ಸಿಂದಗಿ: ಪ್ರಸಕ್ತವಾಗಿ ನಡೆಸುತ್ತಿರುವ ವಿದ್ಯಮಾನಗಳ ಕುರಿತು ಚರ್ಚಿಸಿ ಸರಕಾರವು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿದ್ದು ಉತ್ತಮ ಬೆಳವಣಿಗೆಯಾಗಿದೆ. ಅದೇ ತರಹ ಈ ಸಮಾಜದಲ್ಲಿ ಲವ್ ಜಿಹಾದಗೆ ಅನೇಕ ಹೆಣ್ಣು ಮಕ್ಕಳು ಬಲಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಾಗಣಗೇರಿ ಬೃಹನ್ಮಠದ ಡಾ. ವಿಶ್ವರಾದ್ಯ ಶಿವಾಚಾರ್ಯರು ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಅಲ್ಲಾಪುರ ಗ್ರಾಮದ ನೂರಂದೇಶ್ವರ ಹಿರೇಮಠದಲ್ಲಿ ವಿಜಯಪುರ ಜಿಲ್ಲಾ ಮಠಾಧೀಶರ ಒಕ್ಕೂಟದ ತ್ರೈಮಾಸಿಕ 17ನೇ ಸಭೆಯಲ್ಲಿ ಮಾತನಾಡಿ, ಹೀಗಾಗಿ ಸಧೃಡ ಸಮಾಜಕ್ಕೆ ಧಕ್ಕೆ ಯಾಗದ ರೀತಿಯಲ್ಲಿ ನಡೆದುಕೊಳ್ಳುವುದು ಉತ್ತಮ ಈ ಕುರಿತಾಗಿ ಸರಕಾರ ಸಶಕ್ತವಾದ ಕಾನೂನನ್ನು ಜಾರಿಗೊಳಿಸಿ ಹೆಣ್ಣುಮಕ್ಕಳ, ದೀನರನ್ನು ಸಂರಕ್ಷಿಸುವ ಕಾರ್ಯವಾಗಬೇಕು ಈ ಸಮಾಜದಲ್ಲಿ ಯಾವುದೇ ವ್ಯಕ್ತಿಯಾಗಲಿ, ಧಾರ್ಮಿಕ ಮುಖಂಡರಾಗಲಿ ಅಥವಾ ಸಮಾಜದ ಗಣ್ಯಮಾನ್ಯರಾಗಲಿ, ಯಾವುದೇ ಸಮಾಜ ಬಾಂಧವರ ಬಗ್ಗೆ ಬಹಳ ಹಗುರವಾಗಿ ವೀರಶೈವ ಲಿಂಗಾಯತ ಮತ್ತು ಉಪಪಂಗಡದಲ್ಲಿರುವ ಸಮುದಾಯದ ಹಾಗೂ ಆ ಒಳಪಂಗಡದಲ್ಲಿರುವ ಧರ್ಮ ಪರಂಪರೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ತುಚ್ಛವಾಗಿಮಾತನಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂಥದಲ್ಲ ಎಂದರು.
ಆಲಮೇಲ ಗುರುಸಂಸ್ಥಾನಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಅಖಂಡ ವೀರಶೈವ ಲಿಂಗಾಯತ ಸಮುದಾಯವನ್ನು ಉಪಜಾತಿಗಳ ನೆಪಮಾಡಿಕೊಂಡು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ವಿರೋಧಿಸುವ ಕೆಟ್ಟ ಪ್ರವೃತ್ತಿಯನ್ನು ಬಿಟ್ಟು ವೀರಶೈವ ಧರ್ಮದ ಸನಾತನ ಪರಂಪರೆಯ ಸಂಸ್ಕೃತಿ, ಆಚಾರ-ವಿಚಾರಗಳು ಶ್ರೇಷ್ಠವಾಗಿರುತ್ತವೆ. ಅಷ್ಠಾವರಣ, ಪಂಚಾಚಾರ, ಷಟಸ್ಥಲಗಳು ಧಾರ್ಮಿಕ ತಳಹದಿಯಲ್ಲಿ ಗುರುಲಿಂಗ ಜಂಗಮ, ತತ್ವತ್ರಯಗಳ ನೆಲೆಗಟ್ಟಿನ ಮೇಲೆ ಸಮಾಜಕ್ಕೆ ತಿಳಿಹೇಳುವುದು ಮಠಾಧೀಶರ ಆದ್ಯ ಕರ್ತವ್ಯವಾಗಿದೆ ಎಂದರು.
