ಬೀದರ – ಮಹಾರಾಷ್ಟ್ರದಲ್ಲಿ ಉದ್ಧವ ಠಾಕ್ರೆ ಸರ್ಕಾರ ಬೀಳಿಸಿದಂತೆ ಕರ್ನಾಟಕದ ಈ ಗ್ರಾಮ ಪಂಚಾಯತಿಯೊಂದರ ಅಧ್ಯಕ್ಷರನ್ನು ಕುರ್ಚಿಯಿಂದ ಕೆಳಗಿಳಿಸಿ ಉಪಾಧ್ಯಕ್ಷರನ್ನು ಅಧ್ಯಕ್ಷರನ್ನಾಗಿ ಮಾಡಿರುವ ರೆಸಾರ್ಟ್ ರಾಜಕಾರಣದ ಇಂಟ್ರೆಸ್ಟಿಂಗ್ ಲೋಕಲ್ ಪಾಲಿಟಿಕ್ಸ್ ಜಿಲ್ಲೆಯಲ್ಲಿ ರಂಗೇರಿದೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಶಂಕರರಾವ್ ಪಾಟೀಲ್ ಎಂಬಾತರ ವಿರುದ್ಧ ಅದೇ ಪಂಚಾಯತಿಯ 10 ಜನ ಸದಸ್ಯರು ಅವಿಶ್ವಾಸ ಪ್ರಸ್ತಾಪಿಸಿ ಅಧಿಕಾರದಿಂದ ಕೆಳಗಿಳಿಸಿದ ಘಟನೆ ನಡೆದಿದೆ.
ಸರಿತಾ ವಿಜಯಕುಮಾರ್ ಸ್ವಾಮಿ ಎಂಬುವವರು ಪಂಚಾಯತಿಯ 10 ಜನ ಸದಸ್ಯರೊಂದಿಗೆ ಬೆಂಗಳೂರು, ತಿರುಪತಿ ಹೀಗೆ 15 ದಿನಗಳ ಕಾಲ ರೆಸಾರ್ಟ್ ನಲ್ಲೆ ಉಳಿದುಕೊಂಡು ಅಧ್ಯಕ್ಷ ಶಂಕರರಾವ ವಿರುದ್ಧ ಅವಿಶ್ವಾಸ ಪ್ರಸ್ತಾಪಿಸಿ ಯಶಸ್ವಿಯಾಗಿದ್ದಾರೆ.
ಒಟ್ಟು 13 ಸಂಖ್ಯಾ ಬಲದ ಪಂಚಾಯತನಲ್ಲಿ 10 ಜನ ಸದಸ್ಯರು ಹಾಲಿ ಅಧ್ಯಕ್ಷರ ವಿರುದ್ಧ ಬಂಡೆದ್ದು ಹೊಸಬರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಶಂಕರರಾವ್ ಅವರು ಸದಸ್ಯರಿಗೆ ಸ್ಪಂದಿಸದೆ ಅಹಂಕಾರದಿಂದ ಅಧಿಕಾರ ನಡೆಸುತ್ತಿದ್ದರು. ಇದರಿಂದ ಬೇಸತ್ತ ಸದಸ್ಯರು ಅವಿಶ್ವಾಸ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದಾರೆ ಎಂದು ಬಂಡಾಯ ಸದಸ್ಯ ಮೂಲದಿಂದ ತಿಳಿದುಬಂದಿದ್ದು ಈಗ ಹೊಸ ಅಧ್ಯಕ್ಷರ ಆಯ್ಕೆ ಆಗಬೇಕಾಗಿದೆ.
ಇತ್ತೀಚೆಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ನಡೆದ ರೆಸಾರ್ಟ್ ರಾಜಕಾರಣದ ಎಫೆಕ್ಟ್ ಈಗ ಗಡಿ ಜಿಲ್ಲೆಯ ಬೀದರ್ ನ ಗ್ರಾಮ ಪಂಚಾಯತಿಗಳಿಗೆ ಆವರಿಸಿಕೊಂಡಿದೆ ಎಂದು ಚರ್ಚೆ ಆಗುತ್ತಿದೆ.
ವರದಿ: ನಂದಕುಮಾರ ಕರಂಜೆ, ಬೀದರ