ಮೂಡಲಗಿ: ಹಂಪಿ ಎಕ್ಸ್ ಪ್ರೆಸ್ ಹಾಗೂ ಬಸವ ಎಕ್ಸ್ ಪ್ರೆಸ್ ರೈಲುಗಳನ್ನು ಗುಂತಕಲ್-ಧರ್ಮಾವರಂ ನಿಲ್ದಾಣದಿಂದ ವ್ಹಾಯಾ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಕ್ಕೆ ರೈಲು ಸಂಚಾರ ಪ್ರಾರಂಭಿಸುವಂತೆ ರೈಲ್ವೆ ಸಚಿವರಲ್ಲಿ ಮನವಿ ಮಾಡಲಾಗುವುದು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಶನಿವಾರ ಜ.29 ರಂದು ಆಂಧ್ರಪ್ರದೇಶದ ಪುಟ್ಟಪರ್ತಿ ಪ್ರಶಾಂತಿ ನಿಲಯಂ ಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯದ ಸೇವಾದಳ ಅಧ್ಯಕ್ಷ ಪ್ರಭಾಕರ ಬೀರಯ್ಯ ಹಾಗೂ ಸದಸ್ಯರ ಮನವಿ ಸ್ವೀಕರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಪುಟ್ಟಪರ್ತಿ ಸತ್ಯಸಾಯಿ ಆಶ್ರಮವು ಆಧ್ಯಾತ್ಮಿಕ ಗುರು ಸಾಯಿಬಾಬಾರವರು ವಾಸಿಸುತ್ತಿದ್ದ ಸ್ಥಳವಾಗಿದೆ. ಈ ಆಶ್ರಮದಲ್ಲಿ ವರ್ಷಪೂರ್ತಿ ನಾನಾ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಇದು ವಿಶ್ವದ ಅತ್ಯುತ್ತಮ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾಗಿದ್ದು, ರಾಜ್ಯದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಧಾರ್ಮಿಕ ಕ್ಷೇತ್ರಕ್ಕೆ ಆಗಮಿಸುತ್ತಿರುವ ಪ್ರಯುಕ್ತ ಹಂಪಿ ಎಕ್ಸ್ ಪ್ರೆಸ್ ಮತ್ತು ಬಸವ ಎಕ್ಸ್ ಪ್ರೆಸ್ ರೈಲುಗಳನ್ನು ಗುಂತಕಲ್-ಧರ್ಮಾವರಂ ನಿಲ್ದಾಣದಿಂದ ವ್ಹಾಯಾ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಕ್ಕೆ ವಿಸ್ತರಿಸುವುದು ಅವಶ್ಯಕವಾಗಿದೆ. ಈ ಪ್ರಯುಕ್ತ ಮಾನ್ಯ ಕೇಂದ್ರ ರೈಲ್ವೆ ಸಚಿವರಲ್ಲಿ ವಿನಂತಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸತ್ಯಸಾಯಿ ಬಾಬಾರ ಸಹೋದರ ಪುತ್ರ ಹಾಗೂ ಪ್ರಶಾಂತಿ ನಿಲಯದ ಮುಖ್ಯ ಟ್ರಸ್ಟಿ ಜೆ. ರತ್ನಾಕರ, ಶೇಖರ ಮಾಸರಡ್ಡಿ, ಸುರೇಶ ರಾಟಿ, ದತ್ತು ಕಲಾಲ, ಬಸವರಾಜ ಕಡಾಡಿ, ಗಿರೀಶ ಗಾಟಿ, ಶ್ರೀಶೈಲ ತುಪ್ಪದ, ಬಸವರಾಜ ಹುಳ್ಳೇರ, ಹಣಮಂತ ಬಡಿಗೇರ, ಪರಪ್ಪ ಗಿರೆಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.