ಸಾರಂಗಮಠ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಮಾತನಾಡಿ, “ಜಾತಿಗಿಂತ ನೀತಿಮುಖ್ಯ” ಬೋಧನೆಗಿಂತ ಸಾಧನೆಮುಖ್ಯ. ಕಾಯಕ ದಾಸೋಹಗಳ ಚಿಂತನೆಯ ಕೆಲಸ ಮಠಾಧೀಶರ ಒಕ್ಕೂಟವು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ನಾಡಿನಲ್ಲಿ ಇತ್ತೀಚೆಗೆ ಕೆಲವು ಬೆಳವಣಿಗೆಗಳಂತೆ ಒಂದು ಸಮುದಾಯವನ್ನು ಟೀಕಿಸುವ ಪ್ರಚಾರದ ಭರದಲ್ಲಿ ತಮ್ಮ ಬೌದ್ಧಿಕ ದಿವಾಳಿತನದ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಹೀಗೆ ಮುಂದುವರೆಸಿದರೆ ಇದಕ್ಕೆ ತಕ್ಕವಾದ ಪ್ರತ್ಯುತ್ತರ ಕೊಡಬೇಕಾದೀತು ಎಂದು ಹಲವಾರು ಮಠಾಧಿಶರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಲಗಾಣ ಹಿರೇಮಠದ ಜಡೆಶಾಂತಲಿಂಗ ಶಿವಾಚಾರ್ಯರು, ದೇವರಹಿಪ್ಪರಗಿ ಸದಯ್ಯನಮಠದ ವೀರಗಂಗಾಧರ ಶಿವಾಚಾರ್ಯರು, ಯಂಕಂಚಿ ಕುಂಟೋಜಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಹಿರೂರ ಹಿರೇಮಠದ ಜಯಸಿದ್ದೇಶ್ವರ ಶಿವಾಚಾರ್ಯರು, ಮುಳವಾಡ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ಹಿರೋಳ್ಳಿ ವಿರಕ್ತಮಠದ ಶಿವಬಸವ ಸ್ವಾಮಿಗಳು, ಆಲಮೇಲ ಅರ್ಜುಣಗಿ ಹಿರೇಮಠದ ಸಂಗನಬಸವ ಶಿವಾಚಾರ್ಯರು, ಗುಂಡಕನಾಳ ಬ್ರಹನ್ಮಠದ ಗುರುಲಿಂಗ ಶಿವಾಚಾರ್ಯರು, ಬೋರಗಿ ಮಹಾಲೀಂಗೇಶ್ವರ ಸ್ವಾಮಿಗಳು, ಗೋಲಗೇರಿ ಭಂಡಾರಿಮಠದ ಮುನೀಂದ್ರ ಸ್ವಾಮಿಗಳು, ದೇವೂರ ಮಠದ ಮರುಳಾರಾಧ್ಯ ಶಿವಾಚಾರ್ಯರು, ದೇವರಹಿಪ್ಪರಗಿಯ ಗಂಗಾಧರ ಶಿವಾಚಾರ್ಯರು, ಬಳವಟ್ಟದ ಸೋಮಶೇಖರ ದೇವರು, ನಾವದಗಿಯ ರಾಜೇಂದ್ರ ದೇವರು, ಡವಳಗಿಯ ಘನಮಠ ಶಿವಯೋಗಿಗಳು, ಕುಮಟಗಿಯ ಶಿವಾನಂದ ಶಿವಾಚಾರ್ಯರು, ದೇವರಹಿಪ್ಪರಗಿಯ ಶಿವಯೋಗಿ ದೇವರು ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಇದ್ದರು.