Homeಲೇಖನಅಂತಾರಾಷ್ಟ್ರೀಯ ಮಹಿಳಾ ದಿನ ವಿಶೇಷ

ಅಂತಾರಾಷ್ಟ್ರೀಯ ಮಹಿಳಾ ದಿನ ವಿಶೇಷ

ಸಾಧನೆಯ ಹಾದಿಯಲ್ಲಿ ಡಾ.ಎನ್ ಲಕ್ಷ್ಮಿ

೨೦೧೪-೧೫ ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಈಡಿ ಬಾಹ್ಯ ವಿದ್ಯಾರ್ಥಿಯಾಗಿ ಸಂಪರ್ಕ ತರಗತಿಗಾಗಿ ನಾನು ಮತ್ತು ಹಿರಿಯ ಸನ್ಮಿತ್ರ ಚಿದಾನಂದ ಬಾರ್ಕಿ. ಎನ್.ಜಿ.ತೊಪ್ಪಲದ ವಿದ್ಯಾರ್ಥಿಗಳ ವಸತಿ ಗೃಹದಲ್ಲಿ ಇದ್ದೆವು. ನಮ್ಮ ಕೊಠಡಿಯಲ್ಲಿ ಎಂ.ಈಡಿ ಓದುತ್ತಿದ್ದ ಹಿರಿಯ ಸನ್ಮಿತ್ರರೊಬ್ಬರಿಗೆ ದಿಡೀರ್ ಅನಾರೋಗ್ಯ ಕಾಣಿಸಿತು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ಮುಖ್ಯಸ್ಥೆ ಡಾ.ಲಕ್ಷ್ಮೀ ಮೇಡಂ ಗೆ ಭೇಟಿಯಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರಲು ಅನುಮತಿ ಕೇಳಿದೆವು.

ನಮ್ಮನ್ನು ಕಂಡು ನಮ್ಮ ಎಲ್ಲರ ಪರಿಚಯವನ್ನು ಕೇಳಿ ತಾವೇ ಒಂದು ಆಸ್ಪತ್ರೆಗೆ ಪೋನ್ ಕರೆ ಮಾಡಿ ಅಲ್ಲಿಗೆ ಹೋಗಲು ನಮಗೆ ಮಾರ್ಗದರ್ಶನ ನೀಡಿದರು. ಆ ಆಸ್ಪತ್ರೆಯ ವೈದ್ಯರು ವಯೋವೃದ್ಧರು. ಕೇವಲ ಮಾತುಗಳಲ್ಲಿಯೇ ನಮ್ಮ ಹಿರಿಯ ಸಹಪಾಠಿಗೆ ಆಗಿರುವ ತೊಂದರೆಗೆ ಸಲಹೆ ನೀಡಿ ಔಷಧೋಪಚಾರ ನೀಡಿದರು. ಅದು ಒಂದು ಆಯುರ್ವೇದ ಆಸ್ಪತ್ರೆಯಾಗಿತ್ತು.

