Homeಸುದ್ದಿಗಳುಪ್ರಕೃತಿ ಸೌಂದರ್ಯ ಆರಾಧಕರು ಕುವೆಂಪು - ಡಾ. ಕೆ. ಎನ್. ದೊಡಮನಿ

ಪ್ರಕೃತಿ ಸೌಂದರ್ಯ ಆರಾಧಕರು ಕುವೆಂಪು – ಡಾ. ಕೆ. ಎನ್. ದೊಡಮನಿ

ಬೆಳಗಾವಿ– ನಿಸರ್ಗ, ಶಾಂತತೆ, ತನ್ಮಯತೆ, ರಸಾನುಭೂತಿಯನ್ನು ಕಾಡಿನಲ್ಲಿ ಮಾತ್ರ ಅನುಭವಿಸಲು ಸಾಧ್ಯ. ಪ್ರಕೃತಿಯಿಂದಲೇ ಮನುಷ್ಯ; ಮನುಷ್ಯನಿಂದ ಪ್ರಕೃತಿಯಲ್ಲ. ಆದ್ದರಿಂದ ಕುವೆಂಪು ಅವರು ಪ್ರಕೃತಿಯನ್ನು ಈಶ್ವರ ಶಕ್ತಿ ರೂಪವಾಗಿ ಆರಾಧಿಸಿದರು ಎಂದು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ನಡೆದ ರಸ ಋಷಿ ಕುವೆಂಪು ಅವರ ಜನ್ಮದಿನಾಚರಣೆ ಮುಖ್ಯ ಅತಿಥಿಗಳಾಗಿ ಡಾ. ಕೆ. ಎನ್. ದೊಡಮನಿ ಇವರು ಮಾತನಾಡಿದರು.

ಕುವೆಂಪು ಕಾಡಿನಿಂದ ನಾಡಿಗೆ ಬಂದವರು. ರಾಮಕೃಷ್ಣ ಆಶ್ರಮ ಅವರನ್ನು ವಿಶ್ವ ಮಾನವ ಪ್ರಜ್ಞೆಗೆ ಅನುವು ಮಾಡಿತು. ಪ್ರಕೃತಿಯೇ ಶಿವನಿಲಯ. ಕನ್ನಡದ ಅಸ್ಮಿತೆಯ ಅತಿದೊಡ್ಡ ಶಕ್ತಿಯಾಗಿ “ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು.” ಎಂದು ಹಾಡಿದರು. ವೈಚಾರಿಕ ಪ್ರಜ್ಞೆಯ ನಿಲುವುಗಳ ಮೂಲಕ ಹಳೆಯ ವಿಚಾರಗಳೊಂದಿಗೆ ಹೊಸತಾತ್ವಿಕ ಚಿಂತನೆಯನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಿದರು. ಜೊತೆಗೆ ವಿಶ್ವ ಮಾನವ ಸಂದೇಶ ಬಹುದೊಡ್ಡ ಕೊಡುಗೆ. “ಓ ನನ್ನ ಚೇತನ” ಮತ್ತು ” ಇಲ್ಲಿ ಯಾರು ಮುಖ್ಯರಲ್ಲ. ಇಲ್ಲಿ ಯಾರು ಅಮುಖ್ಯರಲ್ಲ, ಯಾವುದು ಯಕಶ್ಚಿತವಲ್ಲ, ಇಲ್ಲಿ ಮೊದಲಿಲ್ಲ, ಕೊನೆಯಿಲ್ಲ.” ಎಂಬ ಮಾತು ವಿಶಿಷ್ಟ ನಿಲುವು. ಮಾನವನ ಸ್ವಾರ್ಥಭಾವಕ್ಕೆ ಚಾಟಿ ಬಿಸಿದಂತೆ ಇದೆ ಈ ಸಂದೇಶ. ಆದುದರಿಂದ ಈ ಬದುಕು ಕ್ರಿಯಾಶೀಲವಾಗಿರಬೇಕು. ಹೊಸ ಮನ್ವಂತರ ಆಹ್ವಾನಿಸುತ್ತಿರಬೇಕು. ಹೊಸ ವೈಜ್ಞಾನಿಕ, ವೈಚಾರಿಕ ಪ್ರಜ್ಞೆಯನ್ನು ನಾವು ಬೆಳೆಸಿಕೊಂಡು ಬದುಕಿದಾಗ ವಿಶ್ವಮಾನವ ಸಂದೇಶದೊಂದಿಗೆ ಬದುಕಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ಎಮ್. ಗಂಗಾಧರಯ್ಯ ಅವರು ಮಾತನಾಡಿ, ಕುವೆಂಪು ಅವರು ನೀಡಿದ ವಿಶ್ವ ಮಾನವ ಸಂದೇಶ ಬಹಳ ವಿಶೇಷ. ಅವರ ಬರವಣಿಗೆಯ ಕನ್ನಡದ “ರಾಮಾಯಣ ದರ್ಶನಂ” ವಿಶಿಷ್ಟ ಕೊಡುಗೆ. ಅರವಿಂದರಿಂದ ದೊರೆತ ಸಂಸ್ಕಾರ ಅವರನ್ನು ಹೊಸ ಯುಗದತ್ತ ಕೊಂಡೊಯ್ಯಲು ಪೂರಕವಾಗಿತ್ತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಅಶೋಕ ಮುಧೋಳ, ಎಂ.ಎ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಮಹೇಶ್ ಗಾಜಪ್ಪನವರ ಅವರು ನಿರೂಪಿಸಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group