ಹಿಜಾಬ್ ಮತ್ತು ಕೇಸರಿ: ಭವ್ಯ ಭಾರತದ ಪ್ರಜೆಗಳಿಗೆ ಒಂದು ಮಾತು

Must Read

ಭಾರತ ಎಂದೆಂದಿಗೂ ಮುಗಿಯದ ಸಂಸ್ಕಾರ, ಸಂಸ್ಕ್ರತಿಯ ದೇಶ. ಇಲ್ಲಿ ಉಸಿರಾಡುವ ಪ್ರತಿ ಗಾಳಿಯಲ್ಲೂ ಕ್ಷಾತ್ರತೇಜವಿದೆ.ದೇಶಭಕ್ತಿ ತುಂಬಿತುಳುಕುವ ನಾಡು ನಮ್ಮದು.ಭಾರತವೆಂದರೆ ಧಾನ್ಯ ಭೂಮಿ,ಧನ್ಯ ಭೂಮಿ, ವೀರ ಭೂಮಿ. ಹೇಳುತ್ತ ಹೋದರೆ ಪುಟಗಳೇ ಸಾಲದ ಲೇಖನಿಗಳೇ ಮುಗಿದು ಹೋಗುವ ಜೀವ ಮುಗಿದು ಹೋಗುವ ಅನಂತ ಕಾದಂಬರಿ ಭಾರತ.

ಯಾವ ಧರ್ಮವೂ ತನ್ನತನವನ್ನು ಬಿಟ್ಟು ಹೊರಗೆ ಹೋಗಿಲ್ಲ. ಯಾವ ಧರ್ಮವೂ ಕೂಡ ತನ್ನನ್ನು ತಾನು ಶ್ರೇಷ್ಠ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಎಲ್ಲ ಧರ್ಮಗಳ ಸಾರ ಒಂದೇ. ಸಮಾನತೆ, ಸ್ವಾತಂತ್ರ್ಯ, ದೀನ ದುರ್ಬಲ ವರ್ಗದವರ ರಕ್ಷಣೆ, ಸ್ತ್ರೀಯರ ರಕ್ಷಣೆ ಮುಂತಾದವು. ಇಲ್ಲಿ ಸಂಸ್ಕ್ರತಿಯ ದಾಳಿಯ ನಂತರ ದಾಳಿಯ ನೇತಾರ ಉಳಿದು ಮೆರೆದುದು ದಾಖಲಾಗಿಲ್ಲ. ಯಾವುದೋ ಒಂದು ಪ್ರಕ್ಷುಬ್ಧ ಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವ ಯುವ ಜನತೆಗೆ ಏಕೆ ಅರ್ಥವಾಗುತ್ತಿಲ್ಲ. ಬಾಳ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬೇಕಿರುವ ಇವರು ಯಾರೋ ಒಬ್ಬ ಹಾಕುವ ಕ್ಷಣಿಕ ಭಿಕ್ಷೆಗೆ ಕೈ ಚಾಚಿ ತಮ್ಮನ್ನು ತಾವು ಹಾಳುಮಾಡಿಕೊಳ್ಳುತ್ತಿರುವರು.

ಕೇಳಿ ಯುವ ಜನರೆ, ನಾಳೆ ನಮ್ಮ ಭವಿಷ್ಯ ಹಾಳಾಗುವಾಗ ಯಾವ ಹಿಜಾಬ್ ಇಲ್ಲವೇ ಕೇಸರಿ ಯಾವುದೂ ಬರುವುದಿಲ್ಲ. ನಾವು ಗಳಿಸಿದ ವಿದ್ಯೆ ಮಾತ್ರ ಜೊತೆಗೆ ಬರುತ್ತದೆ ನೆನಪಿರಲಿ.

