ಸಿಂದಗಿ: ಉಪಚುನಾವಣೆ ನಿಮಿತ್ತ ಸಿಂದಗಿಯಲ್ಲಿ ನಡೆಯುತ್ತಿರುವ ಕಾರ್ಯಕರ್ತರ ಸಭೆಗೆ ಆಗಮಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ 4 ಕ್ರೂಸರ್ ಹಾಗೂ 4 ಬೈಕ್ಗಳನ್ನು ನೀತಿ ಸಂಹಿತೆ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಸಿಂದಗಿ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆಯನ್ನು ಖಂಡಿಸಿ ಪಟ್ಟಣದ ಪೊಲೀಸ ಠಾಣಾ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ನಾಮಪತ್ರ ಸಲ್ಲಿಕೆಗೆ ಬಂದಿದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೇವಲ ಕಾಂಗ್ರೆಸ್ ಕಾರ್ಯಕರ್ತರ ವಾಹನಗಳನ್ನು ಹಿಡಿದಿದ್ದಕ್ಕೆ ಪೊಲೀಸರ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಂತೆ ಡಿವೈಎಸ್ಪಿ ಶ್ರೀಧರ ದಡ್ಡಿ ಜೊತೆ ಕಾಂಗ್ರೆಸ್ ಕಾರ್ಯಕರ್ತರ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ಡಾ. ಶಾಂತವೀರ ಮನಗೂಳಿ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಏಕಕಾಲಕ್ಕೆ ನಡೆಯುತ್ತಿದೆ. ಬಿಜೆಪಿಯ ಕಾರ್ಯಕರ್ತರ ಬಹಳಷ್ಟು ವಾಹನಗಳು ಪಕ್ಷದ ಧ್ವಜ ಹಾಕಿಕೊಂಡು ತಿರುಗಾಡುತ್ತಿದ್ದರು ಅವುಗಳನ್ನು ಹಿಡಿಯುತ್ತಿಲ್ಲ ಬರೀ ಕಾಂಗ್ರೆಸ್ ಕಾರ್ಯಕರ್ತರ ವಾಹನಗಳನ್ನು ಮಾತ್ರ ಹಿಡಿದಿರುವುದನ್ನು ನೋಡಿದರೆ ಪೊಲೀಸ ಇಲಾಖೆಗೆ ಬಿಜೆಪಿ ಸರಕಾರದ ಕಾಂಗ್ರೆಸ್ ಪಕ್ಷದವರಿಗೆ ತೊಂದರೆ ಕೊಟ್ಟು ಭಯಪಡಿಸಿ ಎನ್ನುವ ನಿರ್ದೇಶನ ಇರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪ್ರತಿ ಚುನಾವಣೆಯಲ್ಲಿ ಇಂತಹ ಕುತಂತ್ರ ನಡೆಸುತ್ತಲೇ ಬಂದಿದ್ದಾರೆ ಈ ಬಾರಿ ಹಿಂದಿನಂತೆ ಮಾಡಲು ಬಿಡುವುದಿಲ್ಲ. ಚುನಾವಣಾಧಿಕಾರಿ ರಾಹುಲ ಸಿಂಧೆಯವರು ಬಂದು ಸರಿಯಾದ ಉತ್ತರ ನೀಡಿ ನಮ್ಮ ಕಾರ್ಯಕರ್ತರ ವಾಹನಗಳನ್ನು ಬಿಡುಗಡೆಗೊಳಿಸಬೇಕು ಎಂದು ಪಟ್ಟು ಹಿಡಿದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ದೊಡಮನಿ ಮಾತನಾಡಿ, ಬಿಜೆಪಿ ಪಕ್ಷ ಚುನಾವಣೆ ಸಂದರ್ಭದಲ್ಲಿ ಇಂತಹ ಕುತಂತ್ರ ಮಾಡುತ್ತಲೇ ಚುನಾವಣೆ ಮಾಡುತ್ತದೆ ನೇರವಾಗಿ ಚುನಾವಣೆ ಮಾಡುವ ದೈರ್ಯವಿಲ್ಲ. ಕಳೆದ 2,3 ಚುನಾವಣೆಗಳಲ್ಲಿ ಇಂತಹ ಘಟನೆಗಳು ಆಗಿವೆ. ಇದೇನು ಹೊಸದಲ್ಲ. ಪೊಲೀಸ ಇಲಾಖೆ ಬಿಜೆಪಿ ಕಪಿ ಮುಷ್ಠಿಯಲ್ಲಿದೆ ಜನರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಪೊಲೀಸ ಇಲಾಖೆ ನಿರ್ಲಕ್ಷ್ಯಕ್ಕೆ ಜನರು ಪೊಲೀಸ ಇಲಾಖೆಯ ಮೇಲೆ ಕಲ್ಲು ತೂರಾಟ ಮಾಡಿದ್ದು ಇನ್ನೂ ಮರೆತಂತೆ ಕಾಣುತ್ತೆ ಅಂತಹ ಪ್ರಮಾದ ಬರದ ಹಾಗೆ ನಡೆದುಕೊಳ್ಳಬೇಕು ನಿಮ್ಮ ರಕ್ಷಣೆಗೆ ಬಿಜೆಪಿಯವರು ಬರುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ಎಲ್ಲರಿಗೂ ಒಂದೇ ಎನ್ನುವ ಭಾವನೆಯಲ್ಲಿ ನಡೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿ.ಜಿ.ನೆಲ್ಲಗಿ, ಭೀಮಾಶಂಕರ ಕುರುಡೆ, ಶಾಂತವೀರ ಬಿರಾದಾರ, ಭೀಮನಗೌಡ ಬಿರಾದಾರ, ಕುಮಾರ ದೇಸಾಯಿ, ಗುರನಗೌಡ ಬಿರಾದಾರ, ಸೋಮು ರಾಠೋಡ ನಾಗಾವಿ, ಇರ್ಫಾದ ಅಳಂದ, ಗುರಣ್ಣ ಹುಮನಾಬಾದಿ, ಸೋಮನಗೌಡ ಬಿರಾದಾರ, ಮಂಜು ಬಿಜಾಪುರ, ಶ್ರೀಶೈಲ ಬೀರಗೋಂಡ, ಭೀಮು ಕಲಾಲ, ಪ್ರಸನ್ ಜೇರಟಗಿ,ಮಡಿವಾಳ ತಳವಾರ, ಸಾಹೇಬಗೌಡ ಅವಟಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.