Homeಸುದ್ದಿಗಳು"ಫಲಾಪೇಕ್ಷೆ ಇಲ್ಲದ ಸೇವೆಯು ನಿಜವಾದ ಸಮಾಜ ಸೇವೆಯಾಗಿದೆ"- ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಶ್ರೀಕಾಂತ ಮೋರೆ...

“ಫಲಾಪೇಕ್ಷೆ ಇಲ್ಲದ ಸೇವೆಯು ನಿಜವಾದ ಸಮಾಜ ಸೇವೆಯಾಗಿದೆ”- ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಶ್ರೀಕಾಂತ ಮೋರೆ ಅಭಿಮತ

ಮೂಡಲಗಿ: ‘ಫಲಾಪೇಕ್ಷೆ ಬಯಸದೆ ನಿಸ್ವಾರ್ಥದಿಂದ ಮಾಡುವ ಸಮಾಜ ಸೇವಾ ಕಾರ್ಯಗಳು ಸಮಾಜವನ್ನು ತಲುಪುತ್ತವೆ’ ಎಂದು ಲಯನ್ಸ್ ಕ್ಲಬ್ 317ಬಿ ಜಿಲ್ಲಾ ಗವರ್ನರ್ ಶ್ರೀಕಾಂತ ಮೋರೆ ಅವರು ಹೇಳಿದರು.

ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2021-22ನೇ ಸಾಲಿನ ಸಾಮಾಜಿಕ ಕಾರ್ಯಚಟುವಟಿಕೆಗಳ ಸಮೀಕ್ಷೆ ಮತ್ತು ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಷ್ಟದಲ್ಲಿದ್ದವರಿಗೆ ಸಹಾಯ ಮತ್ತು ದಾನ ಮಾಡುವ ಇಚ್ಛಾಶಕ್ತಿ ಇರುವುದು ಮಾನವೀಯತೆಯ ಪ್ರತೀಕವಾಗಿದೆ ಎಂದರು.

ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯು ಸಮಾಜ ಸೇವೆಯಲ್ಲಿ ಜಗತ್ತಿನ ಬಹುದೊಡ್ಡ ಸಂಘಟನೆಯಾಗಿದೆ. ಜಗತ್ತಿನ 210 ದೇಶಗಳಲ್ಲಿ ಲಯನ್ಸ್ ಕ್ಲಬ್‍ವು ಜನರ ಕಷ್ಟಗಳಿಗೆ ಸೌಹಾರ್ದತೆ ಮತ್ತು ಮಾನವೀಯತೆಯ ಮೂಲಕ ಸ್ಪಂದಿಸಿ ಬಹುದೊಡ್ಡ ಸೇವೆ ಮಾಡುತ್ತಲಿದೆ ಎಂದರು.

ಕಣ್ಣಿನ ಚಿಕಿತ್ಸೆ, ಮಧುಮೇಹ, ಮಕ್ಕಳ ರೋಗಗಳು, ಕ್ಯಾನ್ಸರ್ ಸೇರಿದಂತೆ ಬಡ ಜನರಿಗೆ ಉಚಿತವಾಗಿ ಆರೋಗ್ಯ ಚಿಕಿತ್ಸೆಗಳನ್ನು ಲಯನ್ಸ್ ಸಂಸ್ಥೆಯು ದೇಶಾದ್ಯಂತ ಸಂಘಟಿಸಿ ಜನರ ಆರೋಗ್ಯಕ್ಕೆ ಮಹತ್ವ ನೀಡಿದೆ ಎಂದರು.

ಮೂಡಲಗಿ ಲಯನ್ಸ್ ಪರಿವಾರವು ಕಡಿಮೆ ಅವಧಿಯಲ್ಲಿ 34ಕ್ಕೂ ಅಧಿಕ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಮಾಡಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನ್ನದಾಸೋಹ ಸೇವೆಯನ್ನು ಅರ್ಥಪೂರ್ಣವಾಗಿ ಮಾಡುತ್ತಲಿರುವುದು ಶ್ಲಾಘನೀಯವಾಗಿದೆ ಎಂದರು.

