ಬೆಳಗಾವಿ – ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆಯನ್ನು ಬೆನ್ನಿಗೆ ಕಟ್ಟಿಕೊಂಡು ಸಿಂಗಾರವಾಗುತ್ತಿರುವ ಬೆಳಗಾವಿ ನಗರದ ಅನೇಕ ಬಸ್ ಸ್ಟಾಪ್ ಗಳಲ್ಲಿ ಅಶೋಕ ವೃತ್ತದ ಸಿಟಿ ಬಸ್ ಸ್ಟಾಪು ಧೂಳು, ಜೇಡರ ಬಲೆಗಳಿಂದ ತುಂಬಿಕೊಂಡು ಸ್ಮಾರ್ಟ್ ಸಿಟಿ ಯೋಜನೆಯನ್ನು ಅಣಕಿಸುವಂತಿದೆ.
ಈ ಬಸ್ ಶೆಲ್ಟರ್ ನಲ್ಲಿ ಸ್ವಚ್ಛತೆಯ ಬಗ್ಗೆ ತಿಳಿವಳಿಕೆ ನೀಡುವ ಜಾಹೀರಾತು ಫಲಕಗಳಿವೆ ಆದರೆ ಅವುಗಳೇ ಸ್ವಚ್ಛವಾಗಿಲ್ಲ. ಹಗಲು ರಾತ್ರಿಯೆನ್ನದಂತೆ ಮೂಲೆಯಲ್ಲಿ ಟಿವಿಯೊಂದು ಸರ್ಕಾರದ ಯೋಜನೆಗಳ ಬಗ್ಗೆ ಉಲಿಯುತ್ತ ಇರುತ್ತದೆ. ಆದರೆ ಇದೆಲ್ಲದರ ಮೇಲೂ ಜೇಡ ಬಲೆ ಕಟ್ಟಿದೆ. ಪ್ರಯಾಣಿಕರು ಕೂಡ್ರಬೇಕಾದ ಕುರ್ಚಿಗಳ ಮೇಲೆ ಧೂಳು ತುಂಬಿಕೊಂಡಿದೆ. ಈ ಫೊಟೋ ತೆಗೆಯುವ ಒಂದು ಗಂಟೆಯ ಮೊದಲು ಬೆಳಗಾವಿಯಲ್ಲಿ ಸುಮಾರು ಹತ್ತು ನಿಮಿಷದಷ್ಟು ಮಳೆ ಸುರಿದಿದ್ದು ಅಷ್ಟಕ್ಕೇ ಬಸ್ ಶೆಲ್ಟರ್ ನಲ್ಲಿ ರಾಡಿಯಾಗಿ ಬಿಟ್ಟಿದೆ.
ಇದು ಒಂದು ಶೆಲ್ಟರ್ ನ ಕಥೆಯಾದರೆ ಇನ್ನುಳಿದವುಗಳ ಕಥೆ ಹೇಗೋ ಏನೋ. ಸ್ಮಾರ್ಟ್ ಸಿಟಿಯಲ್ಲಿ ಸ್ವಚ್ಛತೆಗೇ ಪ್ರಾಮುಖ್ಯತೆ ಇರುವಾಗ ಹೀಗೆ ಆದರೆ ಸ್ಮಾರ್ಟ್ ಸಿಟಿ ಯೋಜನೆಗೆ ಯಾವುದೇ ಅರ್ಥವಿರುವುದೇ ಇಲ್ಲ. ಮಹಾನಗರ ಪಾಲಿಕೆ ಇತ್ತ ಗಮನ ಕೊಡಬೇಕಾಗಿದೆ.
ಅಂದ ಹಾಗೆ ಈ ಸ್ಮಾರ್ಟ್ ಸಿಟಿ ಯೋಜನೆ ಮುಗಿಯುವುದೆಂದು? ಸ್ವಲ್ಪ ಮಳೆಯಾದರೂ ಬೆಳಗಾವಿ ನಗರದ ರಸ್ತೆಗಳಲ್ಲಿ ನೀರು ತುಂಬಿಕೊಂಡು ಅಧ್ವಾನವಾಗುತ್ತದೆ. ಜನಜೀವನ ಅಸ್ತವ್ಯಸ್ತವಾಗುತ್ತದೆ. ನಗರದ ಎಲ್ಲಾ ಕಡೆಗೂ ಸ್ವಚ್ಛತೆಯ ಕಡೆಗೆ ಗಮನ ಕೊಡಬೇಕಾದದ್ದು ಮಹಾನಗರಪಾಲಿಕೆಯ ಕರ್ತವ್ಯ. ಅದು ತನ್ನ ಕರ್ತವ್ಯ ಚೆನ್ನಾಗಿ ನಿಭಾಯಿಸುವುದೆಂದು ಆಶಿಸೋಣ.
ವರದಿ: ಉಮೇಶ ಬೆಳಕೂಡ