ಮೂಡಲಗಿ: ರೈತ ಉತ್ಪಾದಕ ಸಂಸ್ಥೆಗಳ ಮುಖಾಂತರ ರೈತರನ್ನು ಸ್ವಾವಲಂಬಿಯಾಗಿಸುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಕನಸಾಗಿದೆ. ಪ್ರಧಾನಿಯವರ ಕನಸನ್ನು ಸಾಕಾರಗೊಳಿಸಲು ರೈತ ಮೋರ್ಚಾ ಕಾರ್ಯಕರ್ತರು ಎಫ್.ಪಿ.ಒ. ಗಳ ರಚನೆಯಲ್ಲಿ ಸಕ್ರಿಯ ಪಾತ್ರ ವಹಿಸಬೇಕೆಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಕರೆ ನೀಡಿದರು.
ರವಿವಾರ ನ. 14 ರಂದು ಕಲ್ಲೋಳಿ ಪಟ್ಟಣದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಬೆಳಗಾವಿ ಗ್ರಾಮಾಂತರ, ನಗರ ಹಾಗೂ ಚಿಕ್ಕೋಡಿ ಜಿಲ್ಲೆಗಳ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಗೋ ಪೂಜೆ ನೆರವೇರಿಸಿ, ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಈರಣ್ಣ ಕಡಾಡಿ ಅವರು, ದೇಶದಲ್ಲಿ ಸುಮಾರು ಹತ್ತು ಸಾವಿರ ಎಫ್.ಪಿ.ಒ ಗಳ ರಚನೆಯಾಗಿದೆ ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ 750ಕ್ಕೂ ಹೆಚ್ಚು ಅಮೃತ ಎಫ್.ಪಿ.ಒ ಯೋಜನೆಯಲ್ಲಿ ರಚಿಸುವ ಉದ್ದೇಶವಾಗಿದೆ ಇದನ್ನು ಗ್ರಾಮೀಣ ಪ್ರದೇಶದಲ್ಲಿ ಸಾಕಾರಗೊಳಿಸುವ ಕಾರ್ಯವನ್ನು ರೈತ ಮೋರ್ಚಾ ಕಾರ್ಯಕರ್ತರು ಹೆಚ್ಚು ಶ್ರಮವಹಿಸಬೇಕೆಂದರು.
ಕೇಂದ್ರ ಹಾಗೂ ರಾಜ್ಯ ಸರಕಾರ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕಿಸಾನ ಸಮ್ಮಾನ ನಿಧಿ, ಕಿಸಾನ ಮಾನ್ ಧನ್ ಯೋಜನೆಯ ಮಖಾಂತರ ರೈತರಿಗೆ ಪಿಂಚಣಿ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಅವುಗಳನ್ನು ಕಾರ್ಯಕರ್ತರು ತಿಳಿದುಕೊಂಡು ರೈತರಿಗೆ ತಿಳಿಸುವ ಮುಖಾಂತರ ಯೋಜನೆಗಳನ್ನು ರೈತರಿಗೆ ತಲುಪುವಂತೆ ಕಾರ್ಯಕರ್ತರು ನೊಡಿಕೊಳ್ಳಬೇಕೆಂದರು.
ಹೊಸ ಕೃಷಿ ಕಾಯ್ದೆಗಳು ರೈತರನ್ನು ಸಶಕ್ತಗೊಳಿಸುತ್ತವೆ. ಆದರೆ ದೆಹಲಿಯಲ್ಲಿ ಕಳೆದ ಒಂದು ವರ್ಷದಿಂದ ಕೆಲವು ರೈತ ಸಂಘಟನೆಗಳು ಕೃಷಿ ಕಾಯ್ದೆ ವಿರುದ್ದ ಹೋರಾಟ ಮಾಡುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.
ಬಿಜೆಪಿ ತನ್ನದೇ ಆದಂತಹ ತತ್ವ ಸಿದ್ದಾಂತ ಹೊಂದಿದೆ. ಪಕ್ಷ ಎಲ್ಲರಿಗೂ ಸ್ಥಾನಮಾನ ಕಲ್ಪಿಸುತ್ತದೆ ಆದರೆ ಕೊಟ್ಟಂತಹ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುವ ಜೊತೆಗೆ ತಮ್ಮ ನಾಯಕತ್ವವನ್ನು ಬೆಳೆಸಿಕೊಂಡು ಬೂತ್ ಮಟ್ಟದಿಂದ ರಾಜ್ಯಮಟ್ಟದವರೆಗೂ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದರು.
ಇಡಿ ರಾಜ್ಯಾದ್ಯಂತ ಎಫ್.ಪಿ.ಒ. ಗಳ ರಚನೆಗಾಗಿ ವಿಶೇಷ ಪ್ರವಾಸ ಹಮ್ಮಿಕೊಂಡಿದ್ದು, ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಪ್ರವಾಸ ಪೂರ್ಣವಾಗಿ, ನಾಳೆ ಕಿತ್ತೂರ ಕರ್ನಾಟಕ ಭಾಗ ಪೂರ್ಣವಾಗಲಿದೆ. ಕರಾವಳಿ ಕರ್ನಾಟಕ ಮತ್ತು ಮೈಸೂರು ಕರ್ನಾಟಕ ಭಾಗದ ಪ್ರವಾಸ ಈ ವಾರದಲ್ಲಿ ಪೂರ್ಣವಾಗಲಿದೆ ಎಂದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾದ ದುಂಡಪ್ಪ ಬೆಂಡವಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ರೈತ ಮೋರ್ಚಾ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀಕರ ಕುಲಕರ್ಣಿ, ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷ ಕಲ್ಲಪ್ಪ ಶಹಪೂರಕರ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತ್ಯೆಪ್ಪ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಆನಂದ ಮೂಡಲಗಿ, ಮಹಾವೀರ ನಾಶಿಪುಡಿ, ಬಾಹುಬಳಿ ದೊಡ್ಡಣ್ಣವರ, ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ ಹಿರೇಮಠ, ಜ್ಯೋತಿ ಕೋಲಾರ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಪ್ರಮುಖರಾದ ಬಸವರಾಜ ಕಡಾಡಿ, ಮಹಾದೇವ ಮದಭಾಂವಿ, ಅಡಿವೆಪ್ಪ ಕುರಬೇಟ, ಬಸವರಾಜ ಹಿಡಕಲ್ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಉಪಸ್ಥಿತರಿದ್ದರು.
ತಮ್ಮಣ್ಣ ದೇವರ ಸ್ವಾಗತಿಸಿದರು, ಪ್ರದೀಪ ಸಾಣಿಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ರೇವಪ್ಪ ಕೊರೆಶೆಟ್ಟಿ ವಂದಿಸಿದರು.