ಜಮಖಂಡಿ ಯಿಂದ ವಿಜಯಪುರಕ್ಕೆ ಹೋಗುವ ಮಧ್ಯೆ ಸಿಗುವ ಬಬಲೇಶ್ವರ ತಾಲೂಕಿನ ಸಾರವಾಡ ಎಂಬ ಹಳ್ಳಿಗೆ ಬಂದರೆ ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ಸಿಗುವ ಹೊಟೇಲುಗಳಲ್ಲಿ ನೀವು ರೊಟ್ಟಿ ಊಟ ಸವಿಯಬಹುದು.
ಒಂದು, ಎರಡು ರೊಟ್ಟಿ ಅಂತೇನಿಲ್ಲ, ಹೊಟ್ಟಿ ತುಂಬ ಊಟಾ ಮಾಡ್ರಿ ಎಂಬ ಆತ್ಮೀಯ ಆಗ್ರಹದೊಂದಿಗೆ ಊಟ ಬಡಿಸುವ ಈ ಹೊಟೇಲುಗಳಲ್ಲಿ ಬಹುತೇಕ ಹೆಣ್ಣು ಮಕ್ಕಳೇ ಮುಂಚೂಣಿಯಲ್ಲಿ ಇರುತ್ತಾರೆ.
ಸಾರವಾಡಕ್ಕೆ ಬರುತ್ತಲೇ ಪ್ರವೇಶದ ಹತ್ತಿರವೇ ಇರುವ ಅಡುಗೆ ಮನೆಯಿಂದ ರೊಟ್ಡಿ ಬಡಿಯುವ ಸದ್ದು ನಿಮ್ಮನ್ನು ಆಕರ್ಷಿಸುತ್ತದೆ. ಬರ್ರಿ ಬರ್ರಿ ಎಂದು ಆತ್ಮೀಯವಾಗಿ ಸ್ವಾಗತಿಸುವ ಹೆಣ್ಮಗಳು ನೀವು ಕೂರುತ್ತಲೆ ಪಲ್ಯ, ಮೊಸರು, ಹಿಂಡಿ ರೊಟ್ಟಿ, ಚಪಾತಿ ಇರುವ ತಾಟು ತಂದಿಡುತ್ತಾರೆ. ಬೇಕೆಂದರೆ ಕಡಕ್ ಜೋಳದ ರೊಟ್ಟಿ ಹಾಗೂ ಸಜ್ಜೆ ರೊಟ್ಟಿ ಸಿಗುತ್ತದೆ. ಇನ್ನಿಬ್ಬರು ಹೆಣ್ಮಕ್ಕಳು ನೀಡುವುದು, ನೀರು ಕೊಡುವುದು ಮಾಡುತ್ತಾರೆ. ಗಲ್ಲದ ಮೇಲೂ ಒಬ್ಬರು ವಯಸ್ಸಾದ ಅಜ್ಜಿ !
ಹೀಗೆ ಹೆಣ್ಮಕ್ಕಳಿಂದ ತುಂಬಿರುವ ಸಾರವಾಡದ ಶ್ರೀ ವೀರಭದ್ರೇಶ್ವರ ಖಾನಾವಳಿ, ಈಶ್ವರ ಖಾನಾವಳಿ, ಶ್ರೀ ಶಿವಯೋಗಿ ಸಿದ್ಧಾರೂಢ ಖಾನಾವಳಿಗಳಲ್ಲಿ ಬಿಸಿ ರೊಟ್ಟಿ, ಬಿಸಿ ಚಪಾತಿಗಳ ಅಪ್ಪಟ ಮನೆ ಊಟ ದೊರೆಯುತ್ತದೆ. ಊಟದ ರೇಟು ಕೇಳಿದರೆ ನಿಮಗೆ ಅಚ್ಚರಿಯಾಗುತ್ತದೆ.
ಯಾವಾಗಲಾದರೂ ವಿಜಯಪುರಕ್ಕೆ ಸಮೀಪದ ಸಾರವಾಡಕ್ಕೆ ಭೇಟಿ ಕೊಡಲೇಬೇಕು.