1973ರಲ್ಲಿ ಎಂ.ಎ., ಪಾಸಾದ ತಕ್ಷಣ, ನನ್ನ 21ರ ಹರೆಯದಲ್ಲಿ, ಧಾರವಾಡದಲ್ಲಿದ್ದ ಭಾರತೀಯ ಕುಟುಂಬ ಯೋಜನಾ ಸಂಘದ ಧಾರವಾಡ ಶಾಖೆಯಲ್ಲಿ ಕುಟುಂಬ ಕಲ್ಯಾಣ ಯೋಜನಾ ಶಿಕ್ಷಣ ಹಾಗೂ ಸೇವಾ ಘಟಕದ ಮುಖ್ಯಸ್ಥನಾಗಿ, ಧಾರವಾಡ ಜಿಲ್ಲೆಯ 40 ಹಳ್ಳಿಗಳು, ಹುಬ್ಬಳ್ಳಿ ನಗರ ಪ್ರದೇಶದಲ್ಲಿದ್ದ ವಿವಿಧ ಇಲಾಖೆಗಳು, ಸ್ವಯಂ-ಸೇವಾ ಸಂಘಗಳು, ಶಾಲೆ-ಕಾಲೇಜುಗಳಲ್ಲಿ ಜನಸಂಖ್ಯಾ ಶಿಕ್ಷಣದ ಪಾಠಗಳನ್ನು ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಜನಸಂಖ್ಯಾ ಶಿಕ್ಷಣದ ಬಗ್ಗೆ ಒಂದು ಲೇಖನವನ್ನು ನನ್ನ ಉಪನ್ಯಾಸಗಳಿಗೆ ಆಧಾರವಾಗಿ ಸಿದ್ಧಪಡಿಸಿದ್ದೆ. ಆ ಲೇಖನದ ಪರಿಷ್ಕೃತ ರೂಪ ಈಗ ನಿಮ್ಮ ಮುಂದಿದೆ.
ವಿಶ್ವ ಬ್ಯಾಂಕಿನ ಹಿಂದಿನ ಅಧ್ಯಕ್ಷರಾಗಿದ್ದ ಮ್ಯಾಕ್ ನ ಮಾರಾ. ಅವರ ಭಾಷಣದ ಕೆಲವು ಸಾಲುಗಳನ್ನು ಉಲ್ಲೇಖಿಸುವುದಾದರೆ- “ಮಾನವ ಜನಾಂಗದ ಮೂರರಲ್ಲಿ ಎರಡು ಭಾಗ, ಬಡತನ, ಹಸಿವು, ಅಪೌಷ್ಠಿಕತೆ, ಅನಾರೋಗ್ಯ, ಅನಕ್ಷರತೆ ಮತ್ತು ಅಜ್ಞಾನಗಳಲ್ಲಿ ಜೀವಿಸುತ್ತಿದ್ದಾರೆ. ಬೇಗ ಮಾಡುವ ವಿವಾಹಗಳಿಂದ, ಅತಿ ಶೀಘ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆಯ ಮೂಲಕ, ಭಾವಿ ತಲೆಮಾರುಗಳಿಗೆ ಇವೆಲ್ಲ ಸಾಗಿಸಲ್ಪಡುತ್ತವೆ. ತತ್ಪರಿಣಾಮವಾಗಿ ಸಾಮಾನ್ಯ ಪ್ರೀತಿ, ಗಮನ ಹಾಗೂ ಚಟುವಟಿಕೆಗಳಿಂದ ಮಕ್ಕಳು ವಂಚಿತರಾಗುತ್ತಾರೆ. ಯುವಜನಾಂಗ ಶಿಕ್ಷಣ ಹಾಗೂ ಉದ್ಯೋಗ ಅವಕಾಶಗಳ ಕೊರತೆಯನ್ನು ಅನುಭವಿಸಬೇಕಾಗುತ್ತದೆ. ಇರುವಷ್ಟೇ ಸ್ಥಳದಲ್ಲೇ ಹೆಚ್ಚು ಜನರು ಇರಬೇಕಾದಾಗ, ಹೆಚ್ಚಿನ ಒತ್ತಡ, ಕುಟುಂಬ ಹಾಗೂ ಸಮುದಾಯಗಳ ಮೇಲೆ ಬೀಳುತ್ತದೆ. ಈ ಜನದಟ್ಟಣೆಯ ಒತ್ತಡದ ಪರಿಣಾಮ, ಮಾನಸಿಕ ಅಸ್ವಸ್ಥತೆ ಹಾಗೂ ಉದ್ವೇಗಗಳ ರೂಪದಲ್ಲಿ, ತಾಯಿಯಿಂದ ಮಗುವಿಗೂ ಸಾಗಿಸಲ್ಪಡಬಹುದೆಂದು ವಿಶೇಷ ಅಧ್ಯಯನಗಳಿಂದ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಕೆಲವು ವಿವರಗಳನ್ನು ಈಗ ಗಮನಿಸೋಣ:
ಇಂದು ಜನಸಂಖ್ಯೆಯ ಬಗ್ಗೆ ಅನೇಕ ವಿಚಾರಗಳನ್ನು ಕೇಳುತ್ತಿದ್ದೇವೆ. ‘ಜನಸಂಖ್ಯೆ ಭಾರಿ ಸಮಸ್ಯೆಯಾಗಿದೆ’. ‘ಜನಸಂಖ್ಯಾ ಸ್ಫೋಟವಾಗಿದೆ’. ‘ಜನಸಂಖ್ಯೆ ಸಮಸ್ಯೆಯೇ ಅಲ್ಲ’, ಶಾಲಾ ಪಠ್ಯಕ್ರಮದಲ್ಲಿ ಜನಸಂಖ್ಯಾ ಶಿಕ್ಷಣವನ್ನು ಸೇರಿಸಬೇಕು’…..
