ಸಿಂದಗಿ: ಬಿಜೆಪಿಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು ಮಾಡಿ 50 ಸಾವಿರ ಮನೆಗಳನ್ನು ಕಟ್ಟುತ್ತೇವೆ ಎಂದು ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಅಲೆಮಾರಿ ಅರೆಅಲೆಮಾರಿ ಸಮುದಾಯಗಳ ಮತ ಪಡೆಯಲು ಹುನ್ನಾರ ನಡೆಸಿದೆ ಎಂದು ಅಲೆಮಾರಿ ಅರೆಅಲೆಮಾರಿ 46 ಜಾತಿಯ ಪ್ರವರ್ಗ1 ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮೇಘರಾಜ್ ಯಾದವ್ ಕುಷ್ಟಗಿ ಆರೋಪಿಸಿದರು.
ಪಟ್ಟಣದ ಸಂಗಮ ಹೋಟೇಲನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅಲೆಮಾರಿ ಅರೆಅಲೆಮಾರಿ ಸಮುದಾಯದ 46 ಜಾತಿ ಒಕ್ಕೂಟದ ಪ್ರವರ್ಗ-1ರ ಸುಮಾರು 90 ಲಕ್ಷ ಜನಸಂಖ್ಯೆ ಇರುವ ಶೋಷಿತ ಸಮುದಾಯವಾದ ಬೈಲ್ಪತ್ತಾರ್, ಹೆಳವ, ಜೋಗಿ, ದೊಂಬಿದಾಸ, ಗೊಲ್ಲ, ಕೊರವ, ಕುಂಚಿಕೊರವ ಇತರೆ 46 ಸಮುದಾಯಗಳನ್ನು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಸೇರಿಸಿದ್ದರು. ಅದನ್ನು ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ ಅಲೆಮಾರಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ರೂ.100 ಕೋಟಿ ಮಿಸಲಿಟ್ಟು ಅನೇಕ ಆಶ್ರಯ ಮನೆಗಳನ್ನು ನೀಡಿ ಈ ಸಮುದಾಯಕ್ಕೆ ಬೆನ್ನೆಲುಬಾಗಿ ನಿಂತಿದೆ ಆದರೆ ಅಭಿವೃದ್ಧಿ ನಿಗಮಕ್ಕೆ ರೂ. 5 ಕೋಟಿ ಕೊಟ್ಟು ಕೈತೊಳೆದುಕೊಂಡಿದಲ್ಲದೆ ಬಿಜೆಪಿ ಜಾತಿ ಜಾತಿಗಳನ್ನು ಒಡೆದು ಉಪಚುನಾವಣೆಯನ್ನು ಗೆಲ್ಲಲು ಅನೇಕ ವಾಮಮಾರ್ಗಗಳನ್ನು ಮತಬ್ಯಾಂಕಿಗೆ ಗೋಸ್ಕರ ಅಲೆಮಾರಿ ಸಮುದಾಯವನ್ನು ಬಳಸಿಕೊಳ್ಳುತ್ತಿದೆ ಇದಕ್ಯಾರೂ ಜಗ್ಗುವುದಿಲ್ಲ ಎಂದು ಚಾಟಿ ಬೀಸಿದರು.
ಸಣ್ಣಪುಟ್ಟ ಸಮುದಾಯಗಳು ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗೆ ಈ ತಾಲೂಕಿನ ಅಲೆಮಾರಿ ಅರೆ ಅಲೆಮಾರಿ ಸಮುದಾಯದ 46 ಜಾತಿಯ ಸಮುದಾಯದವರು ಪಕ್ಷಕ್ಕೆ ಮತವನ್ನು ಕೊಟ್ಟು ಅವರನ್ನ ಗೆಲ್ಲಿಸಬೇಕೆಂದು. ಮನವಿ ಮಾಡಿದರು. ಪಾಲಿಕೆಯ ಸದಸ್ಯ ಗಾದೆಪ್ಪ ಪೂಜಾರಿ ಇದ್ದರು.