ವೃದ್ದಾಪ್ಯದಲ್ಲಿ ತಂದೆ-ತಾಯಿಗಳನ್ನು ನೋಡಿಕೊಳ್ಳದಿರುವ ಮಕ್ಕಳಿಗೆ ಉಗ್ರ ಶಿಕ್ಷೆ ನೀಡುವಂತಹ ಕಾನೂನನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕೆಂದು ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಒತ್ತಾಯಿಸಿದರು.
ಅವರು ಹಿನಕಲ್ ನ ಸೇವಾಯಾನ ಟ್ರಸ್ಟ್ ನಡೆಸುತ್ತಿರುವ ವೃದ್ಧಾಶ್ರಮದಲ್ಲಿ ನಡೆದ ಸುಗಮ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ತಂದೆ-ತಾಯಿ ತಮ್ಮ ಜೀವನವನ್ನೇ ತ್ಯಾಗ ಮಾಡಿ ಮಕ್ಖಳಿಗೆ ವಿದ್ಯಾಭ್ಯಾಸ ಹಾಗೂ ಜೀವನ ಕಲ್ಪಿಸುತ್ತಾರೆ. ಆದರೆ ಮಕ್ಕಳು ತಮ್ಮ ತಂದೆ-ತಾಯಿಗಳಿಗೆ ವಯಸ್ಸಾಗುತ್ತಿದ್ದಂತೆ ಮನೆಯಿಂದ ಆಚೆ ಹಾಕುತ್ತಾರೆ. ಅಂತಹ ಮಕ್ಕಳ ಆಸ್ತಿಯಲ್ಲಿ ಪೋಷಕರ ಪಾಲನೆಗಾಗಿ ಪಾಲು ನೀಡುವಂತಹ ಕಾನೂನನ್ನು ಸರ್ಕಾರ ಜಾರಿಗೆ ತರಬೇಕೆಂದು ಆಗ್ರಹಪಡಿಸಿದರು.
ಪ್ರಸ್ತುತ ದಿನಮಾನದಲ್ಲಿ ವೃದ್ದರನ್ನು ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ , ಮೂಳೆ ಸವೆತ ಮೊದಲಾದ ಕಾಯಿಲೆಗಳು ನಿರಂತರವಾಗಿ ಕಾಡುತ್ತಿವೆ. ರಾಜ್ಯಸರ್ಕಾರ ನೀಡುತ್ತಿರುವ ವೃದ್ದಾಪ್ಯ ವೇತನ ಅಥವಾ ವಿಧವಾ ವೇತನಗಳು ಹಿರಿಯ ಜೀವಗಳು ಮಾತ್ರೆ, ಔಷಧಿ ಕೊಳ್ಳಲೂ ಸಾಕಾಗುವುದಿಲ್ಲ. ಆದ್ದರಿಂದ ಹಿರಿಯ ನಾಗರೀಕರಿಗೆ ನೀಡುವ ವೃದ್ದಾಪ್ಯವೇತನ, ವಿಧವಾ ವೇತನಗಳನ್ನು ಕನಿಷ್ಟ ಮೂರು ಸಾವಿರ ರೂ.ಗಳಿಗೆ ಹೆಚ್ಚಿಸಬೇಕೆಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಹೆಡತಲೆ ಮಂಜುನಾಥ್ ಅವರು ಮಾತನಾಡಿ ಸಂಧ್ಯಾಸುರಕ್ಷಾ ಯೋಜನೆಯ ಹಣವನ್ನು ಹೆಚ್ಚಿಸುವ ಮೂಲಕ ಹಿರಿಯ ನಾಗರೀಕರಿಗೆ ಸರ್ಕಾರ ಬದುಕು ಕಟ್ಟಿಕೊಡಬೇಕೆಂದು ಆಗ್ರಹಪಡಿಸಿದರು.
ಕೆ.ಪಿ.ಸಿ ಸಿ.ಸದಸ್ಯರಾದ ಎನ್.ಭಾಸ್ಕರ್ ಅವರು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಸಮಾಜಸೇವಕರಾದ ವೀರರಾಜು ಕಂಪ್ಲಾಪುರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾಯಾನ ಟ್ರಸ್ಟ್ ಅಧ್ಯಕ್ಷರಾದ ಎಸ್.ಪ್ರಭಾಮಣಿ ಸ್ವಾಗತಿಸಿದರು. ಗಾನ ಗಂದರ್ವ ಕಲಾ ತಂಡದ ಅಧ್ಯಕ್ಷರಾದ ಸೌಭಾಗ್ಯಪ್ರಭು ಕಾರ್ಯಕ್ರಮ ನಿರೂಪಿಸಿದರು. ನಂತರ ಕೆ.ಆರ್.ನಗರ ತಾಲ್ಲೂಕಿನ ಗಜೇಂದ್ರ ಸಾಂಸ್ಕೃತಿಕ ತಂಡ ಹಾಗೂ ಮೈಸೂರಿನ ಕನ್ನಡ ಸಂಸೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕಲಾವಿದರ ಸುಗಮಸಂಗೀತ ಕಾರ್ಯಕ್ರಮ ವೃದ್ಧಾಶ್ರಮದ ನಿವಾಸಿಗಳಿಗೆ ಮುದ ನೀಡಿತು.