ಮರುದಿನ ಎಂದಿನಂತೆ ತರಗತಿಗೆ ಹೋಗಲನುವಾಗಿದ್ದೆವು. ಮೇಡಂ ನಮ್ಮನ್ನು ಕರೆ ಕಳಿಸಿದ್ದರು. ಅವರ ಕೊಠಡಿಗೆ ಹೋದಾಗ ಹಿಂದಿನ ದಿನ ಅನಾರೋಗ್ಯಕ್ಕೀಡಾಗಿದ್ದ ಸ್ನೇಹಿತನ ಆರೋಗ್ಯ ಕುರಿತು ವಿಚಾರಿಸಿದರು.ನಿಜಕ್ಕೂ ಇದು ಅಭಿಮಾನದ ಸಂಗತಿ. ದೊಡ್ಡ ಹುದ್ದೆಯಲ್ಲಿದ್ದರೂ ನಮ್ಮಂತಹ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಅವರು ಕಾಳಜಿ ತೋರಿಸಿದ ರೀತಿ ಮರೆಯಲಾಗದ್ದು. ಕಾಲಕ್ರಮೇಣ ತರಬೇತಿಯ ಕೊನೆಯ ದಿನ ಬರುವಷ್ಟರಲ್ಲಿ ನಮ್ಮನ್ನು “ಏ ಹುಡುಗ್ರಾ.ಬನ್ರೋ ಇಲ್ಲಿ.? ಎಂದು ತಮ್ಮ ಮನೆಯ ಮಕ್ಕಳಂತೆ ಕರೆದು ಅಸೈನ್‌ಮೆಂಟ್ ಬರೀತಿದ್ದೀರಿಲ್ಲೋ.? ಎಂದು ವಿಚಾರಿಸುತ್ತಿದ್ದರು. ಹೀಗೆ ಓರ್ವ ಉನ್ನತ ಹುದ್ದೆಯಲ್ಲಿರುವ ಮಾತೆ ನಮಗೆ ನಮ್ಮ ಕುಟುಂಬದ ಓರ್ವ ಸಹೋದರಿಯಂತಾಗಿ ಬಿಟ್ಟಿದ್ದು ಈಗ ಅವರ ಕುರಿತು ನಾಲ್ಕು ಮಾತು ಬರೆಯಬೇಕೆನಿಸುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ಜನಿಸಿ, ಬಡತನ ಮೂಢನಂಬಿಕೆ ಎಂಬ ಬಲೆಯಲ್ಲಿ ಸಿಲುಕಿ ಬದುಕನ್ನು ಚಾಲೆಂಜ್ ಆಗಿ ತೆಗೆದುಕೊಂಡು ಉನ್ನತ ಶಿಕ್ಷಣವನ್ನು ಪಡೆದು ಗ್ರಾಮೀಣ ಪರಿಸರದಿಂದ ಮಹಾ ನಗರದ ವಿಶ್ವವಿದ್ಯಾಲಯದವರೆಗೂ ಸಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಕುಲಪತಿ ಹುದ್ದೆಗೆ ಅರ್ಹತೆ ಪಡೆದಿರುವ ಮಹಿಳಾ ಸಾಧಕಿಯಲ್ಲಿ ಡಾ.ಲಕ್ಷ್ಮೀ ಮೇಡಂ ಒಬ್ಬರು ಎಂದರೆ ಅತಿಶಯೋಕ್ತಿಯಲ್ಲ. ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಶಿಕ್ಷಣಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿದ್ದುಕೊಂಡು ಬದುಕಿನ ಉನ್ನತ ಹುದ್ದೆಗಳಿಗೆ ಅವರು ಸಾಗಿ ಬಂದ ರೀತಿ ಅನನ್ಯ. ಪ್ರಸ್ತುತ ಶೈಕ್ಷಣಿಕ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಇವರ ಬದುಕಿನ ಹಿನ್ನೋಟ

ಬಾಲ್ಯ ಹಾಗೂ ಶಿಕ್ಷಣ:

ಇವರು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ಪುರದಹಳ್ಳಿ ಗ್ರಾಮದಲ್ಲಿ ರೈತಾಪಿ ಕುಟುಂಬದ ನರಸಿಂಹಯ್ಯ ಮತ್ತು ರಂಗಮ್ಮ ದಂಪತಿಗಳ ಎಂಟನೇ ಮಗಳಾಗಿ ಜನಿಸಿದರು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡು ತಂದೆ ಮತ್ತು ಸಹೋದರರ ಪ್ರೀತಿಯಲ್ಲಿ ಬೆಳೆದರು. ವಿದ್ಯುತ್ ಸಂಪರ್ಕವಿಲ್ಲದ ಗ್ರಾಮದಲ್ಲಿ ಜನಿಸಿದ ಇವರು ಕಂದೀಲು ದೀಪದ ಬೆಳಕಿನಲ್ಲಿ ಓದಿ ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನೂ ಸಮೀಪದ ಕೋಳಾಲದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನೂ, ತುಮಕೂರಿನ ಶ್ರೀ ಸಿದ್ದಗಂಗಾ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿದರು.ಬೆಂಗಳೂರಿನ ಮಹಾರಾಣಿ ಕಲಾ ವಾಣಿಜ್ಯ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಬೆಂಗಳೂರಿನ ಅಂಬೇಡ್ಕರ್ ಬಿಇಡಿ ಕಾಲೇಜಿನಲ್ಲಿ ಬಿಎಡ್ ಪದವಿಯನ್ನು, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂಇಡಿ., ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದರು.