ಅತಿಥಿ ಉಜ್ವಲಾ ಶ್ರೀಕಾಂತ ಮೋರೆ ಅವರು ಮಾತನಾಡಿ, ಲಯನ್ಸ್ ಕ್ಲಬ್ ಸಂಘಟನೆಯಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿಬೇಕು. ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗೆ ಪೂರಕವಾದ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಲಯನ್ಸ್ ಕ್ಲಬ್ ಜಿಲ್ಲಾ ಖಜಾಂಚಿ ಕೃಷ್ಣಾಜೀ ಬಗಲಿ ಮಾತನಾಡಿ ಲಯನ್ಸ್ ಸಂಸ್ಥೆಯ ಪ್ರತಿಯೊಬ್ಬರು ಸೇವೆಗೆ ಬದ್ಧರಾಗಿರಬೇಕು. ಸಮಾಜವು ಮೆಚ್ಚುವಂತ ಕಾರ್ಯಗಳನ್ನು ಮಾಡಬೇಕು ಎಂದರು.

ರಸ್ತೆ ಬದಿಯ ವ್ಯಾಪಾರಿಗಳಿಗೆ ಉಚಿತ ಛತ್ರಿಗಳ ವಿತರಣೆ, ಡಾ. ಸಚಿನ ತಮ್ಮಣ್ಣವರ ಕಣ್ಣಿನ ಆಸ್ಪತ್ರೆಯ ಸಹಕಾರದಲ್ಲಿ ಅಂಬ್ಯುಲೆನ್ಸ್ ಸೇವೆಗೆ ಚಾಲನೆ, ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನೆ ಹಾಗೂ ಡಾ. ಸಂಜಯ ಶಿಂಧಿಹಟ್ಟಿ ಅವರು ತಮ್ಮ ಮಕ್ಕಳ ಜನ್ಮ ದಿನಕ್ಕಾಗಿ ಏರ್ಪಡಿಸಿದ್ದ 69ನೇ ಅನ್ನದಾಸೋಹವನ್ನು ಜಿಲ್ಲಾ ಗವರ್ನರ್ ಶ್ರೀಕಾಂತ ಮೋರೆ ಅವರು ಉದ್ಘಾಟಿಸಿದರು.

ಖಜಾಂಚಿ ಸುಪ್ರೀತ ಸೋನವಾಲಕರ, ವೆಂಕಟೇಶ ಸೋನವಾಲಕರ, ಡಾ. ಪ್ರಕಾಶ ನಿಡಗುಂದಿ, ಮಹಾಂತೇಶ ಹೊಸೂರ, ಶಿವಾನಂದ ಗಾಡವಿ, ಡಾ. ಎಸ್.ಎಸ್. ಪಾಟೀಲ, ಶ್ರೀಶೈಲ್ ಲೋಕನ್ನವರ, ಸುರೇಶ ನಾವಿ, ಪುಲಕೇಶ ಸೋನವಾಲಕರ, ಮಲ್ಲಪ್ಪ ಖಾನಗೌಡರ, ಡಾ. ಪ್ರಶಾಂತ ಬಾಬನ್ನವರ, ಡಾ. ತಿಮ್ಮಣ್ಣ ಗಿರಡ್ಡಿ, ಪ್ರಮೋದ ಪಾಟೀಲ, ಅಪ್ಪಣ್ಣ ಬಡಿಗೇರ, ಶಿವಬಸು ಈಟಿ, ವಿಜಯಲಕ್ಷ್ಮೀ ಸೋನವಾಲಕರ, ರಜನಿ ಬಂದಿ ಇದ್ದರು.

ಲಯನ್ಸ್ ಮೂಡಲಗಿ ಪರಿವಾರ ಅಧ್ಯಕ್ಷ ಬಾಲಶೇಖರ ಬಂದಿ ಸ್ವಾಗತಿಸಿದರು, ಕಾರ್ಯದರ್ಶಿ ಸಂಜಯ ಶಿಂಧಿಹಟ್ಟಿ ಕಾರ್ಯಟುವಟಿಕೆಗಳ ಬಗ್ಗೆ ವರದಿ ಸಲ್ಲಿಸಿದರು, ಮಹಾವೀರ ಸಲ್ಲಾಗೋಳ ನಿರೂಪಿಸಿದರು, ಶಿವಾನಂದ ಕಿತ್ತೂರ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group