ಬೈಲಹೊಂಗಲ: ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಧಾರವಾಡ ರಂಗಾಯಣದ ಮೆರುಗನ್ನು ಹೆಚ್ಚಿಸಿದ ಕೀರ್ತಿ ನಿರ್ದೇಶಕರಾದ ರಮೇಶ ಎಸ್. ಪರವಿನಾಯ್ಕರ ಅವರಿಗೆ ಸಲ್ಲುತ್ತದೆ ಎಂದು ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಹೇಳಿದರು.
ಇತ್ತೀಚೆಗೆ ಪಟ್ಟಣದಲ್ಲಿ ಧಾರವಾಡ ರಂಗಾಯಣದ ಸಾರ್ಥಕ ರಂಗ ಪಯಣ ದ್ವೈ ವಾರ್ಷಿಕ ವರದಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಅತ್ಯಂತ ಕ್ರಿಯಾಶೀಲತೆಯಿಂದ ನಿರಂತರವಾಗಿ ವಿಭಿನ್ನ ಹಾಗೂ ವಿಶಿಷ್ಟ ಚಟುವಟಿಕೆಗಳಿಂದ ನಾಡಿನ ಜನರ ಮನಮುಟ್ಟುವಲ್ಲಿ ಧಾರವಾಡ ರಂಗಾಯಣ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಂಗಾಯಣದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಪರವಿನಾಯ್ಕರ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಹಲವಾರು ಸಾಂಸ್ಕೃತಿಕ ಯೋಜನೆಗಳು, ಪರಿಕಲ್ಪನೆಗಳನ್ನು ರೂಪಿಸಿ ಸಾಕಷ್ಟು ಕಲಾವಿದರು, ರಂಗಾಸಕ್ತರನ್ನು ಬೆಳೆಸಿರುವುದು ಪ್ರಶಂಸನೀಯ ಎಂದು ಅವರು ಅಭಿಪ್ರಾಯಪಟ್ಟರು.
ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಎಸ್.ಪರವಿನಾಯ್ಕರ ಮಾತನಾಡಿ 2006-07 ರಲ್ಲಿ ಆರಂಭವಾಗಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಧಾರವಾಡ ರಂಗಾಯಣ ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ ಒಟ್ಟೂ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ವಾರಾಂತ್ಯದ ನಾಟಕ, ತರಬೇತಿ, ಉಪನ್ಯಾಸ, ಕಾರ್ಯಾಗಾರ, ನಾಟಕೋತ್ಸವ, ಶಿಬಿರಗಳನ್ನು ಏರ್ಪಡಿಸುವುದರ ಮೂಲಕ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿ ಕಲಾವಿದರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು. ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮನ ಕುರಿತು ಬೃಹತ್ ಮಾದರಿಯ (ಮೆಗಾ) ನಾಟಕ ಸಿದ್ಧಪಡಿಸುವ ಯೋಜನೆಯೊಂದನ್ನು ಪ್ರಸ್ತಾವನೆಯೊಂದಿಗೆ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದರು.
ಇದಲ್ಲದೇ ಗ್ರಾಮಾಂತರ ಪ್ರದೇಶಗಳಲ್ಲಿ ನಾಟಕೋತ್ಸವ ಆಯೋಜನೆ, ಸುಸಜ್ಜಿತ ರಂಗಮಂದಿರ ನಿರ್ಮಾಣ, ಜಾನಪದ ನಾಟಕಗಳ ಪರಿಷ್ಕರಣೆ, ಯುವ ಬರಹಗಾರರಿಗೆ ಕಾರ್ಯಾಗಾರ, ಕಲಾವಿದರಿಗೆ ಒಂದು ವರ್ಷದ ಡಿಪ್ಲೋಮಾ ಕೋರ್ಸ ಆರಂಭಿಸುವಂತಹ ಇನ್ನೂ ಅನೇಕ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಪರವಿನಾಯ್ಕರ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಧಾರವಾಡ ರಂಗಾಯಣ ಸಿದ್ಧಪಡಿಸಿ ಪ್ರದರ್ಶಿಸಿದ ‘ಸರ್ವರಿಗೂ ಸಂವಿಧಾನ’ ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು. ಅನೇಕ ಹೊಸ ಹೊಸ ರಂಗ ಪ್ರಯೋಗಗಳನ್ನು ಮಾಡುವುದರ ಜೊತೆಗೆ ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸಿದ್ದು ಧಾರವಾಡ ರಂಗಾಯಣದ ಹೆಗ್ಗಳಿಕೆ ಎಂದರು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಕೋಳಿ ಮಾತನಾಡಿ ಗಾಂಧೀಜಿ-150 ಕಸ್ತೂರಬಾ ಮಹಿಳಾ ನಾಟಕೋತ್ಸವ, ರಂಗನವಮಿ ನಾಟಕೋತ್ಸವ, ರಂಗ ಸಂಭ್ರಮ, ಕನ್ನಡಕ್ಕಾಗಿ ನಾವು ರಾಜ್ಯೋತ್ಸವ ಅಭಿಯಾನ ಮುಂತಾದ ವಿಶಿಷ್ಟ ಕಾರ್ಯಕ್ರಮಗಳಿಂದ ನಾಡಿನ ಕಲೆ, ಸಂಸ್ಕೃತಿಯನ್ನು ರಕ್ಷಿಸುತ್ತಿರುವ ರಂಗಾಯಣದ ಕಾರ್ಯ ಶ್ಲಾಘನೀಯ ಎಂದರು.