ಇವರು ಸ್ವಾವಲಂಬಿ ಜೀವನಕ್ಕಾಗಿ ಉನ್ನತ ಪದವಿ ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನ ಕೆಲವು ಪ್ರೌಢಶಾಲೆಗಳಲ್ಲಿ ಅರೆಕಾಲಿಕ ಶಿಕ್ಷಕ ವೃತ್ತಿ ಕೈಗೊಂಡು ಉನ್ನತ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಮುಂದೆ ಬಿಎ., ಬಿಇಡಿ., ಎಂಎ.,ಎಂ.ಇಡಿ.,ಎಂಫಿಲ್., ಪಿಎಚ್.ಡಿ ಪದವಿಗಳನ್ನು ಮುಗಿಸಿ, ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ವಿಭಾಗದಲ್ಲಿ ಕಾಯಂ ಉಪನ್ಯಾಸಕರಾಗಿ ನೇಮಕವಾದರು. ನಂತರ ಈ ವಿಭಾಗ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಎಂದು ಬೇರ್ಪಟ್ಟಾಗ, ಶಿಕ್ಷಣಶಾಸ್ತ ವಿಭಾಗದಲ್ಲಿ ಅಧ್ಯಾಪಕಿಯಾಗಿ, ನಂತರ ವಿಭಾಗದ ಮುಖ್ಯಸ್ಥರಾಗಿ ಪ್ರಾಧ್ಯಾಪಕರಾಗಿಸೇವೆ ಸಲ್ಲಿಸುತ್ತಿದ್ದಾರೆ. ಬಿಓಎಸ್, ಬಿಓಇ ಮಂಡಳಿಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಜೀವನವನ್ನು ಮೀಸಲಾಗಿಟ್ಟು ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ.ಶಿಕ್ಷಣ ಕ್ಷೇತ್ರದ ವಿದ್ಯಾರ್ಥಿಗಳಿಗಾಗಿ ಹಾಗೂ ಬೋಧಕರಿಗಾಗಿ ಹಲವು ಮಾರ್ಗದರ್ಶಿ ಮತ್ತು ಅಧ್ಯಯನ ಕೃತಿಗಳನ್ನು ರಚಿಸಿ ಶಿಕ್ಷಣ ಕ್ಷೇತ್ರದ ವಿದ್ವಾಂಸರ ಮೆಚ್ಚುಗೆ ಗಳಿಸಿದ್ದಾರೆ.

ಶೈಕ್ಷಣಿಕ ಕೃತಿಗಳು:

ಇವರ ಕೃತಿಗಳು ಹೀಗಿವೆ:

  1. ಶಿಕ್ಷಣ ಕಿರಣ (ಕನ್ನಡ ಇಂಗ್ಲಿಷ್ ಆವೃತ್ತಿ)
  2. ಪರಿಸರ ಶಿಕ್ಷಣ
  3. ಶೈಕ್ಷಣಿಕ ನಿರ್ವಹಣೆ ಮತ್ತು ನಾಯಕತ್ವ
  4. ಮಹಿಳಾ ಶಿಕ್ಷಣ
  5. ಸಮಾಜ ಶಾಸ್ತ್ರದ ದೃಷ್ಟಿಯಲ್ಲಿ ಶಿಕ್ಷಣ
  6. ಶೈಕ್ಷಣಿಕ ಸಂಶೋಧನೆ
  7. ತತ್ತ್ವಶಾಸ್ತ್ರದದೃಷ್ಟಿಯಲ್ಲಿ ಶಿಕ್ಷಣ
  8. ತಾತ್ವಿಕ ಮತ್ತು ಶೈಕ್ಷಣಿಕ ಬುನಾದಿಗಳು
  9. ಭಾರತದಲ್ಲಿ ಉನ್ನತ ಶಿಕ್ಷಣ
  10. ಸಮನ್ವಯ ಶಿಕ್ಷಣ
  11. ಮಹಿಳಾ ಸಮಸ್ಯೆಗಳು ಪಠ್ಯಗಳ ಕುರಿತು ಓದುವುದು, ಬರೆಯುವುದು ಮತ್ತು ಪ್ರತಿಬಿಂಬಿಸುವುದು ಮುಂತಾದ ಶೈಕ್ಷಣಿಕ ಕೃತಿಗಳನ್ನು ರಚಿಸುವುದರ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಜೊತೆಗೆ ಕೆಲವೊಂದು ಸಂಸ್ಥೆಗಳಾದ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹೊರಬಂದ ‘ಮಹಿಳಾ ಸಾಹಿತ್ಯ ಸಂಕೀರ್ಣ’ ಈ ಪುಸ್ತಕ ಸಂಪುಟ ಸಂಪಾದಕರಾಗಿ ಕಾರ‍್ಯ ನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಹಿತಚಿಂತಕಿ:

