿದ್ದು ಗುಜನಟ್ಟಿ ಗ್ರಾಮದಲ್ಲಿ ಗುತ್ತಿಗೆದಾರ ಕಳಪೆ ಗುಣಮಟ್ಟದ ಪಿವಿಸಿ ಪೈಪ್ ಬಳಕೆ ಮಾಡಿದ್ದು ಅವುಗಳ ಮೇಲೆ ಪ್ರತಿಷ್ಠಿತ ಜೈನ್ ಕಂಪನಿಯ ಹೆಸರು ಮುದ್ರಿಸಲಾಗಿದೆ. ಆದರೆ ಪೈಪ್ ನಕಲಿ ಆಗಿವೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಸದರಿ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಕಾನೂನು ಕ್ರಮ ಜರುಗಿಸಬೇಕು ಎಂದರು.
ಈ ಬಗ್ಗೆ ಮೊದಲು ಮಾತನಾಡಿದ ಗುರು ಅವರು, ಈ ಗುತ್ತಿಗೆದಾರನ ಅವ್ಯವಹಾರದ ಬಗ್ಗೆ ನಾವು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗೆ ದೂರು ನೀಡಿದಾಗ ಮುಖ್ಯ ಇಂಜಿನಿಯರ್ ಅವರು ಅವುಗಳನ್ನು ಪರಿಶೀಲಿಸಿ ಈಗ ನಡೆದಿರುವ ಕಳಪೆ ಕಾಮಗಾರಿಯನ್ನು ರದ್ದು ಮಾಡಿ ಮತ್ತೊಮ್ಮೆ ಮಾಡಿಸುವುದಾಗಿ ಭರವಸೆ ಕೊಟ್ಟಿದ್ದಾಗಿ ಹೇಳಿದರು.

ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ, ಜಲ ಜೀವನ ಮಿಷನ್ ಯೋಜನೆಯಲ್ಲಿ ಗುಜನಟ್ಟಿ ಅಲ್ಲದೆ ಮೂಡಲಗಿ ತಾಲೂಕಿನ ರಾಜಾಪೂರ, ಪಾಮಲದಿನ್ನಿ, ಮುನ್ಯಾಳ, ರಂಗಾಪೂರ, ಕಮಲದಿನ್ನಿ, ಹೊಸಟ್ಟಿ ಈ ಗ್ರಾಮಗಳಲ್ಲೂ ಕಾಮಗಾರಿ ನಡೆದಿದ್ದು ಇಲ್ಲಿಯೂ ಕಳಪೆ ಕಾಮಗಾರಿ ನಡೆಯದಂತೆ ಸೂಕ್ತ ನಿಗಾ ವಹಿಸಬೇಕಾಗಿದೆ ಎಂದರಲ್ಲದೆ, ಶಾಸಕರ ಗಮನಕ್ಕೆ ಬಾರದೆ ಇಂಥ ಅವ್ಯವಹಾರ ನಡೆಯಲು ಸಾಧ್ಯವೇ ಇಲ್ಲ ಎಂಬ ಗಂಭೀರ ಆರೋಪ ಮಾಡಿದರು.
ಒಂದು ಯೋಜನೆ ಜಾರಿಯಾದರೆ ಅದು ೧೯-೧೫ ವರ್ಷವಾದರೂ ಉಪಯೋಗಕ್ಕೆ ಬರಬೇಕು. ಒಂದು ನೀರಿನ ಪೈಪ್ ಕೇವಲ ಆರು ತಿಂಗಳಲ್ಲಿ ಹಾಳಾದರೆ ಹಳ್ಳಿಯ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ನಮ್ಮ ಶಾಸಕರ ಪಿಎಗಳು, ಕಾಂಟ್ರಾಕ್ಟರ್ ಗಳು, ಇಂಜಿನೀಯರ್ ಗಳು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿ ದುಡ್ಡು ಮಾಡಿದ್ದಾರೆ ಎಂಬುದಾಗಿ ಹಳ್ಳಿಯ ಜನರೇ ನಮಗೆ ಹೇಳಿದ್ದಾರೆ. ಆ ಮಾಹಿತಿಯನ್ನೇ ನಾವು ಸಂಗ್ರಹಿಸಿ ನಿಮಗೆ ನೀಡುತ್ತಿದ್ದೇವೆ ಇದರಲ್ಲಿ ನಮ್ಮ ದುರುದ್ದೇಶವೇನೂ ಇಲ್ಲ. ನಾವು ಜನರ ಸಲುವಾಗಿ ಹೋರಾಟ ಮಾಡುತ್ತಿದ್ದೇವೆ. ಇದನ್ನು ಮಾಧ್ಯಮಗಳು ಎತ್ತಿ ತೋರಿಸಬೇಕು ಎಂದ ಲಕ್ಕಣ್ಣ ಅವರು, ಭ್ರಷ್ಟಾಚಾರ ಮಾಡುವ ಕಾಂಟ್ರಾಕ್ಟರ್, ಇಂಜಿನಿಯರ್ ಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ನಾವು ಜಿಲ್ಲಾಧಿಕಾರಿಗಳ ಕಚೇರಿ ಎದುರು ದೊಡ್ಡ ಸ್ಕ್ರೀನ್ ಹಾಕಿ ಅರಭಾವಿ ಕ್ಷೇತ್ರದಲ್ಲಿ ಯಾವ ರಸ್ತೆ ಹೇಗಿದೆ, ಎಷ್ಟು ಹದಗೆಟ್ಟಿದೆ ಎಂಬ ವಸ್ತುಸ್ಥಿತಿಯನ್ನು ಪ್ರಸಾರ ಮಾಡಬೇಕಾಗುತ್ತದೆ ಇದನ್ನು ಜಿಲ್ಲೆಗೆ ಬರುವ ಎಲ್ಲರೂ ನೋಡುತ್ತಾರೆ ಎಂದರು.