ಈ ಹಿನ್ನೆಲೆಯಲ್ಲಿ: ಜನಸಂಖ್ಯಾ ಶಿಕ್ಷಣವೆಂದರೇನು? ಈಗ ಚಿಂತಿಸೋಣ
ವ್ಯಕ್ತಿಯಲ್ಲಿ ತನ್ನ ಮತ್ತು ತನ್ನ ಕುಟುಂಬದ ಕ್ರಿಯೆಗಳನ್ನು, ತಾನೇ ನಿರ್ಧರಿಸಿ ನಿಯಂತ್ರಿಸುವಲ್ಲಿ ವಿಶ್ವಾಸವನ್ನು ಬೆಳೆಸಿ, ದೃಢ ಮನೋಭಾವನೆಗಳನ್ನು ವೃದ್ಧಿಸಿ, ಅವುಗಳನ್ನು ಆಂತರೀಕರಿಸುವ ಮೂಲಕ, ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ನ್ಯಾಯಗಳ ಆಧಾರದ ಮೇಲೆ, ಕಲ್ಯಾಣ ರಾಷ್ಟ್ರವನ್ನು ಕಟ್ಟುವ ವಿಶಾಲ ಹಿನ್ನೆಲೆಯಲ್ಲಿ, ಜನಸಂಖ್ಯಾ ಸಮಸ್ಯೆಯ ಬಗ್ಗೆ ಅರಿವು ಉಂಟು ಮಾಡುವ ಗುರಿಯಿಟ್ಟುಕೊಂಡ ಶಿಕ್ಷಣವೇ, ಜನಸಂಖ್ಯಾ ಶಿಕ್ಷಣ.
ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ 2ನೇ ದೇಶ ನಮ್ಮದು. ವಿಶ್ವ ಜನಸಂಖ್ಯೆಯ 5ನೇ ಒಂದು ಭಾಗ ಇಲ್ಲಿದೆ. 1998ರಲ್ಲಿ ನಮ್ಮ ದೇಶದ ಜನಸಂಖ್ಯೆ 1 ಬಿಲಿಯನ್ ಮುಟ್ಟಿತು. 1975ರಿಂದ 2010ರವರೆಗೆ ದೇಶದ ಜನಸಂಖ್ಯೆ 1.2 ಬಿಲಿಯನ್ಗೆ ದ್ವಿಗುಣವಾಯಿತು.2024ರಲ್ಲಿ ಚೀನಾ ಹಿಂದೆ ಹಾಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಲಿದೆ ಭಾರತ.2017ರಲ್ಲಿ ಭಾರತದ ಜನಸಂಖ್ಯೆ ಬೆಳವಣಿಗೆಗೆ ದರ 1.13 ಇದ್ದು, ಪ್ರಪಂಚದಲ್ಲಿ 112ನೇ ಸ್ಥಾನ ಹೊಂದಿತ್ತು
- ಪ್ರತಿ 1 ಸೆಕೆಂಡಿಗೆ 1 ಮಗು, ಒಂದು ವರ್ಷಕ್ಕೆ
- ಒಟ್ಟೂ ಜನನಗಳು 21 ದಶಲಕ್ಷ
- ಪ್ರತಿ 1 ನಿಮಿಷಕ್ಕೆ 40 ಮಕ್ಕಳು