ಇವರು ತಮ್ಮ ಬಳಿಗೆ ಬರುವ ಅನೇಕ ವಿದ್ಯಾರ್ಥಿಗಳ ಕಷ್ಟಗಳಿಗೆ ನೆರವಾಗಿದ್ದಾರೆ. ಬಡವರ ದೀನ ದಲಿತರ, ಶೋಷಿತರ, ಅಸ್ಪೃಶ್ಯರ, ಸಮಾಜದ ಕೆಳವರ್ಗದವರ, ತಳಸಮುದಾಯದ ಅಸಹಾಯಕ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯವನ್ನು ಮಾಡಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡಿ, ಅವರುಗಳು ಉನ್ನತ ಪದವಿಗಳನ್ನು ಪಡೆಯಲು ಸಹಕರಿಸಿದ್ದಾರೆ. ಇವರ ಮಾರ್ಗದರ್ಶನದಲಿ ಗ್ರಾಮೀಣ ಪ್ರದೇಶದ ೩೦ ಜನರು ಎಂ.ಫಿಲ್ ಪದವಿಯನ್ನು, ೧೫ ಜನ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡಿದ ಸರ್ಕಾರದ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಉನ್ನತ ಸ್ಥಾನಮಾನ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ. ಇವರು ತಮ್ಮ ವಿದ್ಯಾರ್ಥಿಜೀವನದಲ್ಲಿ ತಾವು ಅನುಭವಿಸಿದ ಕಷ್ಟ ಹಾಗೂ ಸಮಸ್ಯೆಗಳನ್ನು ನೆನಪಿಸಿಕೊಳ್ಳುತ್ತಾ ವಿದ್ಯಾಭ್ಯಾಸಕ್ಕಾಗಿ ಗ್ರಾಮೀಣ ಪ್ರದೇಶಗಳಿಂದ ಬಂದ ಹೆಣ್ಣುಮಕ್ಕಳಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿ,ಅವರನ್ನು ಪೋಷಿಸಿ, ಬೆಳೆಸಿ, ರಕ್ಷಿಸಿ ಅವರು ಉನ್ನತ ವಿದ್ಯಾಭ್ಯಾಸ ಪಡೆದು ಸಮಾಜದ ಮುಖ್ಯವಾಹಿನಿಗೆ ತರುವಂತಹ ಹೃದಯವಂತಿಕೆಯನ್ನು ಮೆರೆದಿದ್ದಾರೆ. ತಳ ಸಮುದಾಯದ ಹೆಣ್ಣುಮಕ್ಕಳು ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗದೇ ಇದ್ದಾಗ,ಅಂತಹ ಹೆಣ್ಣು ಮಕ್ಕಳಿಗೆ ಕಷ್ಟಕಾಲದಲ್ಲಿಯೂ ಕೂಡ ವಿದ್ಯಾಭ್ಯಾಸವನ್ನು ಮಾಡಲು ಸಹಕರಿಸಿತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂಬ ಮನೋಭಾವವು ಉಳಿದ ಹೆಣ್ಣುಮಕ್ಕಳಿಗೆ ಮಾದರಿಯಾಗಿ ಹಾಗೂ ಆದರ್ಶ ಮಹಿಳೆಯಾಗಿ ಸ್ಫೂರ್ತಿದಾಯಕ ಕೆಲಸಗಳನ್ನು ಮಾಡುತ್ತಿದ್ದಾರೆ.“ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ಧ್ಯೇಯ ವಾಕ್ಯದಂತೆ ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ಎಂಬಂತೆ ಮನೆಯಜವಾಬ್ದಾರಿ ಮತ್ತು ವಿಭಾಗದ ಜವಾಬ್ದಾರಿ, ಕಛೇರಿ ಜವಾಬ್ದಾರಿ ಹಾಗೂ ವಿಶ್ವವಿದ್ಯಾಲಯ ಜವಾಬ್ದಾರಿ ಹೀಗೆ ನಾಲ್ಕಾರು ಜವಾಬ್ದಾರಿಗಳನ್ನು ಸರಿದೂಗಿಸಿಕೊಂಡು ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿರುವರು.

