ಸಿಂದಗಿ: ಲೋಕ ಕಲ್ಯಾಣಕ್ಕಾಗಿ ಸರ್ವಸಂಗ ಪರಿತ್ಯಾಗ ಮಾಡಿದ ಮಹಾಮುನಿ, ಅಹಿಂಸೆಯೇ ಪರಮ ಧರ್ಮ ಎಂದು ಸಾರಿದ 24ನೇ ಜೈನ ತೀರ್ಥಂಕರರಾದ ಭಗವಾನ್ ವರ್ಧಮಾನ್ ಮಹಾವೀರರ ಜಯಂತಿಯಂದು ಅವರ ತತ್ವ-ಚಿಂತನೆಗಳು, ಬೋಧನೆಗಳು ಸಮಾಜಕ್ಕೆ ದಾರಿ ದೀಪವಾಗಲಿ ಎಂದು ನೂರಂದೇಶ್ವರ ಶಿಕ್ಷಣ ಸಂಸ್ಥೆಯ ಶಿಕ್ಷಕ ಪದ್ಮರಾಜ ಪಾಟೀಲ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದ ನೂತನ ಜೈನ್ ಬಸದಿಯಲ್ಲಿ ಏರ್ಪಡಿಸಿದ ಮಹಾವೀರ ಭಗವಾನರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೈನ ಧರ್ಮದ ಹಬ್ಬಗಳಲ್ಲಿ ಮಹಾವೀರ ಜಯಂತಿ ಮುಖ್ಯವಾದುದು, ಇವರು ಕೊನೆಯ ತೀರ್ಥಂಕರರಾದ ಭಗವಾನ 1008 ಮಹಾವೀರ ಸ್ವಾಮಿಗಳ 2638 ನೇ ಜನ್ಮದಿನವನ್ನು ಆಚರಿಸಲು ಸಂತೋಷವಾಗುತ್ತಿದೆ, ಈ ದಿನದಂದು ಗುಜರಾತ್ ರಾಜ್ಯದ ಗೀರ್ನಾರ್ ಮತ್ತು ಪಲಿತಾನಾ ದಲ್ಲಿರುವ ಬಸದಿಗಳಿಗೆ ದೇಶದ ಎಲ್ಲೆಡೆಗಳಿಂದ ಭಕ್ತರು ಬಂದು ಆಶೀರ್ವಾದ ಪಡೆದು ಹೋಗುತ್ತಾರೆ, ಕಿತ್ತೂರು ಕರ್ನಾಟಕ ಭಾಗದ ಭಕ್ತರು ಮೋರಟಗಿ ಗ್ರಾಮಕ್ಕೆ ಬಂದು ತಮ್ಮ ಗ್ರಾಮದ ನೂತನ ಬಸದಿ ನೋಡುವಂತಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಭಾರತಗೌಡ ಪಾಟೀಲ, ಜೆ.ಬಿ.ಧನಪಾಲ, ಮನೋಹರಗೌಡ ಪಾಟೀಲ, ಶಿವನಗೌಡ ಪಾಟೀಲ, ಭೀಮನಗೌಡ ಪಾಟೀಲ, ಅಭಿಗೌಡ ಪಾಟೀಲ, ನೇಮಿನಾಥ ಪಾಟೀಲ, ಬಾಹುಬಲಿ ಚೌದ್ರಿ ಸೇರಿ ಇತರರು ಭಾಗವಹಿಸಿದ್ದರು.