ಸಿಂದಗಿ: ಕಳೆದ ಅ.1 ರಂದು ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಿಸಲು ಸಿದ್ಧವಾಗಿದ್ದ ಸದಸ್ಯರು ಈಗ ಪುನಃ ಎರಡನೇ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಇಬ್ಬರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ವಿಶೇಷ ಸಭೆ ಕರೆಯುವಂತೆ ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ ಅವರಿಗೆ ಮನವಿ ಸಲ್ಲಿಸಿದರು.
ಪುರಸಭೆಯ 14 ಸದಸ್ಯರು ಸೇರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅವರು ಕಳೆದ ಹದಿಮೂರು ತಿಂಗಳಿನಿಂದಲೂ ಅಧಿಕಾರದಲ್ಲಿದ್ದರೂ ಪಟ್ಟಣದ ನಾನಾ ಅಭಿವೃದ್ಧಿಗಾಗಿ ಕೇವಲ ಮೂರು ಸಾಮಾನ್ಯ ಸಭೆಗಳನ್ನು ನಡೆಸಿದ್ದಾರೆ. ಅವರ ಆಡಳಿತ ನಮಗೆ ತೃಪ್ತಿ ತಂದಿಲ್ಲದ ಕಾರಣ ಅವಿಶ್ವಾಸ ಮಂಡನೆಗೆ ವಿಶೇಷ ಸಭೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಹಿಂದೆ ಕಲಬುರ್ಗಿ ಸಂಚಾರಿ ಪೀಠವು ನ.16ರಂದು ಸದಸ್ಯರ ಅವಿಶ್ವಾಸ ಮಂಡನೆಗೆ ಸೂಚಿಸಿತ್ತು. ಅದರಂತೆ ಮುಖ್ಯಾಧಿಕಾರಿ ನ.16ರ ಸಭೆಯನ್ನು ನ್ಯಾಯಾಲಯದ ಆದೇಶದಂತೆ ಅವಿಶ್ವಾಸ ಸಭೆ ನಡೆಸಿ ಮುಚ್ಚಿದ ಲಕೋಟೆಯಲ್ಲಿ ಸದಸ್ಯರ ನಿರ್ಣಯವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಡಿ.22ರಂದು ಹೊಸ ಆದೇಶ ಹೊರಡಿಸಿ ಅಮಾನ್ಯಗೊಳಿಸಿತ್ತು ಅಲ್ಲದೇ ಸದಸ್ಯರು ಇನ್ನೊಂದು ಬಾರಿಯೂ ಆಡಳಿತದಲ್ಲಿರುವ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಮಾಡಲು ಅವಕಾಶ ಕಲ್ಪಿಸಿತ್ತು. ಈ ಹಿನ್ನಲೆಯಲ್ಲಿ ಸದಸ್ಯ ಹಣಮಂತ ಸುಣಗಾರ, ಬಾಶಾಸಾಬ ತಾಂಬೋಳಿ, ಖೈರುನಬಿ ನಾಟೀಕಾರ, ಬಸಮ್ಮ ಸಜ್ಜನ, ಗೊಲ್ಲಾಳಪ್ಪ ಬಂಕಲಗಿ, ಶರಣಗೌಡ ಪಾಟೀಲ, ಮಹಾಂತೇಶ ಬಿರಾದಾರ, ಭಾಗವ್ವ ಡೋಣೂರ, ಸಂದೀಪ್ ಚೌರ, ಉಮಾದೇವಿ ಸುಲ್ಪಿ, ಕಲಾವತಿ ಕಡಕೋಳ, ಬಸವರಾಜ ಯರನಾಳ, ರಾಜಣ್ಣ ಧರ್ಮಣ್ಣ ನಾರಾಯಣಕರ, ಮಹಾದೇವಿ ನಾಯ್ಕೋಡಿ ಅವರು ಸದಸ್ಯೆಯರಾದ, ವಿಜಯಲಕ್ಷ್ಮಿ ನಾಗೂರ, ಪಾರ್ವತಿ ದುರ್ಗಿ ಅವರ ಹೆಸರಿದ್ದರೂ ಸಹಿ ಕಂಡಿಲ್ಲದ ಪತ್ರವನ್ನು ಸದಸ್ಯರು ಮುಖ್ಯಾಧಿಕಾರಿಗೆ ಸಲ್ಲಿಸಿದ್ದಾರೆ.