ಪ್ರಶಸ್ತಿ ಪುರಸ್ಕಾರಗಳು.ಹಾಗೂ ಶೈಕ್ಷಣಿಕ ಚಟುವಟಿಕೆಗಳು:

ಇವರ ಶೈಕ್ಷಣಿಕ ಸಾಧನೆಗಾಗಿ ಅನೇಕ ಪ್ರಶಸ್ತಿಗಳು ಸಂದಿವೆ:

  1. ಕುವೆಂಪು ವಿಶ್ವಮಾನವ ಪ್ರಶಸ್ತಿ – ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸೇವೆಗಾಗಿ
  2. ಕನ್ನಡ ರಾಜ್ಯೋತ್ಸವ ಪ್ರಶಸ್ತಿ
  3. ಶ್ರೀ ಶಂಕರ ಪ್ರಶಸ್ತಿ
  4. ಆದರ್ಶ ಮಹಿಳಾ ಪ್ರಶಸ್ತಿ
  5. ನಾಲ್ವಡಿ ಸೇವಾ ರತ್ನ ಪ್ರಶಸ್ತಿ
  6. ನೇಪಾಳದ ಕಟ್ಮಂಡುವಿನ ಅಂತರರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಪ್ರಶಸ್ತಿ
  7. ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಪ್ರಶಸ್ತಿ ಮುಂತಾದ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಯಾವುದೇ ಜಾತಿ ಧರ್ಮ ಭಾಷೆಯನ್ನು ನೋಡದೆ ಎಲ್ಲರನ್ನೂ ಸಮಾನವಾಗಿ ಕಾಣುವುದು ಮತ್ತು ಗೌರವಿಸುವುದು.ಇವರ ಗುಣವಾಗಿದೆ. ಸರಳ ಸಜ್ಜನಿಕೆಯ ವ್ಯಕ್ತಿಯೆಂದು ವಿದ್ಯಾರ್ಥಿಗಳಿಂದ ಮನ್ನಣೆ ಗಳಿಸಿದ್ದಾರೆ.

ಇವರ ಸಾಧನೆಯಲ್ಲಿ ಪ್ರಮುಖವಾದವುಗಳೆಂದರೆ ‘ಶಿಕ್ಷಣ ಶಾಸ್ತ್ರದ ವಿಷಯ ವಿಶ್ವಕೋಶ’ದ ಪ್ರಧಾನ ಸಂಪಾದಕಿಯಾದ ಪ್ರೊ.ಎನ್. ಲಕ್ಷ್ಮಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ಮೇಲೆ ಕರ್ನಾಟಕ ಘನ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗಾಗಿ ರಾಜ್ಯದಎಲ್ಲಾ ವಿಶ್ವವಿದ್ಯಾನಿಲಯಗಳಿಗೂ ಉದಾರವಾಗಿ ಧನಸಹಾಯ ನೀಡಿದರು. ಈ ಅನುದಾನದಿಂದ ಕನ್ನಡ ಭಾಷೆಯ ಬೆಳವಣಿಗೆಗೆ ವಿವಿಧ ರೀತಿಯ ಪ್ರ‍್ರಯೋಜನೆಗಳನ್ನು ವಿಶ್ವವಿದ್ಯಾನಿಲಯ ಕೈಗೊಳ್ಳಬೇಕೆಂಬುದು ಘನ ಸರ್ಕಾರದ ಆಶಯವಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯಕ್ಕೂ ಅನುದಾನವನ್ನು ಘೋಷಿಸಿತು. ಕನ್ನಡ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಮತು ಜ್ಞಾನಾಕಾಂಕ್ಷಿ ಓದುಗರಿಗೆ ಉಪಯೋಗವಾಗುವ ರೀತಿಯಲ್ಲಿ ‘ಶಿಕ್ಷಣಶಾಸ್ತ್ರ ವಿಷಯ ವಿಶ್ವಕೋಶ’ವನ್ನು ಸಮಗ್ರ ಮಾಹಿತಿಗಳನ್ನೊಳಗೊಂಡಂತೆ ಬೃಹತ್ತಾದ ೦೩ ಸಂಪುಟಗಳಲ್ಲಿ ಪ್ರಕಟಿಸಲಾಯಿತು. ಒಂದು ಸಂಪುಟ ೧೦೦೦ ಪುಟಗಳನ್ನು ಹೊಂದಿದ್ದು, ಒಟ್ಟು ೦೩ ಸಂಪುಟಗಳು ೩೦೦೦ ಪುಟಗಳನ್ನು ಒಳಗೊಂಡಿರುತ್ತದೆ.ಇದು ಸಮಾಜದ ಎಲ್ಲಾ ಓದುಗರಿಗೂ, ವಿದ್ಯಾರ್ಥಿಗಳಿಗೂ ದೊಡ್ಡ ಕೊಡುಗೆಯಾಗಿ ಹೊರಹೊಮ್ಮಿದೆ.