ಒಂದು ದಿನ ಯೋಚಿಸಿ ನೋಡಿ ನಾವು ಮಾಡುತ್ತಿರುವುದು ಯಾವುದು?ಏಕೆ? ಇದು ಬೇಕಾ?ಎಂದು. ನಾವು ಮಾಡಬಹುದಾದದ್ದು ತುಂಬಾ ಇದೆ. ಯಾವ ರೈತನು ಕೂಡ ತಾನು ಬೆಳೆಯುವ ಭತ್ತದ ಮೇಲೆ ಹಿಜಾಬ್ ಇಲ್ಲವೇ ಕೇಸರಿ ಎಂದು ಬರೆದು ಬೆಳೆದಿಲ್ಲ. ಯಾವ ಹಸು ತಾನು ಕೊಡುವ ಹಾಲಿನ ಮೇಲೆ ಹಿಜಾಬ್ ಇಲ್ಲವೇ ಕೇಸರಿ ಎಂದು ಬರೆದಿಲ್ಲ. ಯಾವ ಗಾಳಿ, ನೀರು, ಸೂರ್ಯ ಇವು ಯಾವುವೂ ಬೇಧ ಭಾವ ಮಾಡಿಲ್ಲ. ನಾವೇಕೆ ಮಾಡುತ್ತಿದ್ದೇವೆ? ಜೀವಶಾಸ್ತ್ರಜ್ಞರ ಪ್ರಕಾರ ಜೀವ ಸಂಕುಲದಲ್ಲಿ ಅತಿ ಶ್ರೇಷ್ಠ ಮಟ್ಟದ ಬುದ್ದಿವಂತ ಪ್ರಾಣಿ ಮನುಷ್ಯ ಅಂತೆ ಇತ್ತೀಚಿನ ವರ್ಷಗಳಲ್ಲಿ ನಡೆಯುವ ಈ ಘಟನೆಗಳಿಂದ ಯಾರು ಬುದ್ದಿವಂತ ಎನ್ನುವುದು ಪ್ರಶ್ನೆಯಾಗಿದೆ. ನಡೆಯುವ ನೆಲವೊಂದೆ ಸುಡುವ ಅಗ್ನಿವೊಂದೆ ಉಸಿರು ನೀಡುವ ಗಾಳಿಯೊಂದೆ ನಾವೇಕೆ ಬದಲಾಗಬಾರದು?

ಪ್ರತಿನಿತ್ಯ ಸೇವೆ ಸಲ್ಲಿಸುವ ವೈದ್ಯರು ತಾವು ಚಿಕಿತ್ಸೆ ನೀಡುವ ರೋಗಿಯ ಜಾತಿಯನ್ನು ಕಾಣಲಿಲ್ಲ. ಅವರ ರೋಗವನ್ನು ಕಂಡಿದ್ದಾರೆ. ಒಬ್ಬ ಚಾಲಕ ತಾನು ಓಡಿಸುತ್ತಿರುವ ವಾಹನದ ಮುಂದೆ ರಸ್ತೆ ನೋಡಿಕೊಂಡು ವಾಹನ ಚಲಾಯಿಸುತ್ತಾನೆ ಹೊರತು ಹಿಂದೆ ಕುಳಿತ ಪ್ರವಾಸಿಗರು ತನ್ನ ಜಾತಿಯರು ಬೇರೆ ಜಾತಿಯವರು ಎಂದು ನೋಡಲಿಲ್ಲ. ಅವನಿಗೆ ಗೊತ್ತಿರುವುದು ಒಂದೇ ತನ್ನ ಪ್ರಯಾಣಿಕರಿಗೆ ಸೇವೆ ಒದಗಿಸುವುದು.ಶಾಲೆಯಲ್ಲಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಯಾವ ಜಾತಿಯರು ಎಂದು ನೋಡದೇ ಕೇವಲ ವಿದ್ಯಾರ್ಥಿಗಳ ಭವಿಷ್ಯವನ್ನು ಬದಲಾಯಿಸುವ ಶಕ್ತಿ ಉತ್ಪಾದನೆ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಬೇಕಾಗಿರುವುದು ಹಿಜಾಬ್ ಇಲ್ಲವೇ ಕೇಸರಿ ಅಲ್ಲ ಶಿಕ್ಷಣ ಮಾತ್ರ. ವಿದ್ಯೆಯನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಹಿಜಾಬ್ ಇಲ್ಲವೇ ಕೇಸರಿ ಕೇವಲ ಬಣ್ಣಗಳು. ಅವುಗಳಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಶಿಕ್ಷಣದಿಂದ ಮಾತ್ರ ಸಾಧ್ಯ.

