ಮೂಡಲಗಿ: ಸ್ವತಂತ್ರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸ್ಮರಣೆಗಾಗಿ ಕರ್ನಾಟಕ ಸರ್ಕಾರ ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಗ್ರಾಮದಲ್ಲಿ ಸ್ಥಾಪಿಸುತ್ತಿರುವ ಸೈನಿಕ ವಿದ್ಯಾಲಯವನ್ನು ಕೇಂದ್ರ ಸರ್ಕಾರ ತನ್ನ ಸುರ್ಪದಿಗೆ ತೆಗೆದುಕೊಂಡು ಶಾಲೆ ಪ್ರಾರಂಭ ಮಾಡಬೇಕಾಗಿ ಸಂಸದ ಈರಣ್ಣ ಕಡಾಡಿ ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.
ಮಂಗಳವಾರ ಮಾ-15 ರಂದು ರಾಜ್ಯಸಭಾ ಸಂಸತ್ತಿನ ಬಜೆಟ್ ಅಧಿವೇಶನದ ಶೂನ್ಯ ವೇಳೆಯಲ್ಲಿ ಸಂಸದ ಈರಣ್ಣ ಕಡಾಡಿ ಮಾತನಾಡಿ ಕರ್ನಾಟಕದಲ್ಲಿ ಕೇವಲ ಎರಡು ಸೈನಿಕ ವಿದ್ಯಾಲಯಗಳಿದ್ದು, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಯಲ್ಲಿರುವ ಬೆಳಗಾವಿಯಲ್ಲಿ ಸೈನಿಕ ವಿದ್ಯಾಲಯವನ್ನು ಸ್ಥಾಪಿಸುವ ಮುಖಾಂತರ ಮೂರು ರಾಜ್ಯದ ಮಕ್ಕಳು ಭೂಸೇನೆ, ವಾಯುಸೇನೆ, ನೌಕಾ ಪಡೆ ಸೇನೆಯಲ್ಲಿ ಕೆಲಸ ಮಾಡಲು ಮಕ್ಕಳಿಗೆ ಅವಕಾಶ ಕೊಡಬೇಕೆಂದು ಒತ್ತಾಯಿಸಿದರು.
ಸಂಗೊಳ್ಳಿ ರಾಯಣ್ಣನು ಬ್ರಿಟಿಷರ್ ವಿರುದ್ದ ಕಿತ್ತೂರು ಚೆನ್ನಮ್ಮನ ಸೈನ್ಯಾಧಿಕಾರಿಯಾಗಿ ಕೆಲಸ ಮಾಡಿದ್ದರು. ಸ್ವತಂತ್ರ ಸಂಗ್ರಾಮದೊಳಗೆ ಹೋರಾಡಿದಂತಹ ಸಂಗೊಳ್ಳಿ ರಾಯಣ್ಣ ಸ್ಮರಣೆಯಲ್ಲಿ ಈ ಶಾಲೆ ಪ್ರಾರಂಭ ಮಾಡುವುದರಿಂದ ಮಕ್ಕಳಿಗೆ ಪ್ರೇರಣೆಯಾಗುತ್ತದೆ. ಭವಿಷ್ಯದಲ್ಲಿ ಮುಂದೆ ಭೂಸೇನೆ, ವಾಯುಸೇನೆ, ನೌಕಾ ಪಡೆ ಸೇನೆಯಲ್ಲಿ ಕೆಲಸ ಮಾಡಲು ಅನುಕೂಲವಾಗುತ್ತದೆ.
ಕರ್ನಾಟಕ ಸರ್ಕಾರ ಈಗಾಗಲೇ 100 ಎಕರೆ ಜಾಗದಲ್ಲಿ 185 ಕೋಟಿ ರೂ ಖರ್ಚು ಮಾಡಿ ಭವ್ಯವಾದ ಕಟ್ಟಡ ನಿರ್ಮಾಣದ ಕೆಲಸ ನಡೆದಿದೆ, ಅದಕ್ಕಾಗಿ ಹುಟ್ಟಿದ ಊರು ಸಂಗೊಳ್ಳಿ ಯಲ್ಲಿ ಹೋರಾಟ ಮಾಡಿದ ಕರ್ಮ ಭೂಮಿಯೊಳಗೆ ಶಾಲೆಯನ್ನು ಕರ್ನಾಟಕ ಸರ್ಕಾರ ನಡೆಸುತ್ತಿದೆ, ಅದನ್ನು ಕೇಂದ್ರ ರಕ್ಷಣಾ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಮೂಲಕ ಕರ್ನಾಟಕಕ್ಕೆ ಒಂದು ಕೊಡುಗೆ ಕೊಡಬೇಕಾಗಿ ಅದರ ಮೂಲಕ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.