ಇದುವರೆಗೆ ಕನ್ನಡದಲ್ಲಿ ಶಿಕ್ಷಣಶಾಸ್ತ್ರದ ಬಗ್ಗೆ ವಿಷಯ ವಿಶ್ವಕೋಶ ಮಾದರಿಯ ಗ್ರಂಥಗಳು ಪ್ರಕಟವಾಗಿರುವುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣಶಾಸ್ತ್ರದ ವಿಷಯ ವಿಶ್ವಕೋಶವನ್ನು ಸಿದ್ಧಪಡಿಸುವುದು ಸೂಕ್ತವೆಂದು ತಿಳಿದು, ಸಮಾಜಕ್ಕೆ ನೀಡಿದ ಒಂದು ಉತ್ತಮ ಕೊಡುಗೆಯಾಗಿ ಹೊರಹೊಮ್ಮಿದೆ.

ಇವರ ಸಂಪಾದಕತ್ವದಲ್ಲಿ ಶಿಕ್ಷಣಶಾಸ್ತ್ರ ವಿಶ್ವಕೋಶ ಕೃತಿಯು ಕನ್ನಡ ಭಾಷೆಯಲ್ಲಿ ಮೊಟ್ಟ ಮೊದಲಿಗೆ ಪ್ರಕಟಣೆಗೊಂಡಿರುತ್ತದೆ. ಇಂತಹ ಯೋಜನೆಗಳಲ್ಲಿ ಇವರ ಅರ್ಹತೆ, ಜ್ಞಾನ, ಕಾರ್ಯಕ್ಷಮತೆ ಕೊರತೆ ಎದ್ದು ಕಾಣುತ್ತಿದೆ. ಅಲ್ಲದೇ ಸರ್ವ ಶಿಕ್ಷಾ ಅಭಿಯಾನ ಯೋಜನೆಯ ಅನುದಾನದ ಅಡಿಯಲ್ಲಿ ೪ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿ ಯಶಸ್ವಿಯಾಗಿ ಯೋಜನೆಯನ್ನು ಪೂರ್ಣಗೊಳಿಸಿ, ವಿಶ್ವವಿದ್ಯಾಲಯದ ಹಾಗೂ ಸರ್ಕಾರದ ಮೆಚ್ಚುಗೆ ಗಳಿಸಿದ್ದಾರೆ.