- ಒಟ್ಟೂ ಮರಣಗಳು 8 ದಶಲಕ್ಷ
- ಪ್ರತಿ 1 ಗಂಟೆಗೆ 2,400 ಮಕ್ಕಳು ಒಟ್ಟೂ ಉಳಿಯುವ ಮಕ್ಕಳು
- ಸೇರಿಸಲ್ಪಡುವಿಕೆ, ಪ್ರತೀ 1 ದಿನಕ್ಕೆ 57,600 ಮಕ್ಕಳು ಒಟ್ಟೂ ಉಳಿಯುವ ಮಕ್ಕಳು13 ದಶಲಕ್ಷ
ಪ್ರತೀ ವರ್ಷ ಬಂದು ಸೇರುವ 13 ದಶಲಕ್ಷ ಅತಿಥಿಗಳ ಬೇಡಿಕೆಗಳು:
- ಆಹಾರ: 12.5 ದಶಲಕ್ಷ ಕ್ವಿಂಟಾಲ್
- ಬಟ್ಟೆ: 188 ದಶಲಕ್ಷ ಮೀಟರ್
- ಮನೆ: 245 ದಶಲಕ್ಷ
- ಶಾಲೆಗಳು: 1.3 ಲಕ್ಷ
- ಉಪಾಧ್ಯಾಯರು: 3.7 ಲಕ್ಷ
- ಉದ್ಯೋಗ: 4 ದಶಲಕ್ಷ
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹಾಗೂ ಯೂನಿಸೆಫ್ ಅಂಕಿ ಸಂಖ್ಯೆಗಳಂತೆ, 2011ರ ಜನಗಣತಿ ಪ್ರಕಾರ 7 ವರ್ಷಕ್ಕಿಂತ ಕಡಿಮೆ ಇರುವ ಹುಡುಗಿಯರ ಸಂಖ್ಯೆಯಲ್ಲಿ ತೀವ್ರ ಇಳಿತವಾಗಿದೆ.
2001ರಿಂದ 2011ರ ಮಧ್ಯೆ 8 ದಶಲಕ್ಷ ಹೆಣ್ಣು ಭ್ರೂಣಗಳ ಗರ್ಭಪಾತ ಮಾಡಲಾಗಿದೆ ಎಂದು ತಜ್ಞರ ಅಂದಾಜು.
ಜನಸಂಖ್ಯೆ ಸಮಸ್ಯೆಯಾಗಲು ವಿವಿಧ ಕಾರಣಗಳು:
ವೈದ್ಯಕೀಯ: ಜನನ-ಮರಣ ದರಗಳ ನಡುವಿನ ಅಂತರ ಹೆಚುತ್ತಿರುವುದು; ಆಯುಷ್ಯ ನಿರೀಕ್ಷೆ ಹೆಚ್ಚಿದೆ. ಪುನರುತ್ಪಾದಕ ಗುಂಪು ವಿಸ್ತರಿಸಲ್ಪಟ್ಟಿದೆ.
ಸಾಮಾಜಿಕ: ಸಾಮಾಜಿಕ ಬೆಂಬಲ, ಮಹಿಳೆಯ ಸ್ಥಾನ-ಶಿಕ್ಷಣ, ಮದುವೆ ಮಕ್ಕಳು ಮತ್ತು ಧಾರ್ಮಿಕ ವಿಚಾರಗಳ ಬಗ್ಗೆ ಸಮಾಜದ ಮನೋಭಾವನೆಗಳು.
ಆರ್ಥಿಕ-ಮನರಂಜನೆಗಳ ಅಭಾವ, ವೃದ್ಧಾಪ್ಯದಲ್ಲಿ ರಕ್ಷಣೆಯ ಆವಶ್ಯಕತೆ.
