ಮೂಡಲಗಿ: ಅಳಿವಿನ ಅಂಚಿನಲ್ಲಿರುವ ನದಾಫ್-ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ಮತ್ತು ನದಾಫ್-ಪಿಂಜಾರ ನಿಗಮದ ಸ್ಥಾಪನೆಗಾಗಿ ರಾಜ್ಯ ಮಟ್ಟದಲ್ಲಿ ಸರಕಾರದ ಗಮನ ಸೆಳೆಯಲು ಶಕ್ತಿ ಪ್ರದರ್ಶನ ಮಾಡಲು ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಶೀಘ್ರದಲ್ಲಿಯೇ ಮಾಡಲಾಗುವುದು ಎಂದು ಸಂಘದ ಜಿಲ್ಲಾ ವಿಭಾಗಿಯ ಅಧ್ಯಕ್ಷ ಮುದಸ್ಸರ್ ನದಾಫ್ ಹೇಳಿದರು.
ಪಟ್ಟಣದ ಕಾಶೀಮಲಿ ಸೊಸೈಟಿಯ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ನದಾಫ್-ಪಿಂಜಾರ ಸಂಘದ ತಾಲೂಕಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಲಿರುವ ಪಿಂಜಾರರ ಅಭಿವೃದ್ದಿಗಾಗಿ ಸರ್ಕಾರ ಅಭಿವೃದ್ದಿ ನಿಗಮ ಸ್ಥಾಪಿಸಬೇಕು ಎಂದು ಅನೇಕ ವರ್ಷಗಳಿಂದ ಮನವಿ ಮಾಡಿದ್ದರೂ ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ, ಸಂಘಟನೆಯ ಪದಾಧಿಕಾರಿಗಳು ಗ್ರಾಮ ಮಟ್ಟದಲ್ಲಿ ಸಂಘಟನೆಯಲ್ಲಿ ತೊಡಗಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಅಣಿಯಾಗಲು ಜಾಗೃತಿ ಮೂಡಿಸುವ ಕಾರ್ಯವನ್ನು ಈಗಿನಿಂದಲೆ ಪ್ರಾರಂಭಿಸಬೇಕು ಎಂದರು.
ಜಿಲ್ಲಾಧ್ಯಕ್ಷ ನಜೀರ ಆಹ್ಮದ ಶೇಖ ಉದ್ಘಾಟಿಸಿ ಮಾತನಾಡಿ, ಸಂಘ ಬೆಳೆದು ಮಾದರಿ ಸಂಘವಾಗಿ ಬೆಳೆಯಲಿ ಎಂದರು.
ಮುಖ್ಯ ಅತಿಥಿ ತಹಸೀಲ್ದಾರ ಡಿ.ಜೆ.ಮಹಾತ ಮಾತನಾಡಿ, ಸಮುದಾಯದಲ್ಲಿ ಶಿಕ್ಷಣದ ಕೊರತೆ ಇದ್ದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.
ನೂತನ ಸಂಘದ ಅಧ್ಯಕ್ಷ ಅನ್ವರ ನದಾಫ್ ಸಮಾರಂಭದ ಅಧ್ಯಕ್ಷತೆ ವಹಿಸಿ ಸಂಘದ ಏಳಿಗೆಗೆ ಪ್ರತಿಯೊಬ್ಬರೂ ಸಲಹೆ ಸಹಕಾರ ನೀಡಲಿ ಎಂದರು.
ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಗ್ರಾಮಲೆಕ್ಕಾಧಿಕಾರಿ ಎ.ಎಸ್.ಬಾಗವಾನ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮಲೀಕ ಹುಣಶ್ಯಾಳ, ಸಂಘದ ಜಿಲ್ಲಾ ಕಾರ್ಯದರ್ಶಿ ಮಹ್ಮದ ರಫೀ ಪಿಂಜಾರ, ಜಿಲ್ಲಾ ಘಟಕದ ಖಜಾಂಚಿ ಅಪ್ಪಾಲಾಲ ನದಾಫ್, ಗೋಕಾಕ ಘಟಕದ ಅಧ್ಯಕ್ಷ ಮೀರಾಸಾಬ ನದಾಫ್ ಹಾಗೂ ಕಾರ್ಯದಶಿಯಾದ ಮುಸ್ತಾಕ್ ನದಾಫ್ ಮಾತನಾಡಿದರು.
ಸಮಾರಂಭದಲ್ಲಿ ಮೂಡಲಗಿ ತಾಲೂಕಾ ಸಂಘದ ಉಪಾಧ್ಯಕ್ಷ ಮೌಲಾಸಾಬ ನದಾಫ್, ಕಾರ್ಯದರ್ಶಿ ಮೀರಾಸಾಬ ನದಾಫ್ ಹಾಗೂ ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಹಾಫೀಜ ಇಬ್ರಾಹಿಂ ಶೇಖ ಕುರಾಣ ಪಠಿಸಿದರು, ಎಸ್.ಎಮ್.ನದಾಫ್ ಸ್ವಾಗತಿಸಿದರು, ಎಮ್.ಎ.ನದಾಫ್ ನಿರೂಪಿಸಿದರು, ಜಾಕೀರ ನದಾಫ್ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.