Homeಸುದ್ದಿಗಳುಅರಭಾವಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಶೂನ್ಯ : ಏಪ್ರಿಲ್ ಫೂಲ್ ಮಾಡಿದ ಶಾಸಕರು: ರಮೇಶ ಉಟಗಿ

ಅರಭಾವಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಶೂನ್ಯ : ಏಪ್ರಿಲ್ ಫೂಲ್ ಮಾಡಿದ ಶಾಸಕರು: ರಮೇಶ ಉಟಗಿ

ಮೂಡಲಗಿ – ಪಕ್ಷಾತೀತವಾಗಿ ಹೋರಾಟ ಮಾಡಿ ಮೂಡಲಗಿ ತಾಲೂಕು ಮಾಡಿಕೊಂಡರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಮುಖ್ಯವಾದ ಉಪನೋಂದಣಿ ಕಚೇರಿಯ ಬಗ್ಗೆ ಶಾಸಕರು ಕೇವಲ ಹಾರಿಕೆಯ ಉತ್ತರ ಕೊಡುತ್ತಿದ್ದಾರೆ. ಏ.೧ ರಿಂದ ಶುರುವಾಗುವುದಾಗಿ ಹೇಳಿದ್ದರು. ಆದರೆ ಎಲ್ಲ ಜನರನ್ನು ಏಪ್ರಿಲ್ ಫೂಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಮೇಶ ಉಟಗಿ ಹೇಳಿದರು.

ಮೂಡಲಗಿ ತಾಲೂಕಾ ಹೋರಾಟ ಸಮಿತಿಯ ವತಿಯಿಂದ ಗುರ್ಲಾಪೂರದ ಅತಿಥಿ ಗೃಹದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇದು ಇನ್ನೂ ಐದು ವರ್ಷ ಕಳೆದರೂ ಆಗುವುದಿಲ್ಲ ಅನಿಸುತ್ತಿದೆ. ತಾಲ್ಲೂಕು ಘೋಷಣೆಯಾಗಿ ಮೂರು ವರ್ಷ ಕಳೆದರೂ ಇನ್ನೂ ಕಚೇರಿಗಳು ಆರಂಭವಾಗಿಲ್ಲ. ಆದಷ್ಟು ಬೇಗ ನಗರದ ಈರಣ್ಣ ಗುಡಿಯ ಹತ್ತಿರ ಮಿನಿ ವಿಧಾನ ಸೌಧ ನಿರ್ಮಿಸಿದರೆ ಎಲ್ಲರಿಗೂ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಿದರು.

ಸದ್ಯ ಹೊಸ ಕಂದಾಯ ಅಧಿಕಾರಿಗಳ ಕಚೇರಿಯಾಗಬೇಕು. ತಾಲೂಕಿನಲ್ಲಿ ಕುಲಗೋಡ ಅಥವಾ ಮೂಡಲಗಿಗೆ ಇನ್ನೊಂದು ಹೋಬಳಿ ಕಚೇರಿಯಾಗಬೇಕು ಎಂದು ಉಟಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಮಾತನಾಡಿ, ಮೂಡಲಗಿಯ ನಾಲ್ಕೂ ವೃತ್ತಗಳಲ್ಲಿ ಎಷ್ಟು ಕಸ ತುಂಬಿದೆ ಎಂಬುದನ್ನು ಶಾಸಕರು, ಅಧಿಕಾರಿಗಳು ನೋಡಬೇಕು. ಇದರಿಂದ ಸ್ವಚ್ಛ ಭಾರತ ಅಭಿಯಾನ ಎಲ್ಲಿಗೆ ಎಂಬುದು ಗೊತ್ತಾಗುತ್ತದೆ. ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮೂಡಲಗಿ ತಾಲೂಕಾಗಿ ೩ ವರ್ಷವಾದರೂ ಪತ್ರಿಕೆಯಲ್ಲಿ ಮಾತ್ರ ಅಭಿವೃದ್ಧಿ ಹೊಂದುತ್ತಿದೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆರೋಪಿಸಿ,

ತಾಲೂಕಿನ ಪ್ರಗತಿ ಪರಿಶೀಲನೆಯಾಗಬೇಕು ಈ ಬಗ್ಗೆ ಒತ್ತಾಯ ಮಾಡಲು ಮುಂದಿನ ತಿಂಗಳ ೨೦ ರ ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದರು.