ಈ ಸಮಸ್ಯೆ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಅಭಿವೃದ್ಧಿ ಹೊಂದುತ್ತಿರುವ ಎಲ್ಲ ದೇಶಗಳಿಗೂ ಇದೊಂದು ಭಾರವಾಗಿದೆ. ಜನಸಂಖ್ಯೆಯನ್ನು ಪ್ರತ್ಯೇಕವಾಗಿ ಅಥವಾ ಕೇವಲ ಅಂಕಿ ಸಮಸ್ಯೆಗಳಿಂದ ಸಮಸ್ಯೆಯನ್ನಲಾಗದು. ದೇಶದ ಪ್ರಾಕೃತಿಕ ಸಂಪತ್ತಿಗೆ ಹೋಲಿಸಿ, ಜೀವನದ ಅಗತ್ಯತೆಗಳು ಮತ್ತು ಅನುಕೂಲತೆಗಳು ಎಷ್ಟರ ಮಟ್ಟಿಗೆ ದೊರಕುತ್ತಿದೆ ಎಂಬುದನ್ನು ಪರಿಶೀಲಿಸಿ, ಇವುಗಳಿಗೆ ಹೋಲಿಸಿದಾಗ ಮಾತ್ರ, ಒಂದು ದೇಶದ ಜನಸಂಖ್ಯೆ ಹೆಚ್ಚು ಅಥವಾ ಕಡಿಮೆ ಎಂದು ಹೇಳುತ್ತೇವೆ.
ಜನಸಂಖ್ಯೆ ಸಾಮಾಜಿಕ ಸಮಸ್ಯೆ ಹೇಗೆ?
ವ್ಯಕ್ತಿ ಒಂದು ಕುಟುಂಬದಲ್ಲಿ ಹುಟ್ಟಿದಾಗ ಅದು ಆ ಕುಟುಂಬದ ವೈಯಕ್ತಿಕ ಸಮಸ್ಯೆ. ಅದು ಹೇಗೆ ಸಾಮಾಜಿಕವಾಗುತ್ತದೆ?
- ಮೌಲ್ಯಗಳು-ಪ್ರಾಮಾಣಿಕತನ, ಹಿರಿಯರಿಗೆ ಗೌರವ ಕೊಡುವುದು ಇತ್ಯಾದಿ.
- ಸಮಾಜೀಕರಣ-ಕುಟುಂಬ, ಶಾಲೆ, ಆಟದ ಗುಂಪು ಮತ್ತು ಸ್ನೇಹಿತರ ವರ್ತುಲಗಳಲ್ಲಿ ಮಗು ಸಾಮಾಜೀಕರಣ ಹೊಂದುತ್ತಿರುವ ರೀತಿ.
- ಎಲ್ಲ ಸಮಸ್ಯೆಗಳ ಬೇರು-ಜನಸಂಖ್ಯಾ ಸಮಸ್ಯೆ
- ಆಹಾರದ ಉತ್ಪಾದನೆ ಹೆಚ್ಚಿದರೂ ಜನಸಂಖ್ಯೆಯ ಬೆಳವಣಿಗೆಯಿಂದ ಪ್ರತಿ ವ್ಯಕ್ತಿಗೆ ಸಿಗುವ ಆಹಾರ ಲಭ್ಯತೆ ಪ್ರಮಾಣ ನಿರೀಕ್ಷಿಸಿದಷ್ಟು ಸಾಧ್ಯವಾಗುತ್ತಿಲ್ಲ.
ಪರಿಹಾರಗಳು:
- ಬೇಡಿಕೆಗಳನ್ನು ಪೂರೈಸಲು ಉತ್ಪಾದನೆ ಹೆಚ್ಚಿಸುವುದು.
- ಜನಸಂಖ್ಯೆ ಬೆಳೆಯುತ್ತಿರುವ ವೇಗ ಕಡಿಮೆ ಮಾಡುವುದು.
- ಮರಣದರ ಹೆಚ್ಚಿಸುವುದು (ಅಸಾಧ್ಯವಾದದ್ದು)
- ಜನನ ದರ ಕಡಿಮೆ ಮಾಡುವುದು.
- ಮದುವೆಯ ವಯಸ್ಸನ್ನು ಹೆಚ್ಚಿಸುವುದು.
- ಸ್ತ್ರೀಯರಿಗೆ ಮುಖ್ಯವಾಗಿ ಗ್ರಾಮೀಣ ಹಾಗೂ ಕೊಳಚೆ ಪ್ರದೇಶಗಳ ಸ್ತ್ರೀಯರಿಗೆ ಶಿಕ್ಷಣ ಕೊಡುವುದು.
- ಸ್ತ್ರೀಯ ಸ್ಥಾನ ಹೆಚ್ಚಿಸುವುದು.
- ಜನಸಂಖ್ಯಾ ಶಿಕ್ಷಣವನ್ನು ಎಲ್ಲರಿಗೂ ಕೊಡುವುದು.
- ಕುಟುಂಬ ಯೋಜನೆಯನ್ನು ಅನುಸರಿಸುವುದು.
ಎನ್.ವ್ಹಿ ರಮೇಶ್
ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು ಆಕಾಶವಾಣಿ