ಗಂಗಣ್ಣವರ ಮಾತನಾಡಿ, ಮೂಡಲಗಿಯಲ್ಲೇ ಪಿವಿಸಿ ಪೈಪ್ ತಯಾರಿಕಾ ಘಟಕದಲ್ಲಿ ನಕಲಿ ಪೈಪ್ ಗಳ ಮೇಲೆ ಫಿನೋಲೆಕ್ಸ್, ಜೈನ್, ಸುಪ್ರೀಮ್ ಎಂದು ಪ್ರತಿಷ್ಠಿತ ಕಂಪನಿಗಳ ಸೀಲ್ ಹಾಕಿ ಕೊಡುವ ಜಾಲ ಇದೆಯೆಂಬುದಾಗಿ ನಮಗೆ ತಿಳಿದಿದೆ ಇದರ ಬಗ್ಗೆ ಸಂಬಂಧಪಟ್ಟವರು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸುವ ಅಗತ್ಯವಿದೆ ಎಂದರು.
ಈ ಬಗ್ಗೆ ಆಗಲೇ ಪಂಚಾಯತ ರಾಜ್ ಸಚಿವ ಈಶ್ವರಪ್ಪ ಅವರ ಜೊತೆ ಮೊಬೈಲ್ ನಲ್ಲಿ ಮಾತನಾಡಿದ ಲಕ್ಕಣ್ಣ ಅವರು ಜಲ ಜೀವನ ಮಿಷನ್ ಕಳಪೆ ಕಾಮಗಾರಿಯ ಬಗ್ಗೆ ತಿಳಿಸಿದರು. ತಕ್ಷಣವೇ ಎಲ್ಲ ಮಾಹಿತಿಯನ್ನು ನನಗೆ ಕಳಿಸಿಕೊಡಿ ತಪ್ಪಿತಸ್ಥ ಅಧಿಕಾರಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಈಶ್ವರಪ್ಪ ಪ್ರತಿಕ್ರಿಯಿಸಿದರು.
ಸುಭಾಸ ಲೋಕನ್ನವರ, ಗದಿಗೆಪ್ಪಾ ನಾಗನೂರ, ಶಿವಾನಂದ ಮಡಿವಾಳರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮೂಡಲಗಿಯಲ್ಲಿ ನಕಲಿ ಪೈಪ್ ಜಾಲ ?
ಪತ್ರಿಕಾಗೋಷ್ಠಿಯಲ್ಲಿ ಗುರು ಗಂಗಣ್ಣವರ ಹಾಗೂ ಲಕ್ಕಣ್ಣ ಸವಸುದ್ದಿಯವರು ನಕಲಿ ಪಿವಿಸಿ ಪೈಪ್ ತಯಾರಿಕಾ ಜಾಲದ ಬಗ್ಗೆ ಪ್ರಸ್ತಾಪಿಸಿ, ಸ್ಥಳೀಯವಾಗಿ ತಯಾರಾಗುವ ಪಿವಿಸಿ ಪೈಪ್ ಗಳ ಮೇಲೆ ಫಿನೋಲೆಕ್ಸ್, ಜೈನ್, ಸುಪ್ರೀಮ್ ಕಂಪನಿಗಳ ಹೆಸರು ಹಾಕುತ್ತಿರುವುದಾಗಿ ಹೇಳಿದ್ದು ಗಂಭೀರ ಸ್ವರೂಪದ್ದಾಗಿದೆ.
ನಕಲಿ ಪೈಪ್ ಗಳ ಮೇಲೆ ಪ್ರತಿಷ್ಠಿತ ಕಂಪನಿಗಳ ಹೆಸರು ಹಾಕುವುದು ತೀರಾ ದೊಡ್ಡ ಅಪರಾಧವಾಗಿದ್ದು ಇದರಿಂದ ಹೆಚ್ಚಾಗಿ ರೈತರಿಗೇ ಮೋಸವಾಗುತ್ತದೆ ಇದನ್ನು ಯಾರು ಸರಿಪಡಿಸಬೇಕು ಎಂಬ ಪ್ರಶ್ನೆ ಉದ್ಭವಿಸಿತು.
ವರದಿ: ಉಮೇಶ ಬೆಳಕೂಡ