ಅವುಗಳೆಂದರೆ, “ಮೈಸೂರು ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಒಂದು ತುಲನಾತ್ಮಕ ಅಧ್ಯಯನ”, An Evaluate study of the implementation of the SSA Madrasas development programme (MDP) in Karnataka state., A Study of Utilization of equipment under learning Enchancement programme (LEP) with reference to Nali Kali and Library ಮುಂದುವರೆದು Distance education council New Delhi ( DEC) ಇದರ ಅನುದಾನದಡಿಯಲಿ “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಎಡ್ ವ್ಯಾಸಂಗ ಮಾಡುತ್ತಿರುವ ಪ್ರವೇಶಾತಿ ಶೈಕ್ಷಣಿಕ ವಿಷಯಗಳ ಅಧ್ಯಯನ”, “ಚಾಮರಾಜನಗರ ಜಿಲ್ಲೆಯ ಹೆಣ್ಣು ಮಕ್ಕಳು ದೂರ ಶಿಕ್ಷಣ ವ್ಯವಸ್ಥೆಯ ಬಗ್ಗೆ ಹೊಂದಿರುವ ಅರಿವು ಮತ್ತು ಅದರ ಪ್ರಯೋಜನವನ್ನು ಪಡೆದುಕೊಂಡಿರುವುದರ ಒಂದು ಮೌಲ್ಯಮಾಪನಾತ್ಮಕ ಅಧ್ಯಯನ”, “ಬಿ.ಎಡ್. ವಿಶೇಷ ಶಿಕ್ಷಣ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಸಿ.ಡಿ. ಮುಖಾಂತರ ಪಾಠ ಒದಗಿಸುವ ಯೋಜನೆ” ಹಾಗೂ ICSSR. New Delhi ಇದರ ಅಡಿಯಲ್ಲಿ A study of equality status of socially inclusive students in elementary school of karnataka state” ಮುಂತಾದ ಸಂಶೋಧನಾತ್ಮಕ ಯೋಜನೆಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಫಿಲಿಫೈನ್ಸ್ ಮತ್ತು ಮಲೇಶಿಯಾ ದೇಶಗಳಲ್ಲಿ ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನಗಳಲ್ಲಿ ಹಾಗೂ ರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿ ಗಮನ ಸೆಳೆದಿದ್ದಾರೆ.

ಕೌಟುಂಬಿಕ ಬದುಕು:

ಉನ್ನತ ಹುದ್ದೆಯಲ್ಲಿದ್ದರೂ ಸರಳ ಸುಂದರ ಬದುಕನ್ನು ಹೊಂದಿದ ಲಕ್ಷ್ಮೀ ಮೇಡಂ ಅವರ ಪತಿ ಚಂದ್ರಶೇಖರ ಇಂಜನೀಯರ ಹಾಗೂ ಜೀವ ವಿಮಾ ನಿಗಮದ ಪ್ರತಿನಿಧಿಯಾಗಿರುವರು.ಚಿಕ್ಕ ಚೊಕ್ಕ ದಾಂಪತ್ಯದಲ್ಲಿ ಒಬ್ಬನೇ ಮಗ ಆಕಾಶ.ಸಿ.ಮೂಡಲಗಿರಿ. ಇವನು ಕೂಡ ಇಂಜನೀಯರಿಂಗ್ ಪ್ರಥಮ ವರ್ಷ ಆರ್.ವ್ಹಿ.ಮಹಾವಿದ್ಯಾಲಯ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವನು.
ಸಹೃದಯದ ಸಾಕಾರಮೂರ್ತಿ ಸರಳ ಸಜ್ಜನಿಕೆ ವ್ಯಕ್ತಿಯಾಗಿರುವ ಇವರು ಓದಿನಿಂದ ಕಲಿತ ಪಾಠಗಳನ್ನು ಮರೆತರೂ ಮರೆಯಬಹುದು. ಆದರೆ ಜೀವನದ ಕಷ್ಟಕಾಲದ ಸನ್ನಿವೇಶದಲ್ಲಿ ಅನುಭವಿಸಿದ ಕಲಿತ ಪಾಠಗಳನ್ನು ಮರೆಯಲು ಸಾಧ್ಯವಿಲ್ಲ” ಎಂಬ ಗೌತಮ ಬುದ್ಧನ ಮಾತಿನಂತೆ ಇವರ ಕೊಡುಗೆ ನಮ್ಮ ಸಮಾಜಕ್ಕೆ ಹಾಗೂ ರಾಷ್ಟ್ರಕ್ಕೆ ಮತ್ತು ರಾಜ್ಯಕ್ಕೆ ಇನ್ನೂ ಹೆಚ್ಚಿನ ಮಟ್ಟದ ಸೇವೆ ಅವರಿಂದ ದೊರಕುವಂತಾಗಲಿ. ಇನ್ನೂ ಅನೇಕ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಮೇಡಂ ದಾರಿದೀಪವಾಗಲಿ.ದೇವರು ಅವರ ಕುಟುಂಬದವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ. ಲಕ್ಷ್ಮೀ ಮೇಡಂ ಇನ್ನೂ ಉನ್ನತ ಹುದ್ದೆಗಳನ್ನು ಹೊಂದುವಂತಾಗಲಿ ಎಂದು ಆಶಿಸುವೆನು.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು

RELATED ARTICLES

Most Popular

error: Content is protected !!
Join WhatsApp Group