ಸಿಂದಗಿ: ಮನೆಯಲ್ಲಿ ಬಹುದಿನಗಳಿಂದ ತುಂಬಿಡುವ ಬ್ಯಾರಲ್ಗಳಲ್ಲಿ, ತಗ್ಗು ಪ್ರದೇಶ, ತೆಂಗಿನಚಿಪ್ಪು, ಫ್ರಿಡ್ಜ, ಕೂಲರ್ ಇತ್ಯಾದಿಗಳಲ್ಲಿ ಸಂಗ್ರಹಗೊಂಡ ನೀರಿನಲ್ಲಿ ಈಡಿಸ್ ಇಜಿಪ್ತಿ ಎಂಬ ಸೊಳ್ಳೆ ಮೊಟ್ಟೆ ಇಟ್ಟು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಅನೇಕ ರೋಗಗಳು ತಾನಾಗಿಯೇ ಹರಡುವ ಸಂಭವವಿದ್ದು ಕಾರಣ ದಿನೆ ದಿನೆ ನೀರು ಬಳಕೆ ಮಾಡಿ ಅಲ್ಲದೆ ಹೆಚ್ಚು ದಿನಗಳ ಕಾಲ ಸಂಗ್ರಹವಾಗಿಬೇಡಿ ಎಂದು ತಾಲೂಕಾ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ವಾಯ್.ಚೌಡಕಿ ಸಲಹೆ ನೀಡಿದರು.
ಪಟ್ಟಣದ ವಾರ್ಡ ನಂ:22-23 ರಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಿಂದ ಸೊಳ್ಳೆ ಪರದೆ ವಿತರಿಸಿ ಮಾತನಾಡಿ, ಇದರಿಂದ ಸೊಳ್ಳೆ ಕಚ್ಚುವಿಕೆಯಿಂದ ಬರಬಹುದಾದ, ಮಲೇರಿಯಾ, ಡೆಂಗ್ಯೂ, ಚಿಕುನಗುನ್ಯ, ಆನೆಕಾಲುರೋಗ, ಮೆದುಳು ಜ್ವರ ಮುಂತಾದ ರೋಗಗಳು ತೀವ್ರವಾಗಿ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮನೆಯಲ್ಲಿ ಹಾಗೂ ಸುತ್ತ ಮುತ್ತ ನೈರ್ಮಲ್ಯ ಕಾಪಾಡುವದು. ನೀರಿನ ಸಂಗ್ರಹಾಗಾರದ ಮೇಲ್ಮಟ್ಟದ ತೊಟ್ಟಿ ಮತ್ತು ಮಿನಿ ವಾಟರ್ ತೊಟ್ಟಿಗಳನ್ನು ಕಡ್ಡಾಯವಾಗಿ ಪ್ರತಿ ಏಳು ದಿನಗಳಿಗೊಮ್ಮೆ ಸ್ವಚ್ಚಗೊಳಿಸಿ ತೊಳೆಯುವದು. ಘನ ತ್ಯಾಜ್ಯ ವಿಲೇವಾರಿ, ಬಗ್ಗೆ ಹಾಗೂ ಸೊಳ್ಳೆ ಕಚ್ಚುವಿಕೆಯಿಂದ ತಪ್ಪಿಸಿಕೊಳ್ಳಲು ಸೊಳ್ಳೆಪರದೆ, ಬೇವಿನಸೊಪ್ಪಿನ ಹೊಗೆ ಹಾಕುವದು ಹಾಗೂ ಇತರೆ ಸ್ವಯಂ ರಕ್ಷಣಾ ವಿಧಾನಗಳ ಬಗ್ಗೆ ವಿವರಿಸಿದರು.
ತಾಲೂಕಾ ಮಲೇರಿಯಾ ಮೇಲ್ವಿಚಾರಕ ಪ್ರಭು ಜಂಗಿನಮಠ ಮಾತನಾಡಿ, ನಮ್ಮ ತಾಲೂಕಿನಲ್ಲಿ ಜನೇವರಿ-21 ರಿಂದ ನವೆಂಬರ್-21 ರವರೆಗೆ ಒಟ್ಟು 380 ಸಂಶಯಾಸ್ಪದ ವ್ಯಕ್ತಿಗಳಲ್ಲಿ 49 ಖಚಿತ ಡೆಂಗ್ಯು ಮತ್ತು 350 ಸಂಶಯಾಸ್ಪದ ವ್ಯಕ್ತಿಗಳಲ್ಲಿ 71 ಖಚಿತ ಚಿಕುನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು ಹೆಚ್ಚು ಪ್ರಕರಣಗಳು ವರದಿಯಾದ ಮತ್ತು ಕೊಳಚೆ ಪ್ರದೇಶಗಳನ್ನು ಗುರುತಿಸಿ ರೋಗ ನಿಯಂತ್ರಣಕ್ಕಾಗಿ ಸೊಳ್ಳೆ ಪರದೆಗಳನ್ನು ವಿತರಿಸಲಾಗುತ್ತಿದೆ, ಕಳೆದ ಜನೇವರಿ ತಿಂಗಳಲ್ಲಿ ಸಿಂದಗಿ ನಗರದ ಬಸ್ ಡೀಪೋ ಪ್ರದೇಶದಲ್ಲಿ 500 ಹಾಗೂ ಅಂತರಗಂಗಿ ಗ್ರಾಮದಲ್ಲಿ 250, ಕಡಣಿ ಗ್ರಾಮದಲ್ಲಿ 650, ಸೋಮಜ್ಯಾಳ ಗ್ರಾಮದಲ್ಲಿ 750, ಹೂನಳ್ಳಿ ಗ್ರಾಮದಲ್ಲಿ 350, ಮತ್ತು ಕಳೆದ ತಿಂಗಳಲ್ಲಿ ಮದನಹಳ್ಳಿ ಗ್ರಾಮದಲ್ಲಿ 750 ಕುಟುಂಬಗಳಿಗೆ ಸೊಳ್ಳೆ ಪರದೆಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 22 ಮತ್ತು 23 ವಾರ್ಡುಗಳಲ್ಲಿ ಸುಮಾರು 800 ಕುಟುಂಬಗಳಿಗೆ ಕೀಟನಾಶಕದಿಂದ ಉಪಚರಿಸಿದ ಸೊಳ್ಳೆ ಪರದೆಗಳನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಜು ಬಂಕಲಗಿ, ವಿರೇಂದ್ರ ಪವಾಡೆ, ಶಿವಾನಂದ ಬಮ್ಮನಳ್ಳಿ, ಜೆ.ಕೆ.ಚಿಕರೆಡ್ಡಿ, ಮಹಾಲಿಂಗ ಫಕೀರಪೂರ, ಡಿ.ಎಲ್.ಕುಂಬಾರ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಆಶಾ ಕಾರ್ಯಕರ್ತೆ ನಾಗಮ್ಮ ಎಮ್ಮಿ ಸ್ವಾಗತಿಸಿ ವಂದಿಸಿದರು.