ಬಿ ಬಿ ಹಂದಿಗುಂದ ಮಾತನಾಡಿ, ಶಾಸಕರು ಅಭಿವೃದ್ಧಿ ಅಭಿವೃದ್ಧಿ ಎಂದು ಇಪ್ಪತ್ತು ವರ್ಷಗಳಿಂದ ಹೇಳುತ್ತಿದ್ದಾರೆ ಆದರೆ ಅವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಪಕ್ಕದ ಕ್ಷೇತ್ರಗಳನ್ನು ನೋಡಿದರೆ ಎಷ್ಟೊಂದು ಅಭಿವೃದ್ಧಿ ಕಾರ್ಯಗಳು ಜರುಗುತ್ತಿವೆ ಆದರೆ ನಮ್ಮಲ್ಲಿ ಆಗುತ್ತಿಲ್ಲ. ತಾಲೂಕಿಗೆ ಸಂಬಂಧಿಸಿದ ಕಚೇರಿಗಳು ಆಗುತ್ತಿಲ್ಲ. ಸಂಕೇಶ್ವರ ಪಟ್ಟಣ ತಾಲೂಕಲ್ಲ ಆದರೂ ಅಲ್ಲಿ ಸಬ್ ರಜಿಸ್ಟ್ರಾರ ಕಚೇರಿ ಆಗಿದೆ. ನಮ್ಮಲ್ಲಿ ಯಾಕೆ ಆಗುತ್ತಿಲ್ಲ ? ಸಾರ್ವಜನಿಕರಿಗೆ ಅನುಕೂಲ ಮಾಡುವ ಮನಸು ಶಾಸಕರಿಗೆ ಇಲ್ಲ ಎಂದರು

ವಕೀಲ ಎಮ್ ಟಿ ಪಾಟೀಲ ಮಾತನಾಡಿ, ಧರ್ಮಟ್ಟಿ ರಸ್ತೆಯನ್ನು ಎರಡು ತಿಂಗಳಲ್ಲಿ ಮುಗಿಸುವುದಾಗಿ ಹೇಳಿದ್ದರು ಆದರೆ ಒಂದು ವರ್ಷವಾಗುತ್ತ ಬಂದರೂ ಮುಗಿದಿಲ್ಲ. ಮೂಡಲಗಿಯ ಬಗ್ಗೆ ಶಾಸಕರು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಯಾಕೆಂದರೆ ಮೂಡಲಗಿ ತಾಲೂಕಾಗುವುದು ಶಾಸಕರಿಗೆ ಬೇಕಾಗಿರಲಿಲ್ಲ ಆದ್ದರಿಂದ ಮೂಡಲಗಿ ಅಭಿವೃದ್ಧಿ ಯ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಇದು ಹೋಗಬೇಕು ಮೂಡಲಗಿ ನಗರ ಸುಂದರ ನಗರವಾಗಿಸುವ ನಿಟ್ಟಿನಲ್ಲಿ ಶಾಸಕರು ಕೆಲಸ ಮಾಡಬೇಕು ಎಂದರು.

ದುಂಡಪ್ಪ ಜಾಡರ, ಅವ್ವಪ್ಪ ತುಪಡಿ ಉಪಸ್ಥಿತರಿದ್ದರು.

ಗುರು ಗಂಗನ್ನವರ ಸ್ವಾಗತಿಸಿದರು. ಲಿಂಗರಾಜ ಅಂಗಡಿ ವಂದಿಸಿದರು.

ಶಾಸಕರ ಪಿಎ ಗಳ ಹಸ್ತಕ್ಷೇಪಕ್ಕೆ ವಿರೋಧ

ಈ ಮಧ್ಯೆ ಕ್ಷೇತ್ರದಲ್ಲಿ ಯಾವುದೇ ಉದ್ಘಾಟನೆ ಕಾರ್ಯಕ್ರಮವಿದ್ದರೆ ಶಾಸಕರ ಪಿಎ ಗಳು ಮಾಡುತ್ತಾರೆ. ಶಾಸಕರು ಮಾಡಬೇಕಾದ ಕೆಲಸವನ್ನು ಪಿ ಎ ಗಳು ಮಾಡುತ್ತಿದ್ದರೆ ಇದರಿಂದ ಸರ್ಕಾರದ ಘನತೆ ಗೌರವ ಏನು ಉಳಿದಂತಾಯಿತು ಎಂಬ ಆರೋಪ ಪತ್ರಿಕಾಗೋಷ್ಠಿಯಲ್ಲಿ ಕೇಳಿಬಂದಿತು.

ಉದ್ಘಾಟನೆಯಂಥ ಕೆಲಸಗಳನ್ನು ಪಿಎ ಗಳು ಮಾಡುವುದಾದರೆ ಶಾಸಕರು ಏಕೆ ಬೇಕು….ಅವರಿಗೆ ಅವಕಾಶ ಕೊಡುವುದಾದರೆ ನಮಗೂ ಅವಕಾಶ ಕೊಡಬೇಕು ಎಂದು ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.

RELATED ARTICLES

Most Popular

error: Content is protected !!
Join WhatsApp Group