Homeಸುದ್ದಿಗಳುಜ್ಯೋತಿ ಹೊಸೂರ ಅವರ ಶೋಧಗಳು ಸಾರ್ವಕಾಲಿಕವಾದವುಗಳು: ಡಾ. ವ್ಹಿ. ಎಸ್. ಮಾಳಿ

ಜ್ಯೋತಿ ಹೊಸೂರ ಅವರ ಶೋಧಗಳು ಸಾರ್ವಕಾಲಿಕವಾದವುಗಳು: ಡಾ. ವ್ಹಿ. ಎಸ್. ಮಾಳಿ

ಬೆಳಗಾವಿ: “ಪ್ರೊ.ಜ್ಯೋತಿ ಹೊಸೂರ ಅವರು ಜಾನಪದ ವಿದ್ವಾಂಸರಾಗಿ, ಸಂಶೋಧಕರಾಗಿ ನಮಗೆಲ್ಲಆದರ್ಶವಾಗಿದ್ದಾರೆ. ವಿಶಿಷ್ಟ ಸಂಶೋಧನಾ ವಿಧಾನದ ಮೂಲಕ ಉತ್ತರ ಕರ್ನಾಟಕದ ಹೆಮ್ಮೆಯ ಸಂಶೋಧಕರೆನಿಸಿಕೊಂಡಿದ್ದಾರೆ.

ಅವರ ಸಂಶೋಧನಾ ಮಾರ್ಗ ಅನುಕರಣೀಯವಾಗಿದೆ. ಉತ್ತರ ಕರ್ನಾಟಕದ ಜಾನಪದದ ವಿವಿಧ ಪ್ರಕಾರಗಳನ್ನು ಸಂಗ್ರಹಿಸುವುದರೊಂದಿಗೆ ಅವರ ಸಾಂಸ್ಕೃತಿಕ ಬದುಕುಅರಂಭವಾಯಿತು. ಅಲ್ಲಿಂದ ಜೀವನ ಚರಿತ್ರೆಗಳನ್ನು ಮಹತ್ವದ ಸಂಶೋಧನಾ ಕೃತಿಗಳನ್ನು ನಾಡಿಗೆ ನೀಡಿದರು.ಇಂದಿನ ಸಂಶೋಧನಾ ವಿದ್ಯಾರ್ಥಿಗಳು ಅವರ ಸಂಶೋಧನಾ ಮಾರ್ಗವನ್ನು ಅನುಸರಿಸಬೇಕು ಎಂದು ಡಾ. ವ್ಹಿ. ಎಸ್. ಮಾಳಿ ಅವರುಅಭಿಪ್ರಾಯಪಟ್ಟರು.

ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯು ಇತ್ತೀಚೆಗೆ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವದ ನಿಮಿತ್ತದ ವಿಶೇಷ ಸರಣಿ ಕಾರ್ಯಕ್ರಮಗಳ ಹಾಗೂ ಪ್ರೊ. ಜ್ಯೋತಿ ಹೊಸೂರ ಅವರ ಸಾಹಿತ್ಯದ ಪ್ರತ್ಯವಲೋಕನ ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಒಂದು ವೇಳೆ ಜ್ಯೋತಿ ಹೊಸೂರ ಅವರು ಬೆಂಗಳೂರು ಮತ್ತು ಮೈಸೂರುಗಳಂತಹ ಮಹಾನಗರಗಳಲ್ಲಿದ್ದರೆ ಕನ್ನಡ ಸಂಶೋಧನಾ ಲೋಕದ ದಿಗ್ಗಜರಾಗಿ ಹೊರಹೊಮ್ಮುತ್ತಿದ್ದರು. ಉತ್ತರಕರ್ನಾಟಕ ಪರಿಸರ ಅವರ ವಿದ್ವತ್ತನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಸ್. ಎಂ. ಗಂಗಾಧರಯ್ಯಅವರು ಮಾತನಾಡಿ, ಪ್ರೊ.ಜ್ಯೋತಿ ಹೊಸೂರುವ ಅವರು ಡಾ. ಶಂಬಾ ಜೋಶಿ ಅವರ ಗರಡಿಯಲ್ಲಿ ಪಳಗಿದವರು. ಆದರ್ಶವಾದಿ ಸಿದ್ಧಾಂತಗಳನ್ನು ಇಟ್ಟುಕೊಂಡು ಉತ್ತರ ಕರ್ನಾಟಕದ ವಿವಿಧ ಕ್ಷೇತ್ರಗಳ ಮೇಲೆ ಸಂಶೋಧನೆಯನ್ನು ನಡೆಸಿರುವರು. ಆಚರಣಾ ಮೂಲ, ಜನಾಂಗಿಕ ಮೂಲ, ದೈವತ ಮೂಲ ಸಿದ್ಧಾಂತಗಳನ್ನು ಕನ್ನಡಿಗರಿಗೆ ನೀಡಿರುವರು ಎಂದು ಅಭಿಪ್ರಾಯಪಟ್ಟರು. ಸಂಗೊಳ್ಳಿ ರಾಯಣ್ಣ ಅವರ ಬಗೆಗೆ ಜ್ಯೋತಿ ಹೊಸೂರರು ನಡೆಸಿದ ಸಂಶೋಧನೆಗಳು ಸರ್ವಕಾಲಿಕ ಮನ್ನಣೆಯನ್ನು ಪಡೆದುಕೊಳ್ಳಬಲ್ಲವು ಎಂದು ಅಭಿಪ್ರಾಯಪಟ್ಟರು.

ಡಾ. ಗಜಾನನ ನಾಯ್ಕ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಡಾ.ಮಹೇಶ ಗಾಜಪ್ಪನವರ ವಂದನೆಗಳನ್ನು ಸಲ್ಲಿಸಿದರು.ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳು, ವಿವಿಧ ಕಾಲೇಜುಗಳ ಅಧ್ಯಾಪಕರುಗಳು, ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES

Most Popular

close
error: Content is protected !!
Join WhatsApp Group