ಪಾಲಕರು ಎಚ್ಚೆತ್ತುಕೊಳ್ಳಬೇಕಿದೆ. ನಮಗೆ ಹಿಜಾಬ್ ಇಲ್ಲವೇ ಕೇಸರಿ ಮುಖ್ಯವಲ್ಲ. ನಮ್ಮ ಮಕ್ಕಳಿಗೆ ಬೇಕಿರುವುದು ಯೋಗ್ಯವಾದ ಶಿಕ್ಷಣ. ಶಿಕ್ಷಣ ಒಂದಿದ್ದರೆ ನಾವೆಲ್ಲ ಏನೆಲ್ಲಾ ಸಾಧಿಸಬಹುದು. ನಮ್ಮ ಮಕ್ಕಳ ಸಾಮರ್ಥ್ಯ ಏನು ಎಂಬುದು ನಮಗೆ ಗೊತ್ತಿರುತ್ತದೆ, ಅದನ್ನು ಬೆಳೆಸಬೇಕೆ ಹೊರತು ಪ್ರಕ್ಷುಬ್ಧ ಸ್ಥಿತಿಯಲ್ಲ.ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಿದೆ.ಒಂದು ಕ್ಷಣ ಯೋಚಿಸಿ ಹಣವೆಂಬ ಮಾಯಾಂಗನೆಯ ಹಿಂದೆ ಹೋಗಿದ್ದುದರ ಫಲವಿದು. ಹಣ ಎಲ್ಲವನ್ನೂ ಒಳಗೊಂಡಿರುತ್ತದೆ. ಆದರೆ ಮಾನವೀಯ ಮೌಲ್ಯಗಳನ್ನು ಬಿಟ್ಟು.ಈ ಮೌಲ್ಯಗಳನ್ನು ಯಾವುದೋ ದಿನಸಿ ಅಂಗಡಿಯಲ್ಲಿ ಖರೀದಿಸಲು ಸಾಧ್ಯವಿಲ್ಲ. ಈ ಮೌಲ್ಯಗಳನ್ನು ನಾವು ಅನುಭವಿಸಿ, ಮಕ್ಕಳಿಗೆ ಅನುಭವಿಸಲು ಕೊಡಬೇಕಿತ್ತು. ಒಂದು ಕಲ್ಲು ಹಲವಾರು ಉಳಿ ಪೆಟ್ಟುಗಳನ್ನು ತಿಂದಾಗಲೆ ಅದು ಅಗ್ರ ಪೂಜೆಗೆ ಅರ್ಹತೆಯನ್ನು ಪಡೆಯುವುದು. ಹಾಗೆ ನಮ್ಮ ಮಕ್ಕಳಿಗೆ ಮಾನವೀಯ ಮೌಲ್ಯಗಳ ಪೆಟ್ಟುಗಳನ್ನು ಕೊಟ್ಟಿದ್ದರೆ, ಅವರು ಮೂರ್ತಿಗಳಾಗುತ್ತಿದ್ದರು.

ಕೊನೆಯ ಭಾಗದ ಹೊತ್ತಿಗೆ ನಾಲ್ಕು ಜನರ ಮೇಲೆ ಅಂತಿಮ ಯಾತ್ರೆ ಕೈಗೊಂಡಾಗ ಶವಾಗಾರದ ಹಾದಿಯಲ್ಲಿ ಮೌಲ್ಯಗಳು ಒಟ್ಟುಗೂಡಿ ಗಹಗಹಿಸಿ ನಗುತ್ತಿದ್ದರೆ, ಸಂಬಂಧದ ಕೊಂಡಿಗಳು ಒಂದೊಂದಾಗಿ ಕಳಚಿಕೊಳ್ಳುತ್ತ ಸಮಾಧಿಯಲ್ಲಿ ಮಣ್ಣಾಗುತ್ತವೆ. ಮಾನವ ಮಾನವೀಯ ಮೌಲ್ಯಗಳನ್ನು ತಿಳಿಯದೆ, ತಿಳಿಸದೆ ಲೀನನಾಗುತ್ತಾನೆ.ಭವ ಸಾಗರ ಈಜಿದಷ್ಟು ಬಲು ದೂರ. ದೂರ ತೀರ ಯಾನ. ನಮ್ಮ ಸಮಾಧಿಯಲ್ಲಿನ ಕಲ್ಲು ಕರಗಿ ಹೋಗಿ ಮತ್ತೆ ಉದಿಸಬಹುದೇ? ನನ್ನೊಳಗಿನ ಅಂತಃಸತ್ವ.ಬದುಕು ನಾವು ಅಂದುಕೊಂಡಷ್ಟು ಸುಲಭವಲ್ಲ. ಕಾರಣ ಬದುಕು ಯಾವತ್ತಿಗೂ ಅದೊಂದು ಅಗಮ್ಯ, ಅಗೋಚರ ಬರಹ ಅಲ್ಲವೇ?


ಶ್ರೀ ಇಂಗಳಗಿ ದಾವಲಮಲೀಕ
ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group