Homeಸುದ್ದಿಗಳುಪರಿಸರ ಸಂರಕ್ಷಿಸಿದರೆ ಮಾತ್ರ ಮಾನವ ಜನಾಂಗದ ಉಳಿವು: ಡಾ.ಭೇರ್ಯ ರಾಮಕುಮಾರ್

ಪರಿಸರ ಸಂರಕ್ಷಿಸಿದರೆ ಮಾತ್ರ ಮಾನವ ಜನಾಂಗದ ಉಳಿವು: ಡಾ.ಭೇರ್ಯ ರಾಮಕುಮಾರ್

ಮೈಸೂರು – ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯನ್ನು ತಮ್ಮ ಜೀವನದ ಗುರಿಯಾಗಿ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಮುಂಬರುವ ದಿನಗಳು ಅತ್ಯಂತ ಆತಂಕಕಾರಿಯಾಗಲಿವೆ ಎಂದು ಹಿರಿಯ ಸಾಹಿತಿ, ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ನುಡಿದರು.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಡೆಗ್ಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪರಿಸರ ಸಂರಕ್ಷಣಾ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ನಮ್ಮ ಹಿಂದಿನ ತಲೆಮಾರಿನವರು ನಮಗೆ ಸುಂದರ ಪರಿಸರ ನೀಡಿದ್ದಾರೆ. ನಾವು ಉತ್ತಮ ಪರಿಸರ ನಿರ್ಮಾಣ‌ ಮಾಡಿ ನಮ್ಮ ಮುಂದಿನ ಪೀಳಿಗೆಯವರಿಗೆ ನೀಡಬೇಕು. ಜನಸಂಖ್ಯೆ ಹೆಚ್ಚಾದಂತೆ ಕೃಷಿಗಾಗಿ, ಉರುವಲಿಗಾಗಿ, ಮನೆ ಉಪಕರಣಗಳಿಗಾಗಿ ಮರಗಳನ್ನು ನಾಶ ಮಾಡಲಾಗುತ್ತಿದೆ. ಹೆದ್ದಾರಿ ರಸ್ತೆಗಳ ಅ, ರೆಸಾರ್ಟ್ಗಳ ನಿರ್ಮಾಣಕ್ಕೆ, ಕೈಗಾರಿಕೆಗಳಿಗಾಗಿ ಪರಿಸರ ನಾಶ ಮಾಡುತ್ತಿದ್ದೇವೆ. ಇದರಿಂದಾಗಿ ಅತಿವೃಷ್ಟಿ ಉಂಟಾಗುತ್ತಿದ್ದು ಭೂಕುಸಿತ ಉಂಟಾಗುತ್ತಿದೆ. ಮನೆಗಳು, ಕೃಷಿ ಭೂಮಿ ನೀರಿನಲ್ಲಿ ಮುಳುಗುತ್ತಿವೆ . ಅಪಾರ ಸಾವು-ನೋವು, ಆಸ್ತಿ ನಷ್ಟ ಉಂಟಾಗುತ್ತಿದೆ.ಪರಿಸರ ನಾಶಕ್ಕೆ ಇದಕ್ಕೆ ಮಾನವನ ಸ್ವಾರ್ಥವೇ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಡಿನ ನಾಶದಿಂದ ಆಹಾರಕ್ಕಾಗಿ ಆನೆ,ಚಿರತೆ, ಹುಲಿ ಮೊದಲಾದ ವನ್ಯಪ್ರಾಣಿಗಳು ನಾಡಿನೊಳಕ್ಕೆ ನುಗ್ಗುತ್ತಿವೆ. ಮಾನವ ಬೆಳೆದ ಕೃಷಿ ಬೆಳೆ ನಾಶ ಮಾಡುತ್ತಿವೆ. ಹಲವು ವೇಳೆ ಮನುಷ್ಯನ ಪ್ರಾಣವನ್ನೂ ಸಹ ತೆಗೆಯುತ್ತಿವೆ. ಪರಿಸರ ನಾಶದಿಂದ ಇಂತಹ ವ್ಯಸನಕಾರಿ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಹೇಳಿದರು.

ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಕಾರ್ಯಕ್ರಮ ಎಂದು ಯಾರೂ ನಿರ್ಲಕ್ಷಿಸಬಾರದು.

ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು, ತಮ್ಮ ತಂದೆ-ತಾಯಿಗಳ ಜನ್ಮದಿನದಂದು, ಸಹೋದರ-ಸಹೋದರಿಯರ ಜನ್ಮದಿನದಂದು, ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿ ನೆಡುವ ಮೂಲಕ ಪ್ರತಿ ವರ್ಷವೂ ಒಬ್ಬ ವ್ಯಕ್ತಿ ಹತ್ತಕ್ಕೂ ಹೆಚ್ಚು ಸಸಿಗಳನ್ನು ನೆಡಬೇಕು. ಆ ಮೂಲಕ ಪರಿಸರ ಸಂರಕ್ಷಿಸಬೇಕು. ಆ ಮೂಲಕ ಭೂಮಿಯನ್ನೂ ಸಂರಕ್ಷಿಸಬೇಕು ಎಂದವರು ನುಡಿದರು.

ಯುವ ಸಾಹಿತಿ ಡೆಗ್ಗನಹಳ್ಳಿ ಆನಂದ್, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶಿವಕುಮಾರ್, ಗ್ರಾಮದ ಹಿರಿಯರಾದ ಅಪ್ಪಣ್ಣೇಗೌಡ, ತಿಪ್ಪೂರು ಗ್ರಾಮಪಂಚಾಯ್ತಿ ಉಪಾಧ್ಯಕ್ಷರಾದ ಶಿವಣ್ಣ,ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ಜೆ. ಮಹಾದೇವ್, ಸದಸ್ಯರಾದ ಶೋಭಾ ರಾಮಕೃಷ್ಣ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷರಾದ ಉಮೇಶ್, ಸದಸ್ಯರಾದ ಅಭಿಲಾಷ ಪ್ರಸಾದ್, ಶಾಲೆಯ ಮುಖ್ಯೋಪಾಧ್ಯಾಯರಾದ ದೇವಕುಮಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಅವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು.

RELATED ARTICLES

Most Popular

error: Content is protected !!
Join WhatsApp Group