ಸಿಂದಗಿ: ಪಟ್ಟಣದ ಆರಾಧ್ಯದೈವ ಪುರದೇವತೆ ತಾಯಿ ನೀಲಗಂಗಾ ದೇವಿಯ ಜಾತ್ರಾ ಉತ್ಸವವು ಗುರುವಾರ ಅದ್ದೂರಿಯಾಗಿ ಜರುಗಿತು. ಗೌರಿ ಹುಣ್ಣಿಮೆಯ ನಂತರ 5 ನೇ ದಿನಕ್ಕೆ ನಡೆಯುವ ಜಾತ್ರೆ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು.
ಬೆಳಗ್ಗೆ 6 ಗಂಟೆಯಿಂದ ಪೂಜಾ ಕಾರ್ಯಕ್ರಮಗಳು ಜರುಗಿದವು ಜಾತ್ರಾ ಉತ್ಸವಕ್ಕೆ ಸ್ಥಳೀಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಚಾಲನೆ ನೀಡಿದರು. ಮೂಲ ದೇವಸ್ಥಾನದಿಂದ ಪುರವಂತರ ಸೇವೆಯೊಂದಿಗೆ ನೀಲಗಂಗಾ ದೇವಿಯ ಪಲ್ಲಕ್ಕಿ ಉತ್ಸವವು ಹೊರಬರುತ್ತಿದ್ದಂತೆ ನೆರದಿದ್ದ ಭಕ್ತವೃಂದ ಉರುಳು ಸೇವೆ, ಸಿಡಿಗಾಯಿ ಸೇವೆ ಮಾಡಿ ಭಕ್ತಿಯ ಪರಾಕಾಷ್ಠೆ ಮೆರೆದರು.
ರಾಜ್ಯದ ವಿವಿಧೆಡೆ ಇರುವ ಸಿಂದಗಿಯ ಹೆಣ್ಣು ಮಕ್ಕಳು ಜಾತ್ರೆಯ ದಿನದಂದು ತವರು ಮನೆ ಸಿಂದಗಿಗೆ ಬಂದು ದೇವಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ತವರು ಮನೆಗೆ ಶುಭವಾಗಲಿ ಎಂದು ಬೇಡಿಕೊಳ್ಳುವ ಸಂಪ್ರದಾಯವಿದೆ.
ದೀಪಾವಳಿ ಕಡೆಯ ಪಾಡ್ಯ ದಿನದಂದು ಪುರಾಣ ಪ್ರವಚನ ಕಾರ್ಯಕ್ರಮ ಜರುಗುತ್ತವೆ ನಂತರ ಗೌರಿ ಹುಣ್ಣಿಮೆಯ ನಂತರ 5 ದಿನಗಳ ಕಾಲ ಮಹಿಳೆಯರು ನೀರಾಹಾರ ಮಾಡಿ ಜಾತ್ರಾ ದಿನದಂದು ಪಲ್ಲಕ್ಕಿ ಮೂಲ ದೇವಸ್ಥಾನಕ್ಕೆ ಆಗಮಿಸಿದಾಗ ಪೂಜೆ ಸಲ್ಲಿಸಿ ತಮ್ಮ 5 ದಿನಗಳ ನೀರಾಹಾರ ಸೇವೆಯನ್ನು ಮುಕ್ತಾಯ ಮಾಡುತ್ತಾರೆ. ಮಾರ್ಗ ಮಧ್ಯದಲ್ಲಿ ಭಜನೆ, ಪುರವಂತರ ಸೇವೆ, ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಸಾಗಿ ಬಂದವು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಮ್ಯುಜಿಕಲ್ ಬ್ಯಾಂಡ್, ಶಹನಾಯಿ, ಹಲಿಗೆ, ನಂದಿಕೋಲ ಸೇವೆ ಹೀಗೆ ಅನೇಕ ವಾದ್ಯಕಲಾ ತಂಡಗಳು ಭಾಗವಹಿಸಿದ್ದವು.
ಉತ್ಸವದಲ್ಲಿ ದೇವಸ್ಥಾನದ ಧರ್ಮದರ್ಶಿ ಶಿರುಗೌಡ ದೇವರಮನಿ, ಸುನೀಲ ದೇವರಮನಿ, ಬಸವರಾಜ ಅಂಬಲಗಿ, ಚನ್ನಪ್ಪ ಗೋಣಿ, ಅಶೋಕ ವಾರದ, ದುಂಡಪ್ಪ ಸೊನ್ನದ, ಅಶೋಕಗೌಡ ದೇವರಮನಿ, ಅನೀಲ ಪಟ್ಟಣಶೆಟ್ಟಿ, ರವಿ ಗವಸಾನಿ, ನಿಂಗಪ್ಪ ಮುಂಡೇವಾಡಗಿ, ಮುತ್ತು ಮುಂಡೇವಾಡಗಿ, ದಯಾನಂದ ಇವಣಿ, ಭೀಮಾಶಂಕರ ತಾರಾಪೂರ, ಮಲ್ಲಿಕಾರ್ಜುನ ಅಲ್ಲಾಪೂರ, ದಾನೇಶ ಬಮ್ಮಣ್ಣಿ, ಮಲ್ಲಿಕಾರ್ಜುನ ಬಮ್ಮಣ್ಣಿ, ಮುತ್ತು ಪಟ್ಟಣಶೆಟ್ಟಿ, ಡಾ. ಶರಣಬಸವ ಜೋಗೂರ, ಸಿದ್ದಲಿಂಗ ಕಿಣಗಿ, ಸಂತೋಷ ಪಟ್ಟಣಶೆಟ್ಟಿ, ಗಂಗಾಧರ ಕಿಣಗಿ, ಅನೀಲಗೌಡ ಬಿರಾದಾರ, ರಾಹುಲ ಪಟ್ಟಣಶೆಟ್ಟಿ, ಕಿರಣ ಕೋರಿ, ರಾಚು ಕಿಣಗಿ, ಗಂಗಾಧರ ಪಟ್ಟಣಶೆಟ್ಟಿ, ಅನೀಲ ಗೋಣಿ, ಮಲ್ಲು ಲಾಳಸಂಗಿ, ಸುನೀಲ ಪಟ್ಟಣಶೆಟ್ಟಿ, ಪುರಾಣಿಕ ಹಿರೇಮಠ, ಕುಮಾರ ಪಟ್ಟಣಶೆಟ್ಟಿ, ಶ್ರೀಶೈಲ ನಂದಿಕೋಲ, ಕುಮಾರ ಕಿಣಗಿ, ಪ್ರವೀಣ ಪತ್ತಾರ, ಶಿವಶರಣ ಬೂದಿಹಾಳ, ಚನ್ನಪ್ಪ ಪಟ್ಟಣಶೆಟ್ಟಿ, ಚೇತನ ಜೋಗೂರ, ಶ್ರೀಧರ ಬಮ್ಮಣ್ಣಿ, ಶಾಂತು ಗೋಣಿ, ಗೋಲ್ಲಾಳ ಅಗಸರ ಸೇರಿದಂತೆ ಅನೇಕರು ಇದ್ದರು.